ಕರ್ನಾಟಕ

karnataka

By ETV Bharat Karnataka Team

Published : Sep 28, 2023, 5:33 PM IST

Updated : Sep 28, 2023, 6:08 PM IST

ETV Bharat / sports

'ವಿಶ್ವಕಪ್​ ಅಲ್ಲ, ಭಯೋತ್ಪಾದಕ ಕಪ್​ ನಡೆಯುತ್ತೆ': ಕ್ರಿಕೆಟ್​​ ಪಂದ್ಯಾವಳಿಗೆ ಖಲಿಸ್ತಾನಿ ಉಗ್ರರ ಬೆದರಿಕೆ, ಬಿಗಿಭದ್ರತೆ ಹೆಚ್ಚಳ

ಭಾರತದಲ್ಲಿ ಮುಂದಿನ ತಿಂಗಳಿನಿಂದ ನಡೆಯುವ ಏಕದಿನ ವಿಶ್ವಕಪ್​ಗೂ ಖಲಿಸ್ತಾನಿಗಳು ಬೆದರಿಕೆ ಹಾಕಿದ್ದು, ಪಂದ್ಯಾವಳಿ ಮೇಲೆ ಉಗ್ರರ ಕರಿಛಾಯೆ ಬಿದ್ದಿದೆ.

ಕ್ರಿಕೆಟ್​​ ಪಂದ್ಯಾವಳಿಗೆ ಖಲಿಸ್ತಾನಿ ಉಗ್ರರ ಬೆದರಿಕೆ
ಕ್ರಿಕೆಟ್​​ ಪಂದ್ಯಾವಳಿಗೆ ಖಲಿಸ್ತಾನಿ ಉಗ್ರರ ಬೆದರಿಕೆ

ನವದೆಹಲಿ:ವಿಶ್ವವೇ ಕಾಯುತ್ತಿರುವ ಏಕದಿನ ವಿಶ್ವಕಪ್​ಗೆ ಇನ್ನು 8 ದಿನಗಳು ಮಾತ್ರ ಬಾಕಿ ಉಳಿದಿದ್ದು, ಕ್ರೀಡಾಕೂಟದ ಮೇಲೆ ಖಲಿಸ್ತಾನಿ ಉಗ್ರರ ಕರಿನೆರಳು ಬಿದ್ದಿದೆ. ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ(ಎಸ್​ಎಫ್​ಜೆ) ಉಗ್ರರು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ ಖಲಿಸ್ತಾನಿ ಪರ ಘೋಷಣೆಗಳನ್ನು ಗೀಚುತ್ತಿದ್ದು, ಹೈ ಅಲರ್ಟ್​ ಘೋಷಿಸಲಾಗಿದೆ.

ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್​ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದಲ್ಲಿ ಪುಂಡಾಟಿಕೆ ನಡೆಸುತ್ತಿರುವ ಖಲಿಸ್ತಾನಿಗಳು ಈಗ ಭಾರತದಲ್ಲೂ ಆಟಾಟೋಪ ಶುರುವಿಟ್ಟುಕೊಂಡಿದ್ದಾರೆ. ದೆಹಲಿಯಲ್ಲಿ ಗೋಡೆಗಳ ಮೇಲೆ ಭಾರತ ವಿರೋಧಿ ಹೇಳಿಕೆಗಳನ್ನು ಬರೆದಿದ್ದಾರೆ. ದೆಹಲಿ, ಅಹಮದಾಬಾದ್​​ನಲ್ಲಿ ನಡೆಯುವ ಕ್ರಿಕೆಟ್​ ಪಂದ್ಯಗಳ ವೇಳೆ ಖಲಿಸ್ತಾನಿಗಳು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಕ್ರಿಕೆಟ್​ಗೆ ಅಡ್ಡಿಪಡಿಸುವ ಉದ್ದೇಶ:ನಿಜ್ಜರ್​ ಹತ್ಯೆಗೆ ಪ್ರತೀಕಾರವಾಗಿ ಖಲಿಸ್ತಾನಿ ಉಗ್ರರು ದೆಹಲಿ, ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವಕಪ್ ಪಂದ್ಯಗಳಿಗೆ ಅಡ್ಡಿ ಉಂಟು ಮಾಡುವುದು ಖಲಿಸ್ತಾನಿ ಬೆಂಬಲಿಗರ ಗುರಿಯಾಗಿದೆ. ಹೀಗಾಗಿ ಇದನ್ನು ಮಟ್ಟಹಾಕಲು ಕ್ರೀಡಾಂಗಣಗಳ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ, ಉತ್ತರಪ್ರದೇಶದ ಅಹಮದಾಬಾದ್​ನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ನ ಪಂದ್ಯಗಳಿಗೆ ಅಡ್ಡಿ ಉಂಟಾಗುವ ಮಾಹಿತಿ ಸಿಕ್ಕಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಗೃಹ ಸಚಿವಾಲಯವು ಬಿಎಸ್​ಎಫ್​, ಸಿಆರ್​​ಪಿಎಫ್​, ಆರ್​ಎಎಫ್​ ಮತ್ತು ಐಟಿಬಿಪಿ ಪಡೆಗಳನ್ನು ನಿಯೋಜಿಸಿದೆ. ಖಲಿಸ್ತಾನ್ ಪರ ಉಗ್ರರು ನಡೆಸಬಹುದಾದ ಚಟುವಟಿಕೆಗಳ ಮೇಲೆ ಕಣ್ಣಿಡಲು ಹಲವಾರು ಸ್ಥಳಗಳಲ್ಲಿ ಭದ್ರತಾ ಪಡೆಗಳ ಗಸ್ತು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಉಗ್ರ ಸಂಘಟನೆಯ ಬೆದರಿಕೆಯೇನು:ಸಿಖ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಏಕದಿನ ಕ್ರಿಕೆಟ್​ ವಿಶ್ವಕಪ್​ಗೆ ಬೆದರಿಕೆ ಸಂದೇಶ ರವಾನಿಸಿದ್ದಾನೆ. ಇದರ ಆಡಿಯೋ ಸಂದೇಶ ದೆಹಲಿ ಪೊಲೀಸರಿಗೆ ಲಭ್ಯವಾಗಿದೆ. ಇಂಗ್ಲೆಂಡ್​ನಿಂದ ಫೋನ್​ ಕರೆಯಲ್ಲಿ ಮಾತನಾಡಿರುವ ಆಡಿಯೋ ಇದಾಗಿದ್ದು, ನಿಜ್ಜರ್ ಹತ್ಯೆಗೆ ನೀವು ಬುಲೆಟ್​ ಬಳಸಿದ್ದೀರಿ, ನಿಮ್ಮ ಹಿಂಸೆಯ ವಿರುದ್ಧ ನಾವು ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ. ಅಕ್ಟೋಬರ್‌ನಲ್ಲಿ ವಿಶ್ವ ಕ್ರಿಕೆಟ್ ಕಪ್ ನಡೆಯುವುದಿಲ್ಲ. ಅದು ವಿಶ್ವ ಭಯೋತ್ಪಾದಕ ಕಪ್‌ ಆಗಲಿದೆ ಎಂದು ಬೆದರಿಕೆ ಸಂದೇಶದಲ್ಲಿದೆ.

ಸಂದೇಶದ ಕುರಿತು ಭದ್ರತಾ ಅಧಿಕಾರಿಗಳು ಹೇಳುವಂತೆ, ಬೆದರಿಕೆಯ ಸತ್ಯಾಸತ್ಯತೆಯನ್ನು ಖಚಿತಪಡಿಸುತ್ತಿದ್ದೇವೆ. ಜಿ 20 ಶೃಂಗಸಭೆಯ ಸಂದರ್ಭದಲ್ಲಿಯೂ ಇದೇ ರೀತಿಯ ಬೆದರಿಕೆ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಆಗಸ್ಟ್‌ನಲ್ಲಿ 6 ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಖಲಿಸ್ತಾನಿ ಪರ ಸಂದೇಶಗಳು ಮತ್ತು ಘೋಷಣೆಗಳನ್ನು ಬರೆಯಲಾಗಿತ್ತು. ಕ್ರಿಕೆಟ್​ ಪಂದ್ಯಾವಳಿ ವೇಳೆ ವಿಧ್ವಂಸಕತೆ ಸೃಷ್ಟಿ ಮಾಡುವುದು ಅವರ ಉದ್ದೇಶವಾಗಿದೆಯೇ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಭದ್ರತಾ ಏಜೆನ್ಸಿಯಾದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದೇಶ ಮತ್ತು ವಿದೇಶಗಳಲ್ಲಿ ಖಲಿಸ್ತಾನಿ ಭಯೋತ್ಪಾದಕರು ಮತ್ತು ಬೆಂಬಲಿಗರ ವಿರುದ್ಧ ದೊಡ್ಡ ಕಾರ್ಯಾಚರಣೆ ಪ್ರಾರಂಭಿಸಿದೆ. ಆರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ, ಅಪಾರ ಪ್ರಮಾಣ ಆಸ್ತಿ ಪಾಸ್ತಿ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಇದನ್ನೂ ಓದಿ:ವಿಶ್ವಕಪ್​ ಬಳಿಕ ಏಕದಿನ ಕ್ರಿಕೆಟ್​ಗೆ ವಿದಾಯ.. ವಿರಾಟ್​ ಜೊತೆ ಕಿತ್ತಾಡಿದ್ದ ಅಫ್ಘಾನ್​ ವೇಗಿ ನವೀನ್​ ಅಚ್ಚರಿಯ ನಿರ್ಧಾರ

Last Updated : Sep 28, 2023, 6:08 PM IST

ABOUT THE AUTHOR

...view details