ಬಾಗಲಕೋಟೆ: ಕೆರೂರು ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಬಾಗಲಕೋಟೆಯ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ, ಬಸವಣ್ಣನವರ ವಚನ ಬೋಧಿಸುವ ಮೂಲಕ ಬುದ್ಧಿ ಮಾತು ಹೇಳಿದರು.
ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಅಂತ ಹೇಳಿದ್ದಾರೆ. ಆದ್ರೆ ಈಗ ಅನೇಕ ಮಂದಿ ಬಸವಣ್ಣನವರ ತತ್ವಾದರ್ಶಗಳನ್ನ ಮರೆತುಬಿಟ್ಟಿದ್ದಾರೆ. ಹೀಗೆಲ್ಲಾ ಗಲಾಟೆ, ಗುಂಪು ಘರ್ಷಣೆ ಮಾಡುವುದು ತಪ್ಪು. ಶಾಂತಿಯಿಂದ ಇರಬೇಕೆಂದು ಹೇಳಿದರು.
ಗಾಯಾಳು ಅರುಣ್ ಎಂಬಾತನಿಗೆ ಮದುವೆ ಆಗಿದೆಯಾ? ಎಂದು ಪ್ರಶ್ನಿಸಿದ ಅಲೋಕ್ ಕುಮಾರ್, ಮದುವೆ ಆಗಬೇಕ್ರಿ, ಮದುವೆ ಆದ್ರೆ ಹೀಗಾಗುವುದಿಲ್ಲ. ವಿವಾಹದ ಬಳಿಕ ಜವಾಬ್ದಾರಿ ಬರುತ್ತದೆ. ಬೇಗ ಮದುವೆ ಆಗಿ, ಇಲ್ಲವಾದ್ರೆ ನಮ್ಮ ಪೊಲೀಸರಿಗೆ ಹೇಳ್ತೀವಿ, ಅವರೇ ಮಾಡ್ತಾರೆ ಎಂದು ಹಾಸ್ಯಚಟಾಕಿ ಮಾಡಿದರು.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಎಡಿಜಿಪಿ ಅಲೋಕ್ ಕುಮಾರ್ ಇದೇ ವೇಳೆ ಗೋಪಾಲ ಎಂಬಾತನ ಯೋಗಕ್ಷೇಮ ವಿಚಾರಿಸಲು ಬಂದಾಗ ಆತನ ತಾಯಿ ಜಯಶ್ರೀ ಕಣ್ಣೀರಾಕಿದರು. ನಾವು ಬಡವರು, ಘಟನೆ ನಡೆದಾಗಿನಿಂದ ಆಸ್ಪತ್ರೆಯಲ್ಲೇ ಇದ್ದೇವೆ. ಇದ್ದ ಮೂರು ಮಕ್ಕಳಲ್ಲಿ ಒಬ್ಬ ಹಾಸಿಗೆ ಹಿಡಿದಿದ್ದಾನೆ. ಸಾಲ ಮಾಡಿ ಹಣ ತಂದು ಚಿಕಿತ್ಸೆ ಕೊಡಿಸುತ್ತಿದ್ದೇವೆ. ಆರೋಪಿಗಳನ್ನ ಬಂಧಿಸಿದ್ದಾರೋ, ಇಲ್ಲವೋ ನಮಗೆ ಗೊತ್ತಿಲ್ಲ ಎಂದು ಅಧಿಕಾರಿಗಳ ಮುಂದೆ ನೋವು ತೋಡಿಕೊಂಡರು. ಬಳಿಕ ಎಡಿಜಿಪಿ ಸಮಾಧಾನ ಪಡಿಸಿ, ಆರೋಪಿಗಳನ್ನ ಅರೆಸ್ಟ್ ಮಾಡುತ್ತಿದ್ದೇವೆ, ಸಮಾಧಾನದಿಂದ ಇರಿ ಎಂದರು.
ಬಳಿಕ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಕೆರೂರು ಘಟನೆಗೆ ಸಂಬಂಧಿಸಿದಂತೆ 26 ಜನರನ್ನ ಬಂಧಿಸಲಾಗಿದೆ. ಆರೋಪಿ ಯಾಸೀನ್ ಪೆಂಡಾರಿ ಬಂಧನಕ್ಕೆ ಬಲೆ ಬೀಸಲಾಗಿದೆ. ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಎರಡೂ ಗುಂಪಿನ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ವಿಜಯಪುರ: ಪಾಲ್ತುಗಿರಿ ಮಾಡಿದರೆ ಕಠಿಣ ಕ್ರಮ ಎಂದು ಅಲೋಕ್ ಕುಮಾರ್ ವಾರ್ನಿಂಗ್