ಕರ್ನಾಟಕ

karnataka

By

Published : Feb 12, 2023, 10:02 AM IST

ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಸನಿಹಕ್ಕೆ ಭಾರತ: ಫೈನಲ್ ಲೆಕ್ಕಾಚಾರವೇನು?

ನಾಗ್ಪುರ ಟೆಸ್ಟ್​ನಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಹತ್ತಿರವಾಗಿದೆ. ಡಬ್ಲ್ಯೂಟಿಸಿ ಪಟ್ಟಿಯಲ್ಲಿ ಅಂಕ ಹೆಚ್ಚಿಸಿಕೊಂಡಿದ್ದು, ಇನ್ನೆರಡು ಪಂದ್ಯ ಗೆದ್ದಲ್ಲಿ ನೇರವಾಗಿ ಫೈನಲ್​ ತಲುಪಲಿದೆ.

world-test-championship-final
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಸನಿಹಕ್ಕೆ ಭಾರತ

ನಾಗ್ಪುರ (ಮಹಾರಾಷ್ಟ್ರ) :ಸ್ಪಿನ್‌ದ್ವಯರಾದ ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್​ರ ಅದ್ಭುತ ಪ್ರದರ್ಶನದಿಂದ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾವನ್ನು ಇನಿಂಗ್ಸ್​ ಹಾಗೂ 132 ರನ್​ಗಳಿಂದ ಬಗ್ಗುಬಡಿದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-0 ಮುನ್ನಡೆ ಪಡೆದಿದೆ. ಇದು ಟೆಸ್ಟ್​ ವಿಶ್ವ ಚಾಂಪಿಯನ್​​ಶಿಪ್​ ಫೈನಲ್​ ಮಾರ್ಗವನ್ನು ಸುಲಭಗೊಳಿಸಿದೆ.

ವಿಶ್ವ ಚಾಂಪಿಯನ್​ಶಿಪ್​ ಫೈನಲ್​ ಪಟ್ಟಿಯಲ್ಲಿ ಭಾರತ ತಂಡ ಪ್ರಸ್ತುತ 2ನೇ ಸ್ಥಾನದಲ್ಲಿದ್ದು ಆಸ್ಟ್ರೇಲಿಯಾ ಅಗ್ರಸ್ಥಾನಿಯಾಗಿದೆ. ಈವರೆಗೂ ಯಾವ ತಂಡಕ್ಕೂ ಫೈನಲ್​ ಟಿಕೆಟ್​ ಖಚಿತವಾಗಿಲ್ಲವಾದರೂ ಆಸೀಸ್​​ ಮತ್ತು ಭಾರತ ಫೈನಲ್​ ಸೇರುವ ಸಾಧ್ಯತೆಗಳಿವೆ. ಬಾರ್ಡರ್-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ ಒಂದು ಪಂದ್ಯ ಗೆದ್ದಲ್ಲಿ ನೇರವಾಗಿ ಅಂತಿಮ ಹಣಾಹಣಿಗೆ ತಲುಪಲಿದೆ.

ಸರಣಿ ಆರಂಭಕ್ಕೂ ಮೊದಲು ಭಾರತ ಡಬ್ಲ್ಯೂಟಿಸಿ ಪಟ್ಟಿಯಲ್ಲಿ ಶೇ.58.93 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸೀಸ್​ ಟೆಸ್ಟ್​ ಗೆಲುವಿನ ಬಳಿಕ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲವಾದರೂ, ಶೇ.61.67 ಪಾಯಿಂಟ್ಸ್​ ಏರಿಕೆ ಕಂಡಿತು. ಅದೇ ರೀತಿ ನಾಗ್ಪುರದಲ್ಲಿ ಸೋಲಿನ ನಂತರ ಆಸ್ಟ್ರೇಲಿಯಾ ಅಂಕ ಕಳೆದುಕೊಂಡಿತು. ಶೇ.75.56 ರಿಂದ ಶೇ.70.83 ಕ್ಕೆ ಇಳಿಕೆ ಕಂಡಿದೆ. ಪಾಯಿಂಟ್ಸ್ ಕಳೆದುಕೊಂಡರೂ ಅಗ್ರಸ್ಥಾನ ಅಬಾಧಿತವಾಗಿದೆ.

ಭಾರತಕ್ಕೆ ಬೇಕಿದೆ ಮತ್ತೆರಡು ಗೆಲುವು:ಭಾರತ ಟೆಸ್ಟ್​ ಚಾಂಪಿಯನ್​ ಫೈನಲ್​ ತಲುಪಲು ಉಳಿದಿರುವ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಬೇಕಿದೆ. ಆಸ್ಟ್ರೇಲಿಯಾ ಒಂದು ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದರೂ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಕಳೆದ ಬಾರಿ ನ್ಯೂಜಿಲೆಂಡ್‌ ಮತ್ತು ಭಾರತ ಫೈನಲ್​ ಪಂದ್ಯವಾಡಿದ್ದವು. ಅದರಲ್ಲಿ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಸತತ ಎರಡನೇ ಬಾರಿಗೆ ಫೈನಲ್​ ಪ್ರವೇಶಿಸುವ ಗುರಿಯಲ್ಲಿರುವ ಭಾರತ ಗೆಲ್ಲಬೇಕಿದೆ.

ಇದಲ್ಲದೇ, ಪಟ್ಟಿಯಲ್ಲಿ ಶ್ರೀಲಂಕಾ ಶೇ.53.33 ಅಂಕ, ದಕ್ಷಿಣ ಆಫ್ರಿಕಾ ಶೇ.48.72 ರೊಂದಿಗೆ ಕ್ರಮವಾಗಿ 3, 4 ನೇ ಸ್ಥಾನದಲ್ಲಿವೆ. ಭಾರತ- ಆಸ್ಟ್ರೇಲಿಯಾ ಹೊರತಾಗಿ ಉಳಿದ ತಂಡಗಳಿಗೆ ಹೆಚ್ಚಿನ ಅವಕಾಶ ಇಲ್ಲವಾದರೂ, ಗೆಲುವಿನ ಪ್ರಮಾಣ ಏರುಪೇರಾದಲ್ಲಿ ಶ್ರೀಲಂಕಾ ಫೈನಲ್​ಗೆ ಬರುವ ಸಾಧ್ಯತೆ ಇದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ಜೂನ್ 7 ರಿಂದ ಓವಲ್‌ನಲ್ಲಿ ನಡೆಯಲಿದೆ.

ನಾಗ್ಪುರದಲ್ಲಿ ಭಾರತ ಏಕಚಕ್ರಾಧಿಪತ್ಯ:ಇನ್ನೊಂದೆಡೆ, ಭಾರತ ತಂಡ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಮೂರೇ ದಿನದಲ್ಲಿ ಪಂದ್ಯವನ್ನು ವಶಪಡಿಸಿಕೊಂಡಿತು. ಸ್ಟಾರ್​ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ, ಆರ್​. ಅಶ್ವಿನ್​ ಮತ್ತು ನಾಯಕ ರೋಹಿತ್​ ಶರ್ಮಾರ ಅದ್ಭುತ ಪ್ರದರ್ಶನದಿಂದಾಗಿ ಇನಿಂಗ್ಸ್​ ಜೊತೆಗೆ 132 ರನ್​ಗಳ ದೊಡ್ಡ ಜಯ ಪಡೆಯಿತು.

ಮೊದಲ ಇನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್​ ಗೊಂಚಲು ಮತ್ತು ಬ್ಯಾಟಿಂಗ್​ನಲ್ಲಿ ಮಿಂಚಿ 70 ರನ್​ ಮಾಡಿದ್ದರು. ಭಾರತದ ಇನಿಂಗ್ಸ್​ನಲ್ಲಿ ನಾಯಕ ರೋಹಿತ್​ ಶರ್ಮಾ ಭರ್ಜರಿ ಶತಕ(120) ಬಾರಿಸಿದರು. 223 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್​ ಆರಂಭಿಸಿದ ಆಸೀಸ್​ ಮೂರನೇ ದಿನದ 2ನೇ ಅವಧಿಯ 2 ಗಂಟೆಗಳಲ್ಲಿ ಸರ್ವಪತನ ಕಂಡಿತು. ಸ್ಪಿನ್​ ಜಾಲ ಬೀಸಿದ ಅಶ್ವಿನ್​ 5 ಪ್ರಮುಖ ವಿಕೆಟ್​ ಪಡೆದರು. ರವೀಂದ್ರ ಜಡೇಜಾ ಮೂರು ವಿಕೆಟ್​ ಕಬಳಿಸಿ ಪಂದ್ಯಕ್ಕೆ ಅಂತ್ಯ ಹಾಡಿದರು.

ಸ್ಪಿನ್​ ಸ್ನೇಹಿ ಪಿಚ್​:ನಾಗ್ಪುರದ ವಿದರ್ಭ ಕ್ರಿಕೆಟ್​ ಮೈದಾನ ಸಂಪೂರ್ಣವಾಗಿ ಸ್ಪಿನ್​ ಸ್ನೇಹಿಯಾಗಿತ್ತು. ಮೂರು ಇನಿಂಗ್ಸ್​ಗಳ 30 ವಿಕೆಟ್​​ಗಳಲ್ಲಿ 24 ಸ್ಪಿನ್ನರ್​ಗಳ ಪಾಲಾದವು. ಅದರಲ್ಲಿ ರವೀಂದ್ರ ಜಡೇಜಾ 7, ಅಶ್ವಿನ್​ 8, ಆಸೀಸ್​ನ ಟಾಡ್​ ಮೊರ್ಫಿ 7, ನಾಥನ್​ ಲಿನ್​, ಅಕ್ಷರ್​ ಪಟೇಲ್​ ತಲಾ 1 ವಿಕೆಟ್​ ಪಡೆದರು. ಸರಣಿಯಲ್ಲಿ 1-0 ಮುನ್ನಡೆ ಹೊಂದಿದ್ದು, ಫೆಬ್ರವರಿ 17-21 ರವರೆಗೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಎರಡನೇ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಜಡ್ಡುಗೆ 25 ಶೇಕಡಾ ದಂಡ ವಿಧಿಸಿದ ಐಸಿಸಿ: ಜಡೇಜಾ ಮಾಡಿದ ಆ ತಪ್ಪೇನು?

ABOUT THE AUTHOR

...view details