ಬಾಗಲಕೋಟೆ: ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದುಕೊಂಡ ಮಹಿಳೆಯೊಬ್ಬರು ಸಮಗ್ರ ಕೃಷಿ ಮಾಡಿ ಉತ್ತಮ ಬದುಕು ಸಾಗಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ರೈತ ಮಹಿಳೆಯೇ ಹೀಗೆ ಕೃಷಿಯಲ್ಲಿ ಅಭಿವೃದ್ಧಿ ಕಂಡುಕೊಂಡವರು.
ಕೃಷಿಯಲ್ಲಿ ತೊಡಗಿಸಿಕೊಂಡ ಯಶಸ್ಸಾದ ರೈತ ಮಹಿಳೆ ಗ್ರಾಮದ ಸುನೀತಾ ಮನೋಹರ ಮೇಟಿ ಯಾವುದೇ ಪುರುಷರಿಗೆ ತಾವೇನು ಕಮ್ಮಿ ಇಲ್ಲ ಎಂಬಂತೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತಿದ್ದಾರೆ. ಮೊದಲು ಹೊಲಿಗೆ ಯಂತ್ರ ಇಟ್ಟುಕೊಂಡು ಉಪ ಜೀವನ ಸಾಗಿಸುತ್ತಿದ್ದ ಈ ಮಹಿಳೆ ಪತಿ ಕುಡಿತದ ಚಟದಿಂದ ಕೆಲ ಜಮೀನು ಮಾರಾಟ ಮಾಡಿದ್ದರು. ಇನ್ನು ಗಂಡ ಮೃತಪಟ್ಟ ಬಳಿಕ ಹೊಲಿಗೆ ಯಂತ್ರದ ಕೆಲಸ ಬಿಟ್ಟು, ಸ್ವತಃ ತಾವೇ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.
ಸುನೀತಾ ತಮ್ಮ ಇಬ್ಬರ ಮಕ್ಕಳಿಗೆ ಶಿಕ್ಷಣ ಕೂಡಿಸುವ ಜೊತೆಗೆ ಐದು ಎಕರೆ ಜಮೀನಿನಲ್ಲಿ ಆರು ವರ್ಷದಿಂದಲೂ ಸಾವಯವ ಕೃಷಿ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಕೃಷಿಗೆ ಸಂಬಂಧಪಟ್ಟ ಯಾವುದೇ ಕಾರ್ಯಾಗಾರ ಅಥವಾ ಮೇಳ ಇದ್ದಲ್ಲಿ ಹೋಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ತೋಟಗಾರಿಕೆ ಬೆಳೆ, ತರಕಾರಿ ಬೆಳೆ ಹಾಗೂ ಕಬ್ಬು ಬೆಳೆ ಸೇರಿದಂತೆ ಔಷಧೀಯ ಸಸಿಗಳನ್ನು ಬೆಳೆಸಿಕೊಂಡಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಮಹಾರಾಷ್ಟ್ರ ರಾಜ್ಯಕ್ಕೆ ಹೋಗಿ ಅಲ್ಲಿನ ಕಾರ್ಯಾಗಾರದಲ್ಲಿ ಭಾಗವಹಿಸಿ, ನೂತನವಾಗಿ ಸಸಿಗಳನ್ನು ಬೆಳೆಸುವ ಪದ್ದತಿ ಹಾಗೂ ಹನಿ ನೀರಾವರಿಯನ್ನು ಹೊಸ ಬಗೆಯಲ್ಲಿ ಅಳವಡಿಸಿಕೊಳ್ಳುವ ಬಗೆ ಅರಿತುಕೊಂಡು ಬಂದು ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿಯನ್ನೇ ಅವಲಂಬಿಸಿದ್ದರಿಂದ ಗೋವುಗಳ ಸಾಕಣೆ ಮಾಡಿದ್ದಾರೆ. ಇದರಿಂದ ಬರುವ ಗಂಜಲು ಒಂದೆಡೆ ಶೇಖರಣೆ ಮಾಡಿ ಪೈಪಲೈನ್ ಮೂಲಕ ಜಮೀನುಗಳಿಗೆ ಹರಿಸುತ್ತಾರೆ.
ಸಾವಯವ ಕೃಷಿಗೆ ಬೇಕಾಗುವ ಎರೆಹುಳು ಗೊಬ್ಬರ ಸಹ ಉತ್ಪಾದನೆ ಮಾಡ್ತಿದ್ದಾರೆ ರೈತ ಮಹಿಳೆ ಸುನೀತಾ. ತಮ್ಮೆಲ್ಲ ಜಮೀನುಗಳಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ವಿವಿಧ ಬೆಳೆಗಳ ಜೊತೆಗೆ ಅರಿಶಿನ ಬೆಳೆ ಸಹ ಬೆಳೆದಿದ್ದಾರೆ. ಕುಂಬಳ ಕಾಯಿ ಬೆಳೆದು ಪ್ರತಿ ಕೆಜಿಗೆ ಐದು ರೂಪಾಯಿಯಂತೆ ಬಾಂಬೆ ಮಾರುಕಟ್ಟೆಗೆ ಕಳುಹಿಸುತ್ತಾರೆ.
ಸುನೀತಾ ರೈತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬಗ್ಗೆಯೂ ಹೆಚ್ಚಿನ ಜ್ಞಾನವನ್ನ ಸಂಪಾದಿಸಿದ್ದಾರೆ. ಮೌಲ್ಯವರ್ಧಕದಿಂದ ಹೇಗೆ ಬೆಳೆಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಬೇಕು ಎಂದು ಮಾಹಿತಿ ತಂತ್ರಜ್ಞಾನದಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಗಿ ಬೆಳೆದರೆ, ರಾಗಿ ಹಿಟ್ಟು ಮಾಡಿ ಮಾರಾಟ ಮಾಡುವುದು. ಅರಿಶಿಣ ಬೆಳೆದರೆ ಅರಿಶಿಣ ಪೌಡರ್ ಮಾಡಿ ಮಾರಾಟ ಮಾಡುತ್ತಾರೆ. ಇದಕ್ಕಾಗಿ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಬೀಸುವ ಸೋಲಾರ್ ಚಾಲಿತ ಯಂತ್ರವನ್ನು ತಂದಿದ್ದಾರೆ. ಈ ಯಂತ್ರದ ಮೂಲಕವೇ ರಾಗಿ ಹಿಟ್ಟು ಮಾಡಿಕೊಳ್ಳುವುದು ಹಾಗೂ ಅರಿಶಿನ್ ಪೌಡರ್ ಮಾಡುವ ಜೊತೆಗೆ ಇತರ ಕಾಳು ಕಡಿ ಹಿಟ್ಟು ಮಾಡಿ, ಮಾರುಕಟ್ಟೆಗೆ ಕಳುಹಿಸಿ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದಾರೆ ಸುನೀತಾ.
ಶೂನ್ಯ ಬಂಡವಾಳದ ಸಾವಯವ ಕೃಷಿಯಿಂದಾಗಿ ಬಯೋ ಗ್ಯಾಸ್ ಸಹ ಮಾಡಿಕೊಂಡು ಗ್ಯಾಸ್ ಅನ್ನು ಮನೆ ಬಳಕೆಗೆ ಮಾಡಿಕೊಳ್ಳುತ್ತಾರೆ. ಒಂದು ಎಕರೆ ಹೆಸರು, ಅರ್ಧ ಎಕರೆ ರಾಗಿ, ಒಂದು ಎಕರೆ ಅರಿಶಿಣ, ಒಂದು ಎಕರೆ ಕಬ್ಬು, ಅರ್ಧ ಎಕರೆ ತರಕಾರಿ, ಅರ್ಧ ಎಕರೆ ಬಾಳೆ, ಈಗ ಮೂವತ್ತು ಗುಂಟೆ ಜಮೀನು ಖಾಲಿ ಇದ್ದು, ಅದರಲ್ಲಿ ಎಳ್ಳು ಬೆಳೆಸುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ತಮ್ಮ ಐದು ಎಕರೆ ಪ್ರದೇಶ ಎಲ್ಲವೂ ಸಾವಯವ ಕೃಷಿ ಮಾಡಿಕೊಂಡಿದ್ದಾರೆ ಸುನೀತಾ.
ಸುನೀತಾ ತಮ್ಮ ಮಾವನ ಮೂರು ಎಕರೆ ಪ್ರದೇಶದಲ್ಲೂ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಕೃಷಿ ಮಾಡುತ್ತಿದ್ದಾರೆ. ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಆಯೋಜನೆ ಮಾಡಿದ ರೈತ ಸಂಶೋಧನೆಯ ಪ್ರವಾಸಕ್ಕೆ ಹೋದ ಸಮಯದಲ್ಲಿ ಕೆಲವೂಂದು ಮಾಹಿತಿ ತಿಳಿದುಕೊಂಡು ಬಂದಿದ್ದಾರೆ. ಪ್ರವಾಸ ಸಮಯದಲ್ಲಿ ಕಲಿತ ಮಾದರಿಯಲ್ಲಿಯೇ ಕೀಟ ನಾಶಕ್ಕೆ ಮುಂದಾಗಿದ್ದಾರೆ. ಇದರಿಂದ ಜಮೀನುಗಳಲ್ಲಿ ಬೆಳೆದ ಬೆಳೆಗೆ ಕೀಟ ಬಾಧೆ ತಾಗದೇ ಸಮೃದ್ಧ ಬೆಳೆಗೆ ಅನುಕೂಲಕರವಾಗಲಿದೆ ಎಂದು ರೈತ ಮಹಿಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೃಷಿಯ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಆಸಕ್ತಿ ಹಾಗೂ ಮಾಹಿತಿ ತಂತ್ರಜ್ಞಾನದಿಂದ ನೂತನ ವಿಚಾರಗಳನ್ನು ಪಡೆದುಕೊಂಡು ಅದೇ ಮಾದರಿಯಲ್ಲಿ ಅಳವಡಿಸಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಈ ರೈತ ಮಹಿಳೆ ಸುನೀತಾ.