ಕರ್ನಾಟಕ

karnataka

By

Published : Oct 27, 2021, 4:52 PM IST

ETV Bharat / sports

ಟಿವಿ ಚರ್ಚೆಯಲ್ಲಿ ಪಾಕ್ ವೇಗಿ ಅಖ್ತರ್​ಗೆ ಅವಮಾನ.. ಶೋ ಮಧ್ಯದಲ್ಲೇ ಹೊರ ನಡೆದ ಮಾಜಿ ಕ್ರಿಕೆಟಿಗ..

ನನ್ನ ಹೇಳಿಕೆಗೆ ಸಹಮತ ನೀಡುತ್ತಿಲ್ಲ ಎಂದು ಅರಿತ ನಿರೂಪಕ ಶೋಯೆಬ್ ಹೆಚ್ಚು ಸ್ಮಾರ್ಟ್​ ಆಗಿ ವರ್ತಿಸುತ್ತಿದ್ದಾರೆ. ಅವರು ಅನುಚಿತ ವರ್ತನೆ ತೋರುತಿದ್ದಾರೆ. ಅವರು ಬೇಕಾದರೆ ಈ ಶೋನಿಂದ ಹೊರ ಹೋಗಬಹುದು ಎಂದು ಹೇಳಿ ತಕ್ಷಣ ವಿರಾಮ ತೆಗೆದುಕೊಂಡರು..

shoaib-akhtar
ಶೋಯೆಬ್ ಅಖ್ತರ್

ಕರಾಚಿ (ಪಾಕಿಸ್ತಾನ): ನಿನ್ನೆ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡ ಭರ್ಜರಿ ಜಯದಾಖಲಿಸಿದೆ. ಈ ನಡುವೆ ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ಖಾಸಗಿ ಟಿವಿ ಶೋವೊಂದರಲ್ಲಿ ಭಾಗಿಯಾಗಿದ್ದ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್ ಶೋ ಮಧ್ಯದಲ್ಲೇ ಹೊರ ನಡೆದಿದ್ದು ಚರ್ಚೆಗೆ ಕಾರಣವಾಗಿದೆ.

ಖಾಸಗಿ ವಾಹಿನಿ ಪಿಟಿವಿಯ ಸ್ಫೋರ್ಟ್​ ಅನಾಲಿಸಿಸ್​​ನಲ್ಲಿ ಭಾಗಿಯಾಗಿದ್ದ ಶೋಯೆಬ್ ಅವರನ್ನು ಕಾರ್ಯಕ್ರಮದ ನಿರೂಪಕ ಹೊರ ನಡೆಯಲು ಸೂಚಿಸಿದ್ದರು. ಅವಮಾನಕ್ಕೊಳಗಾಗಿ ಟಾಕ್​​ ಶೋ ಅನಾಲಿಸಿಸ್​ಗೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ವಿಪರ್ಯಾಸವೆಂದರೆ ಇದೆಲ್ಲಾ ಪ್ರಹಸನ ಕಾರ್ಯಕ್ರಮ ಪ್ರಸಾರದ ವೇಳೆಯೆ ನಡೆದಿದ್ದು, ಟಿವಿ ಶೋ ನಿರೂಪಕನ ನಡೆಗೆ ಆಕ್ರೋಶ ಕೇಳಿ ಬಂದಿದೆ.

ಶೋನಿಂದ ಅಖ್ತರ್ ಹೊರನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮ ನಿರೂಪಕ ನ್ಯೂಮನ್ ನಯಾಜ್ ಹಾಗೂ ಅಖ್ತರ್ ನಡುವಿನ ಸಂಭಾಷಣೆಯ ವಿಡಿಯೋ ಹರಿದಾಡುತ್ತಿದೆ.

ಈ ಬಗ್ಗೆ ಸ್ವತಃ ಶೋಯೆಬ್ ಅಖ್ತರ್ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಕ್ಲಿಪ್‌ಗಳು ಪ್ರಸಾರವಾಗುತ್ತಿವೆ. ಹಾಗಾಗಿ, ನಾನು ಸ್ಪಷ್ಟನೆ ನೀಡಬೇಕೆಂದು ಭಾವಿಸಿದೆ. ಡಾ ನ್ಯೂಮನ್ ಅಸಭ್ಯವಾಗಿ ವರ್ತಿಸಿ ಕಾರ್ಯಕ್ರಮದಿಂದ ಹೊರ ಹೋಗುವಂತೆ ನನ್ನನ್ನು ಕೇಳಿದರು ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.

ಸರ್ ವಿವಿಯನ್ ರಿಚರ್ಡ್ಸ್ ಮತ್ತು ಡೇವಿಡ್ ಗೋವರ್ ಅವರಂತಹ ದಂತಕಥೆಗಳು ಸೆಟ್‌ನಲ್ಲಿದ್ದ ವೇಳೆ ಜೊತೆಗೆ ಲಕ್ಷಾಂತರ ಜನರು ವೀಕ್ಷಿಸುತ್ತಿರುವಾಗ ಈ ಘಟನೆ ನನಗೆ ಮುಜುಗರ ತಂದಿತು. ಆದರೆ, ನ್ಯೂಮನ್ ಕೊನೆಗೆ ಕ್ಷಮೆಯಾಚಿಸುತ್ತಾರೆ ಎಂದುಕೊಂಡೆ. ಆದರೆ, ಹಾಗಾಗಲಿಲ್ಲ. ಇದರಿಂದ ನಾನು ಶೋನಿಂದ ಹೊರ ನಡೆದೆ ಎಂದಿದ್ದಾರೆ.

ಅಸಲಿಗೆ ನಡೆದಿದ್ದೇನು?:ನ್ಯೂಜಿಲೆಂಡ್ ನಡುವಿನ ಪಂದ್ಯದ ನಂತರ ಖಾಸಗಿ ಮಾಧ್ಯಮದ ಚರ್ಚೆಯಲ್ಲಿ ಶೋಯೆಬ್ ಅಖ್ತರ್​​​ ಭಾಗಿಯಾಗಿದ್ದರು. ಎಲ್ಲಾ ಕಾರ್ಯಕ್ರಮದಂತೆಯೇ ಇದು ಸಹ ಸಾಮಾನ್ಯವಾಗಿಯೇ ನಡೆಯುತ್ತಿತ್ತು.

ಆದರೆ, ಪಾಕ್ ವೇಗಿ ಹ್ಯಾರಿಸ್ ರೌಫ್​​​ ಪರವಾಗಿ ಅಖ್ತರ್ ಮಾತನಾಡುತ್ತಾ ಪಾಕಿಸ್ತಾನ್ ಸೂಪರ್ ಲೀಗ್ ಫ್ರಾಂಚೈಸಿ ಲಾಹೋರ್ ಕ್ಲಾಂಡರ್ಸ್ ಮತ್ತು ಅದರ ಕೋಚ್ ಕುರಿತು ಮಾತನಾಡುತ್ತಿದ್ದಂತೆ ಸಮಸ್ಯೆ ಆರಂಭಗೊಂಡಿತ್ತು.

ಅಖ್ತರ್ ಮಾತನಾಡುತ್ತಾ, ಈ ಎಲ್ಲಾ ಕ್ರೆಡಿಟ್​ಗಳು ಲಾಹೋರ್ ಕ್ಲಾಂಡರ್ಸ್​ಗೆ ಸಲ್ಲಬೇಕು. ಹ್ಯಾರಿಸ್ ರೌಫ್​​ನಂತಹ ಆಟಗಾರನನ್ನು ನೀಡಿದ್ದಾರೆ ಎಂದಾಗ ನಿರೂಪಕ ನ್ಯೂಮನ್ ಅಡ್ಡಿಪಡಿಸಿದರು.

ನನ್ನ ಹೇಳಿಕೆಗೆ ಸಹಮತ ನೀಡುತ್ತಿಲ್ಲ ಎಂದು ಅರಿತ ನಿರೂಪಕ ಶೋಯೆಬ್ ಹೆಚ್ಚು ಸ್ಮಾರ್ಟ್​ ಆಗಿ ವರ್ತಿಸುತ್ತಿದ್ದಾರೆ. ಅವರು ಅನುಚಿತ ವರ್ತನೆ ತೋರುತಿದ್ದಾರೆ. ಅವರು ಬೇಕಾದರೆ ಈ ಶೋನಿಂದ ಹೊರ ಹೋಗಬಹುದು ಎಂದು ಹೇಳಿ ತಕ್ಷಣ ವಿರಾಮ ತೆಗೆದುಕೊಂಡರು.

ವಿರಾಮದ ನಂತರ ಕಾರ್ಯಕ್ರಮ ಆರಂಭಗೊಂಡಾಗ ನಿರೂಪಕರಿಗೆ ಇತರರು ಕ್ಷಮೆಯಾಚಿಸಲು ಕೇಳಿದರು. ಆದರೆ, ಅವರು ಹಾಗೆ ಮಾಡದೆ ಚರ್ಚೆ ಮುಂದುವರಿಸಿದರು. ಇದರಿಂದ ಇನ್ನಷ್ಟು ಅವಮಾನಕ್ಕೆ ಒಳಗಾದ ಅಖ್ತರ್ ಕಾರ್ಯಕ್ರಮದಿಂದ ಹೊರ ನಡೆಯುವುದಾಗಿ ತಿಳಿಸಿ ಅಲ್ಲಿಂದ ಎದ್ದು ನಡೆದರು.

ABOUT THE AUTHOR

...view details