ಚೆನ್ನೈ: ಸನ್ರೈಸರ್ಸ್ ಹೈದರಾಬಾದ್ ಶಿಸ್ತು ಬದ್ದ ಬೌಲಿಂಗ್ ದಾಳಿಯ ಮುಂದೆ ಮಂಕಾದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 149ರನ್ಗಳಿಸಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 6ನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಲ್ಲದೆ ಆರಂಭದಲ್ಲೇ ಪಡಿಕ್ಕಲ್(11) ವಿಕೆಟ್ ಪಡೆಯಲು ಯಶಸ್ವಿಯಾಯಿತು. ನಂತರ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಶಹ್ಬಾಜ್ ಅಹ್ಮದ್ 10 ಎಸೆತಗಳಲ್ಲಿ 14 ರನ್ಗಳಿಸಿ ನದೀಮ್ಗೆ ವಿಕೆಟ್ ಒಪ್ಪಿಸಿದರು. ನಂತರ 3ನೇ ವಿಕೆಟ್ಗೆ ಒಂದಾದ ಕೊಹ್ಲಿ ಮತ್ತು ಮ್ಯಾಕ್ಸ್ವೆಲ್ 44 ರನ್ ಜೊತೆಯಾಟ ನೀಡಿ ಚೇತರಿಕೆ ನೀಡಿದರು.
ಆದರೆ, ಈ ಹಂತದಲ್ಲಿ ಕಣಕ್ಕಿಳಿದ ಹೋಲ್ಡರ್, 29 ಎಸೆತಗಳಲ್ಲಿ 33 ರನ್ಗಳಿಸಿದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಆರ್ಸಿಬಿಗೆ ಮರ್ಮಾಘಾತ ನೀಡಿದರು. ನಂತರದ ಓವರ್ನಲ್ಲೇ ವಿಲಿಯರ್ಸ್ ಅವರನ್ನು 1 ರನ್ಗೆ ಔಟ್ ಮಾಡುವ ಮೂಲಕ ರಶೀದ್ ಖಾನ್ ಆರ್ಸಿಬಿಯ ಬೃಹತ್ ಮೊತ್ತದ ಕನಸು ನುಚ್ಚುನೂರು ಮಾಡಿದರು.
ವಿಲಿಯರ್ಸ್ ವಿಕೆಟ್ ನಂತರ ಆರ್ಸಿಬಿ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 8, ಡೇನಿಯಲ್ ಕ್ರಿಸ್ಚಿಯನ್ 1, ಕೈಲ್ ಜೇಮಿಸನ್ 12 ರನ್ಗಳಿಸಿ ಔಟಾದರು. ಏಕಾಂಗಿಯಾಗಿ ಹೋರಾಡಿದ ಗ್ಲೇನ್ ಮ್ಯಾಕ್ಸ್ವೆಲ್, 41 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸೇರಿದಂತೆ 59 ರನ್ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು. ಒಟ್ಟಾರೆ, 20 ಓವರ್ಗಳಲ್ಲಿ 8 ವಿಕೆಟ್ ಕೆಳದುಕೊಂಡ ಬೆಂಗಳೂರು 150 ಗಡಿ ದಾಟಲು ವಿಫಲವಾಯಿತು.
ಸನ್ರೈಸರ್ಸ್ ಹೈದರಾಬಾದ್ ಪರ ಜೇಸನ್ ಹೋಲ್ಡರ್ 30ಕ್ಕೆ 3, ರಶೀದ್ ಖಾನ್ 18ಕ್ಕೆ 2ಮ ನದೀಮ್ 36ಕ್ಕೆ 1, ಭುವನೇಶ್ವರ್ ಕುಮಾರ್ 30ಕ್ಕೆ1 ಮತ್ತು ನಟರಾಜನ್ 32ಕ್ಕೆ 1 ವಿಕೆಟ್ ಪಡೆದು ಆರ್ಸಿಬಿಯನ್ನು 149ಕ್ಕೆ ಕಟ್ಟಿ ಹಾಕಿದರು.