ಕರ್ನಾಟಕ

karnataka

By

Published : Sep 9, 2021, 10:31 AM IST

Updated : Sep 9, 2021, 5:47 PM IST

ETV Bharat / sports

T-20: ಟೀಂ ಇಂಡಿಯಾಗೆ ಟ್ರೀ ಬೈಕ್ ಮೂಲಕ ಅಡಕೆ ಮರವೇರಿ ಶುಭ ಕೋರಿದ ಸಂಶೋಧಕ ಗಣಪತಿ ಭಟ್

ಅಡಕೆ ಮರವನ್ನು ಏರುವ ಬೈಕ್ ನಿರ್ಮಿಸಿ ದೇಶದ ಗಮನ ಸೆಳೆದಿದ್ದ ಬಂಟ್ವಾಳ ತಾಲೂಕಿನ ಸಜಿಪ ಮೂಡದ ಪ್ರಗತಿಪರ ಕೃಷಿಕ, ಸಂಶೋಧಕ ಗಣಪತಿ ಭಟ್, ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ.

ಗಣಪತಿ ಭಟ್
ಗಣಪತಿ ಭಟ್

ಬಂಟ್ವಾಳ(ದಕ್ಷಿಣ ಕನ್ನಡ): ಟಿ-ಟ್ವೆಂಟಿ ವಿಶ್ವ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಗೆದ್ದು ಬರುವಂತೆ ಸ್ಟಾರ್ ಸ್ಪೋರ್ಟ್ಸ್​​ನವರು ನಿರ್ಮಿಸಿರುವ ಜಾಹೀರಾತಿನಲ್ಲಿ ಭಟ್ಟರು ಮತ್ತವರ ಮಕ್ಕಳು ಅಡಕೆ ಮರವೇರಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಭಾರತದ ತ್ರಿವರ್ಣ ಪತಾಕೆಯನ್ನು ಹಿಡಿದುಕೊಂಡು ತಾವೇ ಆವಿಷ್ಕರಿಸಿದ ಟ್ರೀ ಬೈಕ್ ಮೂಲಕ ಅಡಕೆ ಮರವೇರುತ್ತಾ ಭಾರತ ತಂಡವನ್ನು ಹುರಿದುಂಬಿಸುವ ದೃಶ್ಯದ ಚಿತ್ರೀಕರಣ ಭಟ್ ತೋಟದ ಮನೆಯಲ್ಲಿ ನಡೆಯಿತು.

ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಕೋಮಾಲಿಯ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ಕೃಷಿ ಕಾರ್ಮಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 2019 ರಲ್ಲಿ ಇಂಧನ ಚಾಲಿತ ದೇಶೀಯ ಟ್ರೀ ಬೈಕ್ ಆವಿಷ್ಕರಿಸಿದ್ದರು. ಸುಧಾರಿತ ವಿಧಾನದ ಈ ಬೈಕ್ ಕಡಿಮೆ ಅವಧಿಯಲ್ಲಿ ರೈತರ ಗಮನ ಸೆಳೆದಿರುವುದಲ್ಲದೇ ದೇಶ-ವಿದೇಶಗಳಲ್ಲೂ ಜನಪ್ರಿಯತೆ ಪಡೆದು ಬೇಡಿಕೆ ಸೃಷ್ಟಿಸಿತು. ದಿ ಹಿಸ್ಟರಿ ಚಾನೆಲ್​ನಲ್ಲೂ ಪ್ರಕಟಗೊಂಡಿತ್ತು.

ಟೀಂ ಇಂಡಿಯಾಗೆ ಟ್ರೀ ಬೈಕ್ ಮೂಲಕ ಅಡಕೆ ಮರವೇರಿ ಶುಭ ಕೋರಿದ ಸಂಶೋಧಕ ಗಣಪತಿ ಭಟ್

ಇದರಿಂದ ಪ್ರೇರಿತಗೊಂಡ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್ ಮುಂದಿನ ಟಿ- ಟ್ವೆಂಟಿ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡವನ್ನು ಪ್ರೋತ್ಸಾಹಿಸಿ, ಹುರಿದುಂಬಿಸಲು ತನ್ನ ಜಾಹೀರಾತಿನಲ್ಲಿ ದೇಸಿ ನಿರ್ಮಿತ ಟ್ರೀ ಬೈಕ್​ಅನ್ನು ಬಳಸಲು ತೀರ್ಮಾನಿಸಿತು. ಆ ಮೂಲಕ ಗ್ರಾಮೀಣ ಭಾಗದ ರೈತನಾದ ಗಣಪತಿ ಭಟ್ ಅವರಿಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ.

ಗಣಪತಿ ಭಟ್, ಅವರ ಮಗಳು ಸುಪ್ರಿಯಾ ಭಟ್ ಹಾಗೂ ಮಗ ಶ್ರೀವರ ಭಟ್ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಟ್ರೀ ಬೈಕ್​ನಲ್ಲಿ ಅಡಕೆ ಮರವನ್ನೇರುತ್ತಾ ಭಾರತ ಗೆದ್ದು ಬರುವಂತೆ ಶುಭ ಹಾರೈಸಿದರು. ಅಲ್ಲದೇ, ಅವರ ಅಡಕೆ ತೋಟ, ಮನೆಯಂಗಳ, ಒಳಾಂಗಣದಲ್ಲಿ ಕ್ರಿಕೆಟ್ ಆಡುವ ದೃಶ್ಯಗಳನ್ನು ಚಿತ್ರೀಕರಣ ನಡೆಸಿದ್ದು ಇಂಗ್ಲೀಷ್, ಹಿಂದಿ, ಕನ್ನಡ ಮಾತ್ರವಲ್ಲದೇ ತುಳು ಭಾಷೆಯಲ್ಲೂ ಕ್ರಿಕೆಟ್ ತಂಡವನ್ನು ಹುರಿದುಂಬಿಸುವ ದೃಶ್ಯಗಳನ್ನು ತಂಡ ಚಿತ್ರೀಕರಿಸಿಕೊಂಡಿದೆ. ಒಟ್ಟು 5 ನಿಮಿಷದ ಈ ತುಣುಕು ಕ್ರಿಕೆಟ್ ವಿರಾಮದ ವೇಳೆಯಲ್ಲಿ ಪ್ರಸಾರಗೊಳ್ಳಲಿದೆ.

Last Updated : Sep 9, 2021, 5:47 PM IST

ABOUT THE AUTHOR

...view details