ಕರ್ನಾಟಕ

karnataka

ಸಂಜು ಸ್ಯಾಮ್ಸನ್​ ಜರ್ಸಿ ಸೂರ್ಯ ಕುಮಾರ್​​ ತೊಟ್ಟಿದ್ದೇಕೆ..? ಹೊಸ ಕಿಟ್​​​ ಎಡವಟ್ಟು!

By

Published : Jul 28, 2023, 8:16 PM IST

Sanju Samson Jersey: ವೆಸ್ಟ್​​ ಇಂಡೀಸ್​​ ವಿರುದ್ಧದ ಮೂರು ಏಕದಿನ ಪಂದ್ಯದ ಸರಣಿಯ ಮೊದಲ ಮ್ಯಾಚ್​ನಲ್ಲಿ ಸೂರ್ಯ ಕುಮಾರ್​ ಯಾದವ್​ ಸಂಜು ಸ್ಯಾಮ್ಸನ್​ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರು.

Suryakumar Yadav
ಸೂರ್ಯ ಕುಮಾರ್

ಪೋರ್ಟ್ ಆಫ್ ಸ್ಪೇನ್ (ವೆಸ್ಟ್ ಇಂಡೀಸ್): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರ ಜೆರ್ಸಿ ಧರಿಸಿ ಮೈದಾನಕ್ಕೆ ಬಂದಿದ್ದರು. ಇದು ವಿವಿಧ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಜರ್ಸಿ ಕುರಿತು ಚರ್ಚೆ

ನಿನ್ನೆ ನಡೆದ ಮೊದಲ ಏಕದಿನ ಪಂದ್ಯ ಚುಟುಕು ಕ್ರಿಕೆಟ್​ನ ರೀತಿ ಮುಕ್ತಾಯವಾಯಿತು. ಭಾರತ ತಂಡ 5 ವಿಕೆಟ್​ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್​​​ ಮಾಡಿದ ಕೆರಿಬಿಯನ್ನರ ತಂಡ ಕಳಪೆ ಬ್ಯಾಟಿಂಗ್​ ಪ್ರದರ್ಶನ ಮಾಡಿತು. ಈ ಬಾರಿಯ ವಿಶ್ವಕಪ್​ಗೆ ಏಕೆ ಅರ್ಹತೆ ಗಿಟ್ಟಿಸಿಕೊಂಡಿಲ್ಲ ಎಂಬುದು ಮತ್ತೆ ವಿಶ್ವ ಕ್ರಿಕೆಟ್​ನ ಮುಂದೆ ಪರಿಚಿತವಾಯಿತು. ಭಾರತದ ಸ್ಪಿನ್​​ ದಾಳಿಗೆ ನಲುಗಿದ ವೆಸ್ಟ್​​ ಇಂಡೀಸ್​ ಪಡೆ 115 ರನ್​ ಗುರಿ ನೀಡಿತು. ಈ ಗುರಿಯನ್ನು ಭಾರತ 5 ವಿಕೆಟ್​ ಕಳೆದುಕೊಂಡು ಜಯಿಸಿತು.

ಆಡುವ ಹನ್ನೊಂದರಲ್ಲಿ ಇಲ್ಲದ ಸಂಜು ಸ್ಯಾಮ್ಸನ್​ ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಹೇಗೆ ಕಾಣಿಸಿಕೊಂಡರು ಎಂಬ ಅನುಮಾನ ಉಂಟಾಗಿತ್ತು. ಪರ್ಯಾಯ ಆಟಗಾರರಾಗಿ ಫೀಲ್ಡಿಂಗ್​ ಮಾಡಬಹುದಾದರೂ ಬ್ಯಾಟಿಂಗ್​ ಮಾಡುವಂತಿಲ್ಲ. ಆದರೆ ಅಲ್ಲಿ ಸಂಜು ಜರ್ಸಿಯಲ್ಲಿ ಮೈದಾನದಲ್ಲಿದ್ದದ್ದು, ಟಿ-20 ಟಾಪ್​ ಶ್ರೇಯಾಂಕಿತ ಬ್ಯಾಟರ್​ ಸೂರ್ಯ ಕುಮಾರ್ ಯಾದವ್. ನಿನ್ನೆಯ ಪಂದ್ಯದಲ್ಲಿ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಸಂಜು ಅವರ ಜರ್ಸಿ ತೊಟ್ಟು ಸ್ಕೈ ಮೈದಾನದಲ್ಲಿದ್ದರು. ಚೇಸಿಂಗ್​ ವೇಳೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸೂರ್ಯ 25 ಎಸೆತ ಎದುರಿಸಿ 3 ಬೌಂಡರಿ ಮತ್ತು 1 ಸಿಕ್ಸರ್​ನಿಂದ 19 ರನ್​ ಗಳಿಸಿ ಎಲ್​ಬಿಡಬ್ಲ್ಯೂಗೆ ಔಟ್​​ ಆದರು.

ಹೊಸ ಕಿಟ್​​​ ಎಡವಟ್ಟು:ಮೂಲಗಳು ನೀಡಿರುವ ಮಾಹಿತಿಯಂತೆ, ಸೂರ್ಯ ಕುಮಾರ್​ ಯಾದವ್​ ಅವರಿಗೆ ಅವರ ದೇಹದ ಗಾತ್ರದ ಹೊಸ ಟಿ-ಶರ್ಟ್‌ಗಳು ಬರುವುದು ವಿಳಂಬವಾಗಿರುವುದರಿಂದ ಅವರು ಸಂಜು ಟಿ ಶರ್ಟ್​ ಧರಿಸಿದ್ದಾರೆ. ಸದ್ಯ ಸೂರ್ಯ ಅವರಿಗೆ ಬಂದಿರುವ ಟಿ-ಶರ್ಟ್‌ಗಳಲ್ಲಿ ಗಾತ್ರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ಹಾಗಾಗಿಯೇ ಸೂರ್ಯಕುಮಾರ್ ಯಾದವ್ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ 9ನೇ ನಂಬರ್ ಜೆರ್ಸಿಯನ್ನು ಧರಿಸಬೇಕಾಯಿತು. ಗಾತ್ರದ ಪ್ರಕಾರ, ಹೊಸ ಟಿ-ಶರ್ಟ್ ಮತ್ತು ಜರ್ಸಿ ಬರಲು ಒಂದು ಅಥವಾ ಎರಡು ದಿನಗಳು ಬೇಕಾಗಬಹುದು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿ ಸೂರ್ಯ ಅವರು ತಮ್ಮದೇ ಹೊಸ ಜರ್ಸಿಯಲ್ಲಿ ಮೈದಾನದಕ್ಕಿಳಿಯಲಿದ್ದಾರೆ.

ಟೀಮ್ ಮ್ಯಾನೇಜ್‌ಮೆಂಟ್ ಆಡುವ ಬಳಗದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾಗಕ್ಕೆ ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡದೆ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡಿದೆ. ಸೂರ್ಯ ಕುಮಾರ್ ಯಾದವ್​ ಅವರಿಗೆ ಬ್ಯಾಟ್ಸ್‌ಮನ್ ಆಗಿ ಅವಕಾಶ ನೀಡಿದೆ. ಟೆಸ್ಟ್​ ಪದಾರ್ಪಣೆ ಮಾಡಿದ ಕಿಶನ್​ ಉತ್ತಮವಾಗಿ ಆಡಿದ್ದು ಸಂಜುಗೆ ಅವಕಾಶ ಕೈ ತಪ್ಪುವಂತೆ ಆಗಿದೆ. ಬೌಲರ್​​ ಮುಖೇಶ್ ಕುಮಾರ್ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿ ಒಂದು ವಿಕೆಟ್ ಕಬಳಿಸಿದ್ದಾರೆ.

ಎರಡನೇ ಏಕದಿನ ಪಂದ್ಯ ನಾಳೆ ಇದೇ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7ಕ್ಕೆ ಆಟ ಆರಂಭವಾಗಲಿದ್ದು, ಮೂರು ಏಕದಿನದ ಪಂದ್ಯದ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆಯಲ್ಲಿದೆ. ಮೊದಲ ಪಂದ್ಯದ ಕಳಪೆ ಪ್ರದರ್ಶನದಿಂದ ಶೈ ಹೋಪ್​ ಪಡೆ ಕಮ್​ಬ್ಯಾಕ್​ ಮಾಡಬೇಕಿದೆ.

ಇದನ್ನೂ ಓದಿ:West Indies vs India, 1st ODI: ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಮಣಿಸಿದ ಭಾರತ

ABOUT THE AUTHOR

...view details