ಕರ್ನಾಟಕ

karnataka

ಪ್ರೋ ಕಬಡ್ಡಿ ಲೀಗ್‌: ಜೈಪುರ ಪಿಂಕ್‌ ಪ್ಯಾಂಥರ್ಸ್‌, ಪುಣೇರಿ ಪಲ್ಟನ್‌ ತಂಡಗಳಿಗೆ ಜಯ

By

Published : Oct 19, 2022, 7:03 AM IST

ಅರ್ಜುನ್‌ ದೇಶ್ವಾಲ್‌ (10) ಅವರ ಸೂಪರ್‌ ಟೆನ್‌ ಸಾಧನೆಯೊಂದಿಗೆ ಸರ್ವಾಂಗೀಣ ಪ್ರದರ್ಶನ ತೋರಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 39-24 ಅಂತರದಲ್ಲಿ ಭರ್ಜರಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

pro-kabaddi-league-jaipur-pink-panthers-puneri-paltan-secured-win
ಪ್ರೋ ಕಬಡ್ಡಿ ಲೀಗ್‌: ಜೈಪುರ ಪಿಂಕ್‌ ಪ್ಯಾಂಥರ್ಸ್‌, ಪುಣೇರಿ ಪಲ್ಟನ್‌ ತಂಡಗಳಿಗೆ ಜಯ

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಪುಣೇರಿ ಪಲ್ಟನ್‌ ತಂಡಗಳು ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಮುನ್ನೆಡೆ ಸಾಧಿಸಿವೆ.

ಅತ್ಯಂತ ರೋಚಕವಾಗಿದ್ದ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವು ತೆಲುಗು ಟೈಟಾನ್ಸ್‌ ವಿರುದ್ಧ 26-25 ಅಂತರದಲ್ಲಿ ಜಯಭೇರಿ ಬಾರಿಸಿತು. ಮೋಹಿತ್‌ ಗೊಯತ್‌ ಗಳಿಸಿದ ಸೂಪರ್‌ 10 ನೆರವಿನಿಂದ ಜಯ ಗಳಿಸಿದ ಪುಣೇರಿ ಪಲ್ಟನ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಪುಣೇರಿ ಪಲ್ಟನ್‌ - ತೆಲುಗು ಟೈಟಾನ್ಸ್‌ ಹಣಾಹಣಿ

ಪ್ರಥಮಾರ್ಧದಲ್ಲಿ ಪುಣೇರಿ ಪಲ್ಟನ್‌ ತಂಡವು ತೆಲುಗು ಟೈಟಾನ್ಸ್‌ ವಿರುದ್ಧ 11-9ರಲ್ಲಿ ಮುನ್ನಡೆಯಲ್ಲಿತ್ತು. ಮೋಹಿತ್‌ ಗೊಯತ್‌ ರೈಡಿಂಗ್‌ನಲ್ಲಿ 4 ಅಂಕ ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಮೊಹಮ್ಮದ್‌ ನಬೀಬಕ್ಷ್‌ ರೈಡಿಂಗ್‌ನಲ್ಲಿ 3 ಅಂಕ ತಂದರು. ತೆಲುಗು ಟೈಟಾನ್ಸ್‌ ಪರ ಸಿದ್ಧಾರ್ಥ್‌ ದೇಸಾಯಿ 3 ಅಂಕ ಕಬಳಿಸಿದರು. ಪುಣೇರಿ ಪಲ್ಟನ್‌ ಪ್ರಮಾದದಿಂದ ಟೈಟಾನ್ಸ್‌ಗೆ ಎರಡು ಅಂಕ ಸಿಕ್ಕವು.

ಜೈಪುರಕ್ಕೆ ಜಯ:ಅರ್ಜುನ್‌ ದೇಶ್ವಾಲ್‌ (10) ಅವರ ಸೂಪರ್‌ ಟೆನ್‌ ಸಾಧನೆಯೊಂದಿಗೆ ಸರ್ವಾಂಗೀಣ ಪ್ರದರ್ಶನ ತೋರಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 39-24 ಅಂತರದಲ್ಲಿ ಭರ್ಜರಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಬೆಂಗಾಲ್‌ ತಂಡದ ನಾಯಕ ಮಣಿಂದರ್‌ ಸಿಂಗ್​ರನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದು, ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ ವಿ ಅಜಿತ್‌ ರೈಡಿಂಗ್‌ನಲ್ಲಿ ಮತ್ತು ಅಂಕುಶ್‌ ಟ್ಯಾಕಲ್‌ನಲ್ಲಿ ತಲಾ 5 ಅಂಕ ಪಡೆದು ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಜೈಪುರ ಪಿಂಕ್‌ ಪ್ಯಾಂಥರ್ಸ್‌- ಬೆಂಗಾಲ್‌ ವ್ಯಾರಿಯರ್ಸ್‌ ಫೈಟ್​​

ಬೆಂಗಾಲ್‌ ವಾರಿಯರ್ಸ್‌ ಪರ ರೈಡಿಂಗ್‌ನಲ್ಲಿ ಶ್ರೀಕಾಂತ್‌ ಜಾದವ್‌ (6) ಹಾಗೂ ಗಿರೀಶ್‌ ಮಾರುತಿ(3) ಟ್ಯಾಕಲ್‌ನಲ್ಲಿ ಮಿಂಚಿದರೂ ತಂಡವನ್ನು ಜಯದ ದಡ ತಲುಪಿಸುವಲ್ಲಿ ವಿಫಲರಾದರು. ಪ್ರಥಮಾರ್ಧದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ 20-12 ಅಂತರದಲ್ಲಿ ಬೆಂಗಾಲ್‌ ವ್ಯಾರಿಯರ್ಸ್‌ ವಿರುದ್ಧ ಮೇಲುಗೈ ಸಾಧಿಸಿತ್ತು. ರೈಡಿಂಗ್‌ನಲ್ಲಿ 11, ಟ್ಯಾಕಲ್‌ನಲ್ಲಿ 6 ಮತ್ತು ಆಲೌಟ್‌ ಮೂಲಕ 2 ಅಂಕ ಗಳಿಸಿದ ಪಂದ್ಯ ಗೆಲ್ಲಲು ಅಗತ್ಯವಿರುವ ವೇದಿಕೆ ನಿರ್ಮಿಸಿಕೊಂಡಿತು. ಬಲಿಷ್ಠ ಬೆಂಗಾಲ್‌ ವಾರಿಯರ್ಸ್‌ ಮೂರು ಪಂದ್ಯಗಳಲ್ಲಿ ನಿರಂತರ ಜಯ ಗಳಿಸಿದ ನಂತರ ಹಿಂದಿನ ಪಂದ್ಯದಲ್ಲಿಯೂ ಸೋಲನುಭವಿಸಿತ್ತು.

ಆದರೆ ಈ ಪಂದ್ಯದಲ್ಲಿ ತನ್ನ ನೈಜ ಸಾಮರ್ಥ್ಯ ತೋರಿಸುವಲ್ಲಿ ವಿಫಲವಾಯಿತು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿದಿತ್ತು. ಬೆಂಗಾಲ್‌ ವಾರಿಯರ್ಸ್‌ ಪರ ನಾಯಕ ಮಣಿಂದರ್‌ ಸಿಂಗ್‌ ರೈಡಿಂಗ್‌ನಲ್ಲಿ ವೈಫಲ್ಯ ಕಂಡಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ:2023ರ ಏಷ್ಯಾಕಪ್‌ : ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲ್ಲ- ಜಯ್​ ಶಾ

ABOUT THE AUTHOR

...view details