ಕರ್ನಾಟಕ

karnataka

ಮೇಜರ್ ಧ್ಯಾನ್ ಚಂದ್ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ, ಕ್ರೀಡಾ ಸಚಿವ ಅನುರಾಗ್​ ಠಾಕೂರ್​

By ETV Bharat Karnataka Team

Published : Aug 29, 2023, 12:38 PM IST

National Sports Day: ಧ್ಯಾನ್ ಚಂದ್ ಅವರ 118 ನೇ ಜನ್ಮ ವಾರ್ಷಿಕೋತ್ಸವ ಮತ್ತು 12ನೇ ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತ ಪ್ರಧಾನಿ ಮೋದಿ ಮತ್ತು ಕ್ರೀಡಾಸಚಿವ ಅನುರಾಗ್​ ಠಾಕೂರ್​ ಟ್ವೀಟ್​ನಲ್ಲಿ ಶುಭಾಶಯ ತಿಳಿಸಿದ್ದಾರೆ.

National Sports Day
National Sports Day

ನವದೆಹಲಿ: ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ 118 ನೇ ಜನ್ಮ ವಾರ್ಷಿಕೋತ್ಸವ ಮತ್ತು 12 ನೇ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನದ ವಿಶೇಷ ದಿನದಂದು ಭಾರತೀಯ ಕ್ರೀಡಾಪಟುಗಳಿಗೆ ತಮ್ಮ ಎಕ್ಸ್ (ಹಿಂದಿನ ಟ್ವಿಟರ್)ಖಾತೆಯಲ್ಲಿ ಮೋದಿ ಶುಭ ಹಾರೈಸಿದ್ದಾರೆ. "ರಾಷ್ಟ್ರೀಯ ಕ್ರೀಡಾ ದಿನದಂದು, ಎಲ್ಲ ಕ್ರೀಡಾಪಟುಗಳಿಗೆ ನನ್ನ ಶುಭಾಶಯಗಳು. ದೇಶಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಭಾರತವು ಹೆಮ್ಮೆಪಡುತ್ತದೆ. ಮೇಜರ್ ಧ್ಯಾನ್ ಚಂದ್ ಜಿ ಅವರ ಜನ್ಮದಿನದಂದು ನಮನ ಸಲ್ಲಿಸುತ್ತೇನೆ" ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಕ್ರೀಡಾಸಚಿವ ಅನುರಾಗ್​ ಠಾಕೂರ್​ ದೆಹಲಿಯ ಜವಹಾರ್​ ಲಾಲ್​ ನೆಹರು ಕ್ರೀಡಾಂಗಣದ ಮುಂಬಾಗದಲ್ಲಿರುವ ಧ್ಯಾನ್ ಚಂದ್​ ಪ್ರತಿಮೆಗೆ ನಮನ ಸಲ್ಲಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು "ದೆಹಲಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ #ರಾಷ್ಟ್ರೀಯ ಕ್ರೀಡಾ ದಿನದಂದು ಭಾರತೀಯ ಹಾಕಿಯ ಮಾಂತ್ರಿಕ, ಮೇಜರ್ ಧ್ಯಾನ್ ಚಂದ್ ಅವರಿಗೆ ನಮನ ಸಲ್ಲಿಸಿದೆ" ಎಂದು ಬರೆದುಕೊಂಡಿದ್ದಾರೆ.

ಇಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ. ಹಾಕಿಯಲ್ಲಿ ತಮ್ಮ ಕೈಚಳಕದಿಂದ "ಭಾರತದ ಹಾಕಿ ಮಾಂತ್ರಿಕ" ಎಂದೇ ಕರೆಯಲಾಗುತ್ತಿದೆ. 1928, 1932 ಮತ್ತು 1936 ರ ಒಲಿಂಪಿಕ್ಸ್ ಆವೃತ್ತಿಗಳಲ್ಲಿ ಚಿನ್ನ ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದರು. ದೇಶಕ್ಕಾಗಿ 185 ಪಂದ್ಯಗಳಲ್ಲಿ ಅವರು ಭಾರತಕ್ಕಾಗಿ 570 ಗೋಲುಗಳನ್ನು ಗಳಿಸಿದ್ದಾರೆ. ಧ್ಯಾನ್ ಚಂದ್ ಅವರು ಯುನೈಟೆಡ್ ಪ್ರಾವಿನ್ಸ್ ತಂಡದಲ್ಲಿ ಹಾಕಿ ಆಡಿದರು, ಅಲ್ಲಿಂದ ಅವರು 1928 ರ ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್‌ಗೆ ಹೋದ ಭಾರತೀಯ ತಂಡಕ್ಕೆ ಆಡಲು ಆಯ್ಕೆಯಾದರು.

1928ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಎದುರಾಳಿಗಳನ್ನು ಭಾರಿ ಅಂತರದಿಂದ ಸೋಲಿಸಿ ಚಿನ್ನ ಗೆದ್ದಿತ್ತು. ಇದು ದೇಶದ ಮೊದಲ ಚಿನ್ನದ ಪದಕವಾಗಿತ್ತು. ಈ ಒಲಂಪಿಕ್ಸ್​ನಲ್ಲಿ ಧ್ಯಾನ್ ಚಂದ್ ಗಳಿಸಿದ ಗೋಲ್​ನಿಂದ ಅವರನ್ನು ಅಂದಿನ ಪ್ರಮುಖ ಪತ್ರಿಕೆಗಳು 'ಹಾಕಿ ಮಾಂತ್ರಿಕ' ಎಂದು ಬಣ್ಣಿಸಿದವು. 1932 ರಲ್ಲಿ ಲಾಸ್ ಏಂಜಲೀಸ್ (ಅಮೆರಿಕ) ನಲ್ಲಿ ನಡೆದ ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು 1928ರ ಅಮೋಘ ಪ್ರದರ್ಶನದ ರೀತಿಯಲ್ಲೇ ಚಿನ್ನ ಗೆದ್ದಿತು. ಭಾರತ ಗಳಿಸಿದ 35 ಗೋಲುಗಳಲ್ಲಿ ಚಂದ್ ಅವರ ಸಹೋದರ ರೂಪ್ ಸಿಂಗ್ 25 ಗೋಲುಗಳನ್ನು ಗಳಿಸಿದರು. ಇದರಿಂದ ಅವರನ್ನು 'ಹಾಕಿ ಅವಳಿಗಳು' ಎಂದೇ ಕರೆಯಲಾಯಿತು.

1934 ರಲ್ಲಿ, ಚಂದ್ ಭಾರತ ತಂಡದ ನಾಯಕರಾದರು. 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತ ಫೈನಲ್‌ನಲ್ಲಿ ಆತಿಥೇಯ ಜರ್ಮನಿಯನ್ನು ಎದುರಿಸಿತ್ತು. ಧ್ಯಾನ್ ಚಂದ್ 3 ಗೋಲು ಗಳಿಸುವುದರೊಂದಿಗೆ ಭಾರತ 8-1 ಅಂತರದಲ್ಲಿ ಜಯ ಸಾಧಿಸಿತು. ಚಾಂದ್ ಅನೇಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ ಭಾರತೀಯ ತಾರೆಯಾಗಿ ಮಿಂಚಿದರು. 1956 ರಲ್ಲಿ, ಚಂದ್ ಅವರು ಮೇಜರ್ ಆಗಿ ಸೈನ್ಯದಿಂದ ನಿವೃತ್ತರಾದರು. ಅದೇ ವರ್ಷದಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. (ಎಎನ್​ಐ)

ಇದನ್ನೂ ಓದಿ:ಅಗ್ರ ತಂಡ, ಆಟಗಾರರ ಎದುರು ಆಡಲು ಬಯಸುವೆ: ಬ್ಯಾಟಿಂಗ್​ ಕಿಂಗ್​​ ವಿರಾಟ್​ ಕೊಹ್ಲಿ

ABOUT THE AUTHOR

...view details