ಕಾನ್ಪುರ: ಕಳಪೆ ಫಾರ್ಮ್ ಬಗ್ಗೆ ಯಾವುದೇ ಬೇಸರ ವ್ಯಕ್ತಪಡಿಸದೇ ಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ತಾನು ವೈಫಲ್ಯ ಅನುಭವಿಸುತ್ತಿದ್ದೇನೆ ಎನ್ನುವುದು ಆಧಾರರಹಿತ. ತಂಡಕ್ಕೆ ಕೊಡುಗೆ ನೀಡುವುದೆಂದರೆ ಪ್ರತಿ ಪಂದ್ಯದಲ್ಲೂ ಶತಕ ಸಿಡಿಸುವುದು ಎಂದರ್ಥವಲ್ಲ ಎಂದು ಅಭಿಪ್ರಾಯಪಟ್ಟರು.
ರಹಾನೆ ಈ ವರ್ಷ ಕಳೆದ 11 ಪಂದ್ಯಗಳಲ್ಲಿ 19ರ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ. ಆದರೆ ಒತ್ತಡದಲ್ಲೇ ಉತ್ತರಿಸಿದ ಅವರು, ತಂಡದ ಗೆಲುವಿನಲ್ಲಿ ಒಬ್ಬ ಬ್ಯಾಟರ್ 30, 40 ಮತ್ತು 50 ರನ್ ಗಳಿಸಿದರೂ ಅದೂ ಕೂಡ ಸ್ವೀಕಾರಾರ್ಹ ಕೊಡುಗೆ ಎಂದರು.
ನನ್ನ ಫಾರ್ಮ್ ಬಗ್ಗೆ ಯಾವುದೇ ಕಳವಳವಿಲ್ಲ. ನಮ್ಮ ತಂಡಕ್ಕೆ ಸಾಧ್ಯವಾದಷ್ಟು ಕೊಡುಗೆ ನೀಡುವುದು ನನ್ನ ಕರ್ತವ್ಯ. ಕೊಡುಗೆ ಎಂದರೆ ಪ್ರತಿ ಪಂದ್ಯದಲ್ಲೂ ಶತಕ ಸಿಡಿಸುವುದು ಎಂದರ್ಥವಲ್ಲ. ಪ್ರತಿ ಪಂದ್ಯದಲ್ಲಿ 30,40, 50 ರನ್ಗಳಿಸುವುದು ಕೂಡ ಅತ್ಯಂತ ಮಹತ್ವದ ಕೊಡುಗೆ ಎಂದು ಕಿವೀಸ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
'ಭವಿಷ್ಯದ ಬಗ್ಗೆ ಚಿಂತಿಸುವುದಿಲ್ಲ':
ಕಾನ್ಪುರ ಮತ್ತು ಮುಂಬೈನಲ್ಲಿ ವೈಫಲ್ಯ ಅನುಭವಿಸಿದರೆ ಮುಂಬರುವ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎಂಬ ಸತ್ಯ ಅರಿತಿರುವ ರಹಾನೆ, ಮುಂದೆ ಏನು ನಡೆಯಬೇಕೆಂದಿದೆಯೋ ಅದು ನಡೆಯುತ್ತದೆ ಎಂದರು.
ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದರ ಬಗ್ಗೆ ನಾನು ಆಲೋಚಿಸುವುದಿಲ್ಲ. ಭವಿಷ್ಯದಲ್ಲಿ ಏನಾಗಬೇಕೋ ಅದು ಆಗುತ್ತದೆ. ಆದರೆ ಪ್ರಸ್ತುತ, ನಿರ್ದಿಷ್ಟ ಸಮಯದಲ್ಲಿ ನನ್ನಿಂದಾಗುವ ಅತ್ಯುತ್ತಮವಾದುದನ್ನು ನೀಡುವುದರ ಕಡೆಗೆ ಮಾತ್ರ ನನ್ನ ಗಮನ ಎಂದು ಅವರು ಹೇಳಿದರು.
'ರಾಹುಲ್ ಭಾಯ್ ಸಲಹೆ ನೀಡಿಲ್ಲ':
ರಾಹುಲ್ (ದ್ರಾವಿಡ್) ಭಾಯ್ ನಮಗೆ ಯಾವುದೇ ಸಲಹೆ ನೀಡಿಲ್ಲ. ಅವರು ಯಾವುದರ ಬಗ್ಗೆಯೂ ಹೆಚ್ಚೇನೂ ಚಿಂತೆ ಮಾಡದೇ, ನಿಮ್ಮ ಶಕ್ತಿ ನಂಬಿ ಆಡಲು ನನಗೆ ಮತ್ತು ಪೂಜಾರಗೆ ತಿಳಿಸಿದರು. ನಾವಿಬ್ಬರೂ ಹಲವು ವರ್ಷಗಳಿಂದ ಒಟ್ಟಿಗೆ ಆಡುತ್ತಿದ್ದು ಗೇಮ್ಪ್ಲಾನ್ ಬಗ್ಗೆ ತಿಳಿದಿದೆ. ಹಾಗಾಗಿ, ನಾವಿಬ್ಬರೂ ಹೆಚ್ಚು ತಲೆಕೆಡಿಸಿಕೊಳ್ಳದೆ ನಮ್ಮ ಬಲಕ್ಕೆ ತಕ್ಕಂತೆ ಸರಳ ಯೋಜನೆಗಳನ್ನು ರೂಪಿಸಿಕೊಳ್ಳಲು ಬಯಸುತ್ತೇವೆ ಎಂದು ರಹಾನೆ ತಿಳಿಸಿದರು.
'ರಾಹುಲ್ ಅವರನ್ನು ಮಿಸ್ ಮಾಡಿಕೊಳ್ತೇವೆ'
ಗಾಯಗೊಂಡಿರುವ ಕೆ.ಎಲ್.ರಾಹುಲ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರು ಉತ್ತಮ ಫಾರ್ಮ್ನಲ್ಲಿದ್ದು ಇಂಗ್ಲೆಂಡ್ನಲ್ಲಿ ಒಳ್ಳೆಯ ರನ್ಗಳಿಸಿದ್ದರು. ಆದರೂ ನಮ್ಮಲ್ಲಿ ಈ ಹಿಂದೆ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಆಟಗಾರರನ್ನು ಹೊಂದಿರುವುದರಿಂದ ಆರಂಭಿಕ ಸ್ಥಾನದ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂದು ಮುಂಬೈಕರ್ ಹೇಳಿದರು. ಇದೇ ಸಂದರ್ಭದಲ್ಲಿ ಮುಂಬೈನ ಸಹ ಆಟಗಾರ ಶ್ರೇಯಸ್ ಅಯ್ಯರ್ ನಾಳಿನ ಪಂದ್ಯದಲ್ಲಿ ಪದಾರ್ಪಣೆ ಮಾಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅಯ್ಯರ್ ಬಹುಶಃ ಕೊಹ್ಲಿಯ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: India vs NZ 1st Test : ಶ್ರೇಯಸ್ ಅಯ್ಯರ್ ಪದಾರ್ಪಣೆ ಖಚಿತಪಡಿಸಿದ ನಾಯಕ ರಹಾನೆ