ಕರ್ನಾಟಕ

karnataka

ETV Bharat / sports

'ಕನಸು ನನಸಾಯಿತು': ವಿರಾಟ್ ಕೊಹ್ಲಿ ಭೇಟಿ ಮಾಡಿದ ವಿಶೇಷಚೇತನ ಅಭಿಮಾನಿಯ ಹರ್ಷೋದ್ಘಾರ - ವಿರಾಟ್ ಕೊಹ್ಲಿಯ ವಿಶೇಷಚೇತನ ಅಭಿಮಾನಿ

ದೈಹಿಕ ಊನತೆ ಹೊಂದಿರುವ ತಮಿಳುನಾಡಿನ ಶ್ರೀನಿವಾಸ್, ವಿಶ್ವ ಕ್ರಿಕೆಟ್​ನ ಸದ್ಯದ ಬಾಸ್​ ವಿರಾಟ್ ಕೊಹ್ಲಿಯ ಕಟ್ಟಾಭಿಮಾನಿ. ಇಂದು ಅವರನ್ನು ಚೆಪಾಕ್ ಮೈದಾನದಲ್ಲಿ ಭೇಟಿಯಾದರು. 40 ಗಂಟೆ ಬಳಸಿ ಚಿತ್ರಿಸಲಾದ ಕೊಹ್ಲಿ ಚಿತ್ರಕ್ಕೆ ಹಸ್ತಾಕ್ಷರ ಪಡೆದರು.

ವಿರಾಟ್ ಕೊಹ್ಲಿ ಭೇಟಿ ಮಾಡಿದ ವಿಶೇಷಚೇತನ ಅಭಿಮಾನಿ
ವಿರಾಟ್ ಕೊಹ್ಲಿ ಭೇಟಿ ಮಾಡಿದ ವಿಶೇಷಚೇತನ ಅಭಿಮಾನಿ

By ETV Bharat Karnataka Team

Published : Oct 5, 2023, 10:41 PM IST

Updated : Oct 5, 2023, 10:54 PM IST

ಚೆನ್ನೈ:ಪ್ರಸ್ತುತ ಕ್ರಿಕೆಟ್​ ಕಿಂಗ್​ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿಗೆ ಅಪರಿಮಿತ ಅಭಿಮಾನಿ ಬಳಗವಿದೆ. ಚೇಸ್​ ಮಾಸ್ಟರ್​ ಅಂದ್ರೆ ಹಿರಿ- ಕಿರಿಯರೆಲ್ಲರಿಗೂ ಇಷ್ಟವೇ. ತಮಿಳುನಾಡಿನ ವಿಶೇಷಚೇತನ ಅಭಿಮಾನಿಯೊಬ್ಬ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದು, ಇಲ್ಲಿನ ಚೆಪಾಕ್​ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್​ 5) ಭೇಟಿಯಾಗಿ, 'ಕನಸು ನನಸಾಯಿತು' ಎಂದು ಉದ್ಗರಿಸಿದ್ದಾರೆ.

ಚೆನ್ನೈನ ವೆಲಚೇರಿ ಮೂಲದ 19 ವರ್ಷದ ಶ್ರೀನಿವಾಸ್ ವಿಶೇಷಚೇತನರಾಗಿದ್ದಾರೆ. ಕಾಲಿನ ಊನತೆ ಹೊಂದಿರುವ ಶ್ರೀನಿವಾಸ್​ಗೆ ಚಿತ್ರಕಲೆ ಒಲಿದಿದೆ. ಚೆಪಾಕ್​ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿದ್ದು, ಇದನ್ನೇ ಬಳಸಿಕೊಂಡ ಅಭಿಮಾನಿ ಕೊಹ್ಲಿಯನ್ನು ಕಂಡು ಫೋಟೋ ತೆಗೆಸಿಕೊಂಡಿದ್ದಾರೆ. ಅವರೇ ಬಿಡಿಸಿದ ಕೊಹ್ಲಿಯ ಫೋಟೋಗೆ ಹಸ್ತಾಕ್ಷರ ಹಾಕಿಸಿಕೊಂಡಿದ್ದಾರೆ.

ಈ ಬಗ್ಗೆ ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಶ್ರೀನಿವಾಸ್​, "ನಾನು 12 ನೇ ವಯಸ್ಸಿನಿಂದಲೂ ಕ್ರಿಕೆಟ್ ನೋಡುತ್ತಿದ್ದೇನೆ. ನನಗೆ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಇದೆ. ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿಯನ್ನು ನೋಡಲು ಎರಡು ವರ್ಷಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ಅಂತಿಮವಾಗಿ ಇಂದು ನಾನು ಇಷ್ಟ ಪಡುವ ಆಟಗಾರನನ್ನು ಭೇಟಿಯಾದೆ. ಕನಸು ನನಸಾದ ಸಂಭ್ರಮವಿದೆ. ಕರ್ನಾಟಕದ ಬೆಂಗಳೂರಿಗೆ ಕೊಹ್ಲಿಯನ್ನು ಭೇಟಿಯಾಗಲು ಹೋಗಿದ್ದೆ. ಆದರೆ, ಅವಕಾಶ ಸಿಕ್ಕಿರಲಿಲ್ಲ. ಇಂದು ಅನಿರೀಕ್ಷಿತವಾಗಿ ಇಂಥದ್ದೊಂದು ಸೌಭಾಗ್ಯ ಸಿಕ್ಕಿತು" ಎಂದು ಹರ್ಷ ವ್ಯಕ್ತಪಡಿಸಿದರು.

ತಾವೇ ಬಿಡಿಸಿದ ಚಿತ್ರಕ್ಕೆ ಕೊಹ್ಲಿ ಸಹಿ:ಶ್ರೀನಿವಾಸ್​ ಅವರು ದೈಹಿಕ ಊನತೆ ಹೊಂದಿದ್ದರೂ, ಚಿತ್ರಕಲೆಯಲ್ಲಿ ಪರಿಣಿತರು. ತನ್ನಿಷ್ಟದ ಕ್ರಿಕೆಟರ್​ ಕೊಹ್ಲಿಯ ಚಿತ್ರವನ್ನು ಬಿಡಿಸಿದ್ದರು. ಅದನ್ನು ಹಿಡಿದುಕೊಂಡೇ ಮೈದಾನಕ್ಕೆ ಬಂದಿದ್ದರು. "ನನ್ನನ್ನು ಕಂಡ ವಿರಾಟ್​, ಬಳಿಗೆ ಬಂದು ಮಾತನಾಡಿಸಿದರು. ಚಿತ್ರಕ್ಕೆ ಸಹಿ ಹಾಕಿದರು. ಫೋಟೋ ತೆಗೆಸಿಕೊಂಡೆ. ಕೆಲವೇ ಕ್ಷಣಗಳಲ್ಲಿ ಇದೆಲ್ಲಾ ನಡೆದು ಹೋಗಿದ್ದು, ಅತೀವ ಸಂತಸ ತಂದಿದೆ" ಎಂದು ಅವರು ತಿಳಿಸಿದರು.

ವಿರಾಟ್​ ಚಿತ್ರಕ್ಕಾಗಿ 40 ಗಂಟೆ: "ವಿರಾಟ್ ಕೊಹ್ಲಿ ಅವರ ಭಾವಚಿತ್ರವನ್ನು ಬಿಡಿಸಲು 40 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಬಣ್ಣದ ಪೆನ್ಸಿಲ್‌ಗಳೊಂದಿಗೆ ಅವರ ರೂಪವನ್ನು ಬಿಡಿಸಿದ್ದೇನೆ. ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚಿತ್ರ ಬಿಡಿಸುತ್ತಿದ್ದೇನೆ. ಶೀಘ್ರದಲ್ಲೇ ಅವರನ್ನೂ ಭೇಟಿಯಾಗುವ ಇರಾದೆ ಹೊಂದಿದ್ದೇನೆ" ಎಂದು ಶ್ರೀನಿವಾಸ್​ ತಿಳಿಸಿದರು.

ಏಕದಿನ ವಿಶ್ವಕಪ್​ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಡಲಿದೆ. ಇದಕ್ಕಾಗಿ ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ತಂಡ ಕಠಿಣ ತಾಲೀಮು ನಡೆಸುತ್ತಿದೆ.

ಇದನ್ನೂ ಓದಿ:ಚೊಚ್ಚಲ ವಿಶ್ವಕಪ್​ನಲ್ಲಿ ರವೀಂದ್ರ, ಕಾನ್ವೆ ಅಬ್ಬರದ ಶತಕ: ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮಣಿಸಿದ ನ್ಯೂಜಿಲೆಂಡ್ ಶುಭಾರಂಭ

Last Updated : Oct 5, 2023, 10:54 PM IST

ABOUT THE AUTHOR

...view details