ಕರ್ನಾಟಕ

karnataka

By ETV Bharat Karnataka Team

Published : Oct 27, 2023, 7:15 PM IST

ETV Bharat / sports

'ಆ ಸೋಲು ಭಾರಿ ನೋವು ತರಿಸಿತು, ಅಂದೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೆ ನಿರ್ಧರಿಸಿದ್ದೆ, ಆದರೆ..': ಭಾವನಾತ್ಮಕ ವಿಷಯ ಹಂಚಿಕೊಂಡ ಧೋನಿ- ವಿಡಿಯೋ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಂ.ಎಸ್‌.ಧೋನಿ, ತಾವು ವೈಟ್​ಬಾಲ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲು ಕಾರಣವೇನು ಎಂಬುದನ್ನು ತಿಳಿಸಿದರು.

Mahendra Singh Dhoni
Mahendra Singh Dhoni

ಬೆಂಗಳೂರು: 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​​ ವಿರುದ್ಧ ಗೆಲುವಿನ ಸಮೀಪ ಬಂದು ಸೋಲುಂಡದ್ದು ನನಗೆ ತೀವ್ರ ನೋವುಂಟು ಮಾಡಿತು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. 2019ರ ಈ ಪಂದ್ಯದ ಸೋಲಿನ ನಂತರ ಧೋನಿ ವೈಟ್‌ಬಾಲ್​ ಕ್ರಿಕೆಟ್​ಗೆ (ಏಕದಿನ) ನಿವೃತ್ತಿ ಘೋಷಿಸಿದ್ದರು.

ಇಂಗ್ಲೆಂಡ್‌ನಲ್ಲಿ ನಡೆದ ಕಳೆದ ಸಲದ ಏಕದಿನ ವಿಶ್ವಕಪ್‌ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಭಾರತ 240 ರನ್‌ಗಳ ಗುರಿ ಬೆನ್ನಟ್ಟುತ್ತಿತ್ತು. ತಂಡದ ಬ್ಯಾಟಿಂಗ್ ಲೈನಪ್ ದೊಡ್ಡ ಕೊಡುಗೆ ನೀಡುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ 77 ರನ್‌ಗಳ ಅದ್ಭುತ ಆಟವಾಡಿದ್ದರು. ಧೋನಿ ಅರ್ಧಶತಕ ಗಳಿಸಿದ್ದರು. ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಧೋನಿ ರನೌಟ್​ ಆಗಿದ್ದರಿಂದ ತಂಡ ಸೋಲನುಭವಿಸಿತ್ತು.

ಟೀಂ​ ಇಂಡಿಯಾದ ಬೆಸ್ಟ್​ ಫಿನಿಶರ್​ ಅಂದು ಪಂದ್ಯವನ್ನು ಗೆಲುವಿನೊಂದಿಗೆ ಮುಕ್ತಾಯ ಮಾಡುತ್ತಾರೆ ಎಂದೇ ಭಾರತದ ಕ್ರಿಕೆಟ್​ ಅಭಿಮಾನಿಗಳು ಮಾತ್ರವಲ್ಲ, ವಿಶ್ವಾದ್ಯಂತ ಕ್ರಿಕೆಟ್ ಪ್ರೇಕ್ಷಕರು ಕಾಯುತ್ತಿದ್ದರು. ಆದರೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ ಮೈದಾನದಲ್ಲಿ ಧೋನಿಯನ್ನು ಮಾರ್ಟಿನ್ ಗಪ್ಟಿಲ್ ರನೌಟ್ ಮಾಡಿದಾಗ, ಎಲ್ಲರ ಕನಸು ಕಮರಿ ಹೋಗಿತ್ತು. ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಅಂದಿನ ಸೋಲಿನ ಬಗ್ಗೆ ಮಾತನಾಡಿದ ಧೋನಿ, "ಆ ಸೋಲು ಭಾವನಾತ್ಮಕವಾಗಿ ನೋಯಿಸಿತ್ತು. ಹೀಗಾಗಿ ವೈಟ್‌ಬಾಲ್ ಫಾರ್ಮ್ಯಾಟ್‌ನಿಂದ ನಿವೃತ್ತಿ ಪಡೆಯುವ ಮನಸ್ಸು ಮಾಡಿದೆ" ಎಂದರು.

ಗೆಲ್ಲುವ ಪಂದ್ಯ ಸೋತಾಗ ಹೆಚ್ಚು ನೋವಾಗುತ್ತದೆ:"ನೀವು ಗೆಲ್ಲುವ ಪಂದ್ಯವನ್ನು ಕಳೆದುಕೊಂಡಾಗ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ನಾನು ನನ್ನ ಸಂಪೂರ್ಣ ಯೋಜನೆ ಮಾಡಿದ್ದೆ. ಅದು ನಾನು ಭಾರತಕ್ಕಾಗಿ ಕ್ರಿಕೆಟ್ ಆಡಿದ ಕೊನೆಯ ದಿನವಾಗಿತ್ತು. ಅದಾಗಿ ಒಂದು ವರ್ಷದ ನಂತರ ನಿವೃತ್ತಿ ತೆಗೆದುಕೊಂಡೆ. ಕ್ರಿಕೆಟಿಗರಿಗೆ ಕೆಲವು ಕಿಟ್​ಗಳನ್ನು ನೀಡಲಾಗುತ್ತದೆ. ಈ ಪಂದ್ಯದ ಬಳಿಕ ನಾನು ಅದನ್ನೆಲ್ಲಾ ಕೋಚ್​​ಗೆ ಹಿಂದಿರುಗಿಸಿದೆ. ಆದರೆ ಅವರು ಅದನ್ನು ಇಟ್ಟುಕೊಳ್ಳುವಂತೆ ನನಗೇ ಹೇಳಿದರು. ಆದರೆ ಅವರಿಗೆ ಆಗ ನಾನು ಮಾನಸಿಕವಾಗಿ ನಿವೃತ್ತಿ ತೆಗೆದುಕೊಂಡಿದ್ದರ ಬಗ್ಗೆ ಹೇಗೆ ಹೇಳಲು ಸಾಧ್ಯ?. ಆಗ ನಾನು ನನ್ನ ನಿವೃತ್ತಿಯ ಬಗ್ಗೆ ಬಹಿರಂಗಪಡಿಸಲು ಸಿದ್ಧನಿರಲಿಲ್ಲ" ಎಂದು ಧೋನಿ ತಿಳಿಸಿದರು.

ನಿವೃತ್ತಿ ನಿರ್ಧಾರ ಕಠಿಣ:ದೇಶಕ್ಕಾಗಿ ಆಡುವುದಿಲ್ಲ ಎಂದು ಹೇಳುವುದು ಕಠಿಣ ಭಾವನಾತ್ಮಕ ನಿರ್ಧಾರ ಎಂದು ಧೋನಿ ಹೇಳಿದರು. "ಹೆಚ್ಚು ಭಾವನಾತ್ಮಕವಾಗಿದ್ದಾಗ, 12-15 ವರ್ಷಗಳಲ್ಲಿ ದೇಶಕ್ಕಾಗಿ ಕ್ರಿಕೆಟ್ ಆಡುವ ಏಕೈಕ ಕೆಲಸ ಮಾಡಿರುವಾಗ, ಈ ನಿರ್ಧಾರದ ನಂತರ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುವುದಿಲ್ಲ ಎಂದೆನಿಸಿದಾಗ ಆ ಪ್ರಕಟಣೆ ಬಹಳ ಕಷ್ಟವಾಗುತ್ತದೆ. ದೇಶವನ್ನು ಪ್ರತಿನಿಧಿಸಲು ಬಹಳ ಮಂದಿ ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಂಥವರಲ್ಲಿ ಅವಕಾಶ ಪಡೆದುಕೊಂಡು ಕೆಲವೇ ಅದೃಷ್ಟವಂತರಲ್ಲಿ ನಾವಾಗಿರುತ್ತೇವೆ. ಕಾಮನ್‌ವೆಲ್ತ್ ಗೇಮ್ಸ್ ಆಗಿರಲಿ, ಒಲಿಂಪಿಕ್ಸ್ ಆಗಿರಲಿ, ಒಮ್ಮೆ ನಿವೃತ್ತಿ ಪಡೆದರೆ ನಂತರ ನಾನು ನನ್ನ ದೇಶವನ್ನು ಪ್ರತಿನಿಧಿಸುವ ಸಾಧ್ಯತೆ ಇರುವುದಿಲ್ಲ. ನಂತರ ನಮ್ಮಿಂದ ತಂಡಕ್ಕಾಗಿ ಏನೂ ಮಾಡಲಾಗದು ಎಂಬುದು ತಲೆಗೆ ಬರುತ್ತದೆ" ಎಂದರು.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿಯಲ್ಲಿ ಭಾರತ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಪ್ರಸ್ತುತ ಭಾರತ ರೋಹಿತ್​ ಶರ್ಮಾ ನಾಯಕತ್ವದಲ್ಲಿ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಅಜೇಯವಾಗಿದೆ.

"ಈ ತಂಡ ಮತ್ತು 2011ರ ತಂಡದ ನಡುವೆ ದೊಡ್ಡ ವ್ಯತ್ಯಾಸವಿದೆ. 2011ರ ವಿಶ್ವಕಪ್ ವಿಜೇತ ಭಾರತ ತಂಡವು ಸಚಿನ್ ತೆಂಡೂಲ್ಕರ್​ಗಾಗಿ ವಿಶ್ವಕಪ್ ಗೆಲ್ಲಲು ಬಯಸಿತ್ತು. ಅವರು ಸಾಕಷ್ಟು ಗೌರವ ಪಡೆದರು. ಈ ತಂಡದ ಬಗ್ಗೆ ನನಗೆ ಖಚಿತತೆ ಇಲ್ಲ. ವಿರಾಟ್ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಲು ಯಾರು ಬಯಸುತ್ತಾರೆ ಎಂಬುದು ತಿಳಿದಿಲ್ಲ. ಆದರೆ, ಅವರು ಭಾರತಕ್ಕಾಗಿ ಖಚಿತವಾಗಿ ಕಪ್ ಗೆಲ್ಲಲು ಬಯಸುತ್ತಾರೆ. ಇದು ದೊಡ್ಡ ವ್ಯತ್ಯಾಸ" ಎಂದು ಹೇಳಿದರು.

ಇದೇ ವೇಳೆ, ಧೋನಿ ಭಾರತ ತಂಡದ ತಂಡದ ಸಮತೋಲನವನ್ನು ಶ್ಲಾಘಿಸಿದರು. "ಇದು ತುಂಬಾ ಒಳ್ಳೆಯ ತಂಡ. ಬ್ಯಾಲೆನ್ಸ್ ಚೆನ್ನಾಗಿದೆ. ಎಲ್ಲಾ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಆದ್ದರಿಂದ ಎಲ್ಲವೂ ತುಂಬಾ ಚೆನ್ನಾಗಿ ಕಾಣುತ್ತಿದೆ. samajhdaar ko ishara kaafi hai (ನಾನು ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ. ಬುದ್ಧಿವಂತರಿಗೆ ಸಿಗ್ನಲ್ ಸಾಕು)" ಎಂದರು.

ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಇನ್ನೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಿಎಸ್‌ಕೆ ಇದುವರೆಗೆ ಐದು ಐಪಿಎಲ್ ಟ್ರೋಫಿ ಗೆದ್ದಿದೆ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಹೊಸ ಆಲ್​ರೌಂಡರ್‌ ಹುಡುಕಾಟ: ನೆಟ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಬೌಲಿಂಗ್ ಅಭ್ಯಾಸ!

ABOUT THE AUTHOR

...view details