ಕರ್ನಾಟಕ

karnataka

By

Published : Aug 3, 2023, 5:21 PM IST

ETV Bharat / sports

Manoj Tiwary Retirement: ಎಲ್ಲ ಮಾದರಿಯ ಕ್ರಿಕೆಟ್‌ಗೆ 'ಸಚಿವ' ಮನೋಜ್ ತಿವಾರಿ ವಿದಾಯ

ಪಶ್ಚಿಮ ಬಂಗಾಳ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಭಾರತ ಕ್ರಿಕೆಟ್​ ತಂಡದ ಮಾಜಿ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

manoj-tiwary-announces-retirement-from-all-forms-of-cricket
Manoj Tiwary Retirement: ಎಲ್ಲ ಮಾದರಿಯ ಕ್ರಿಕೆಟ್‌ಗೆ 'ಸಚಿವ' ಮನೋಜ್ ತಿವಾರಿ ವಿದಾಯ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತ ಕ್ರಿಕೆಟ್​ ತಂಡದ ಮಾಜಿ ಬ್ಯಾಟರ್​ ಮನೋಜ್ ತಿವಾರಿ ಗುರುವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಅತ್ಯಂತ ವಿಶಿಷ್ಟವಾದ ತಮ್ಮ ಕ್ರೀಡಾ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

2008 ಮತ್ತು 2015ರ ನಡುವೆ 12 ಅಂತಾರಾಷ್ಟ್ರೀಯ ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದ ಮನೋಜ್​ ತಿವಾರಿ ಅವರು ಸಕ್ರಿಯ ಕ್ರಿಕೆಟಿಗರಾಗಿದ್ದಾಗಲೇ ರಾಜಕೀಯಕ್ಕೆ ಪ್ರವೇಶಿಸಿದ್ದರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಕ್ಯಾಬಿನೆಟ್‌ನಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ.

ಆದರೂ, 2022-23ರ ದೇಶೀಯ ಋತುವಿನಲ್ಲಿ 37 ವರ್ಷ ವಯಸ್ಸಿನ ತಿವಾರಿ ಬಂಗಾಳ ತಂಡದ ಪರವಾಗಿ ಕ್ರಿಕೆಟ್​ಗೆ ಮರಳಿದ್ದರು. ಈಡನ್ ಗಾರ್ಡನ್ಸ್‌ನಲ್ಲಿ ಸೌರಾಷ್ಟ್ರ ವಿರುದ್ಧದ ಫೈನಲ್‌ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದೇ ತಿವಾರಿ ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವೂ ಆಗಿತ್ತು. ಇಂದು ಕ್ರಿಕೆಟ್​ಗೆ ವಿದಾಯ ಹೇಳಿರುವ ಅವರು, ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಕ್ರಿಕೆಟ್ ಆಟಕ್ಕೆ ವಿದಾಯ. ಈ ಆಟವು ನನಗೆ ಎಲ್ಲವನ್ನೂ ನೀಡಿದೆ. ನಾನು ಕನಸು ಕಾಣದ ಪ್ರತಿಯೊಂದು ವಿಷಯವನ್ನೂ ಪೂರೈಸಿದೆ. ನನ್ನ ಜೀವನವು ವಿವಿಧ ರೀತಿಯ ತೊಂದರೆಗಳು, ಸವಾಲುಗಳಿಂದ ಪ್ರಾರಂಭವಾಗಿತ್ತು. ಈ ಆಟಕ್ಕೆ ಮತ್ತು ಯಾವಾಗಲೂ ನನ್ನ ಜೊತೆಗಿರುವ ದೇವರಿಗೆ ನಾನು ಕೃತಜ್ಞರಾಗಿರುತ್ತೇನೆ' ಎಂದು ಮನೋಜ್​ ತಿವಾರಿ ಬರೆದುಕೊಂಡಿದ್ದಾರೆ.

ಬಲಗೈ ಬ್ಯಾಟರ್​ ಆಗಿರುವ ತಿವಾರಿ ಒಟ್ಟು 12 ಏಕದಿನ ಪಂದ್ಯಗಳಲ್ಲಿ 287 ರನ್ ಗಳಿಸಿದ್ದರು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಂದು ಶತಕವನ್ನೂ ಬಾರಿಸಿದ್ದರು. ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್​ ವೃತ್ತಿಜೀವನದಲ್ಲಿ 9908 ರನ್​ ಸಿಡಿಸಿದ್ದಾರೆ. 29 ಶತಕಗಳೊಂದಿಗೆ 48.56 ಸರಾಸರಿಯನ್ನು ಹೊಂದಿದ್ದಾರೆ. 2004ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ದೆಹಲಿ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಿದ್ದರು.

ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ತಿವಾರಿ ಎಂಎಸ್​ ಧೋನಿ ನೇತೃತ್ವದ ತಂಡಕ್ಕೆ ಆಯ್ಕೆಯಾಗಲು ಸುರೇಶ್ ರೈನಾ ಪೈಪೋಟಿಯನ್ನು ಎದುರಿಸಿದ್ದರು. ವಿಂಡೀಸ್ ವಿರುದ್ಧ ಶತಕ ಬಾರಿಸಿದ ನಂತರ ತಿವಾರಿ 14 ಏಕದಿನ ಪಂದ್ಯಗಳಲ್ಲಿ ಬೆಂಚ್​ ಕಾಯಬೇಕಾಯಿತು. ತಿವಾರಿ ತಂಡಕ್ಕೆ ಹಿಂದಿರುಗಿದಾಗ ಎರಡು ಪಂದ್ಯಗಳಲ್ಲಿ 65 ರನ್ ಮತ್ತು ನಾಲ್ಕು ವಿಕೆಟ್​ಗಳನ್ನು ಪಡೆದಿದ್ದರು. ಆದರೆ, ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಜೊತೆಗೆ ಗಾಯದ ಸಮಸ್ಯೆ ಸಹ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತ್ತು.

2012ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಚೊಚ್ಚಲ ಐಪಿಎಲ್​ ವಿಜೇತ ತಂಡದ ಸದಸ್ಯರಾಗಿದ್ದರು. ಸಿಎಸ್​ಕೆ ವಿರುದ್ಧ 191 ರನ್ ಗುರಿ ಮುಟ್ಟಲು ಕೊನೆಯ ಓವರ್‌ನಲ್ಲಿ ಗೆಲುವಿನ ರನ್‌ಗಳನ್ನು ಬಾರಿಸಿದ್ದರು. ತಿವಾರಿ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್‌ ತಂಡಗಳನ್ನು ಪ್ರತಿನಿಧಿಸಿದ್ದರು.

2021ರಲ್ಲಿ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರುವ ಮೂಲಕ ತಿವಾರಿ ರಾಜಕೀಯಕ್ಕೆ ಪ್ರವೇಶಿಸಿದರು. ನಂತರ ಅವರಿಗೆ ಶಿಬ್‌ಪುರ್ ಕ್ಷೇತ್ರದಿಂದ ಟಿಕೆಟ್ ನೀಡಲಾಯಿತು. ಇದೇ ಕ್ಷೇತ್ರದಿಂದ ಗೆದ್ದು ಸದ್ಯ ತಿವಾರಿ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾಗಿ ಕರ್ತವ್ಯ ವಹಿಸುತ್ತಿದ್ದಾರೆ.

ಇದನ್ನೂ ಓದಿ:ICC World Cup Cricket 2023: ಒಂದಲ್ಲ ಆರು ಪಂದ್ಯಗಳ ವೇಳಾಪಟ್ಟಿ ಬದಲಾವಣೆಗೆ ಬಿಸಿಸಿಐ ಚಿಂತನೆ!?

ABOUT THE AUTHOR

...view details