ಕರ್ನಾಟಕ

karnataka

Maharaja Trophy: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯ ಸಾಧಿಸಿದ ಶಿವಮೊಗ್ಗ ಲಯನ್ಸ್

By

Published : Aug 16, 2023, 6:17 AM IST

Shimoga Lions: ಶಿವಮೊಗ್ಗ ಲಯನ್ಸ್ ತಂಡವು ಮಹಾರಾಜ ಟ್ರೋಫಿಯಲ್ಲಿ ತನ್ನ 2ನೇ ಗೆಲುವಿನ ಓಟವನ್ನು ಮುಂದುವರೆಸಿದೆ.

ಶಿವಮೊಗ್ಗ ಲಯನ್ಸ್
ಶಿವಮೊಗ್ಗ ಲಯನ್ಸ್

ಬೆಂಗಳೂರು : ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ 36 ರನ್‌ಗಳ ಜಯ ಸಾಧಿಸುವುದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ರೋಹನ್ ಕದಂ (70) ನಿಹಾಲ್ ಉಲ್ಲಾಳ್ (40) ಕೆಳ ಕ್ರಮಾಂಕದಲ್ಲಿ ಕ್ರಾಂತಿ ಕುಮಾರ್ (25) ರನ್‌ಗಳ ಉಪಯುಕ್ತ ಕೊಡುಗೆ ನೀಡುವ ಮೂಲಕ ಲಯನ್ಸ್ ಗೆಲುವಿನ ರೂವಾರಿಗಳಾಗಿ ಹೊರಹೊಮ್ಮಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಶಿವಮೊಗ್ಗ ಲಯನ್ಸ್‌ ಪರ ಆರಂಭಿಕರಾದ ನಿಹಾಲ್ ಉಳ್ಳಾಲ್ ಮತ್ತು ರೋಹನ್ ಕದಂ ಮೊದಲ 5 ಓವರ್‌ಗಳಲ್ಲಿ 65 ರನ್‌ ಜೊತೆಯಾಟದ ಮೂಲಕ ಪವರ್‌ ಪ್ಲೇ ನ ಸಂಪೂರ್ಣ ಸದುಪಯೋಗ ಪಡೆದುಕೊಂಡರು. ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 40 ರನ್ ಗಳಿಸಿದ ನಿಹಾಲ್ ಉಳ್ಳಾಲ್ ಬೆಂಗಳೂರು ಬ್ಲಾಸ್ಟರ್ಸ್‌ ಪರ ಪ್ರದೀಪ್.ಟಿ ಎಸೆದ ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು.

ನಂತರ ಬಂದ ರೋಹಿತ್ ಕುಮಾರ್ 11 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ‌ ನಿರಾಸೆ ಮೂಡಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಅಭಿನವ್ ಮನೋಹರ್ ಗೆ ಜತೆಯಾದ ರೋಹನ್ ಕದಂ ವೈಯಕ್ತಿಕ ಅರ್ಧಶತಕ ದಾಖಲಿಸಿ ಮಿಂಚಿದರು. ಅಭಿನವ್ ಮನೋಹರ್ (31) ರನ್ ಗಳಿಸಿ ಎಲ್.ಆರ್ ಕುಮಾರ್ ಎಸೆತದಲ್ಲಿ ಬೌಲ್ಡ್ ಆದರು. 47 ಎಸೆತಗಳಲ್ಲಿ 70 ರನ್ ಗಳಿಸಿದ್ದ ರೋಹನ್ ಕದಂ, ಬ್ಲಾಸ್ಟರ್ಸ್ ಪರ ದಾಳಿಗಿಳಿದ ಟಿ.ಪ್ರದೀಪ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇನ್ನು ಕೆಳ ಕ್ರಮಾಂಕದಲ್ಲಿ ಕ್ರಾಂತಿ ಕುಮಾರ್ 10 ಎಸೆತಗಳಲ್ಲಿ 25 ರನ್ ಗಳಿಸುವ ಮೂಲಕ ಶಿವಮೊಗ್ಗ ಲಯನ್ಸ್ 200 ರನ್ ಗಡಿ ದಾಟಿತು.

202 ರನ್‌ಗಳ ಗುರಿ ಪಡೆದ ಬೆಂಗಳೂರು ಬ್ಲಾಸ್ಟರ್ಸ್ ತನ್ನ ಆರಂಭಿಕ ಆಟಗಾರರಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಭುವನ್ ರಾಜು ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜೆಸ್ವಂತ್ ಆಚಾರ್ಯ (29) ಮತ್ತು ನಂತರ ಬಂದ ಪವನ್ ದೇಶಪಾಂಡೆ (32) ಪ್ರತಿರೋಧ ತೋರಿದರು. ಆದರೆ, ಜೆಸ್ವಂತ್ ಆಚಾರ್ಯ ಅವರನ್ನು ಅಧೋಕ್ಷ್ ಹೆಗಡೆ ಪೆವಿಲಿಯನ್​ಗೆ ಕಳುಹಿಸಿದರೆ, ಬ್ಲಾಸ್ಟರ್ಸ್​ನ ಹತ್ತನೇ ಓವರ್‌ನಲ್ಲಿ ಸೂರಜ್ ಅಹುಜಾ (6) ರನ್ ಗಳಿಸಿ ನಿರ್ಗಮಿಸಿದರು.

ಅದರ ಬೆನ್ನಲ್ಲೇ ಪವನ್ ದೇಶಪಾಂಡೆ ರನೌಟ್​​ಗೆ ಬಲಿಯಾದರು. ಕೆಳ ಕ್ರಮಾಂಕದಲ್ಲಿ ಶುಭಾಂಗ್ ಹೆಗ್ಡೆ (22) ಆಶಿಶ್ ಮಹೇಶ್ (30*) ಮತ್ತು ಲೋಚನ್ ಅಪ್ಪಣ್ಣ (17) ರನ್‌ ಗಳಿಸುವ ಮೂಲಕ ಬೆಂಗಳೂರು ಬ್ಲಾಸ್ಟರ್ಸ್‌ಗೆ ಗೆಲುವಿನ ಆಸೆ ಮೂಡಿಸಿದರಾದರೂ ಲಯನ್ಸ್ ತಂಡದ ಸಂಘಟಿತ ಪ್ರದರ್ಶನ ಅದಕ್ಕೆ ಆಸ್ಪದ ನೀಡಲಿಲ್ಲ. ಅಂತಿಮವಾಗಿ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‌ಗಳನ್ನ ಕಳೆದುಕೊಂಡ ಬೆಂಗಳೂರು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲ ಶಿವಮೊಗ್ಗ ಲಯನ್ಸ್ 36 ರನ್‌ಗಳ ಜಯ ಸಾಧಿಸಿತು.

ಇದನ್ನೂ ಓದಿ :Maharaja Trophy: ಮಹಾರಾಜ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಶರತ್; ಮಂಗಳೂರು ಡ್ರ್ಯಾಗನ್ಸ್ ಜಯಭೇರಿ

ABOUT THE AUTHOR

...view details