ಕರ್ನಾಟಕ

karnataka

ಮಹಾರಾಜ ಟ್ರೋಫಿ: ಗೆಲುವಿನ ಲಯಕ್ಕೆ ಮರಳಿದ ಲಯನ್ಸ್, ಮೈಸೂರು ವಿರುದ್ಧ ಶಿವಮೊಗ್ಗಕ್ಕೆ ಭರ್ಜರಿ ಜಯ

By ETV Bharat Karnataka Team

Published : Aug 23, 2023, 6:59 AM IST

Updated : Aug 23, 2023, 7:17 AM IST

Shivamogga Lions beat Mysore Warriors: ಮಹಾರಾಜ ಟ್ರೋಫಿ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ ತಂಡವು 5 ವಿಕೆಟ್‌ ಗೆಲುವು ದಾಖಲಿಸಿದೆ.

maharaja-trophy-shivamogga-lions-won-against-mysore-warriors-by-5-wickets
ಮಹಾರಾಜ ಟ್ರೋಫಿ: ಗೆಲುವಿನ ಲಯಕ್ಕೆ ಮರಳಿದ ಲಯನ್ಸ್, ಮೈಸೂರು ವಿರುದ್ಧ ಶಿವಮೊಗ್ಗಕ್ಕೆ ಭರ್ಜರಿ ಜಯ

ಬೆಂಗಳೂರು :ಮಹಾರಾಜ ಟ್ರೋಫಿಯ ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಶಿವಮೊಗ್ಗ ಲಯನ್ಸ್ ತಂಡವು ಮೈಸೂರು ವಾರಿಯರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಜಯ ಗಳಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ. ಟೂರ್ನಿಯ 11ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಸೋತ ಬಳಿಕ ಆರಂಭವಾದ ಶಿವಮೊಗ್ಗದ ಸೋಲಿನ ಸರಪಳಿ ಅದೇ ತಂಡದ ವಿರುದ್ಧದ ಜಯಭೇರಿಯೊಂದಿಗೆ ಅಂತ್ಯವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ಆರಂಭಿಕರಾದ ರವಿಕುಮಾರ್ ಸಮರ್ಥ್ (17) ಹಾಗೂ ಸಿ.ಎ ಕಾರ್ತಿಕ್ (14) ಅವರ ವಿಕೆಟ್​​ ಬೇಗನೇ ಕಳೆದುಕೊಂಡಿತು. ಬಳಿಕ ಜೊತೆಯಾದ ನಾಯಕ ಕರುಣ್ ನಾಯರ್ ಹಾಗೂ ಲಂಕೇಶ್ ಕೆ.ಎಸ್ 40 ರನ್‌ಗಳ ಜೊತೆಯಾಟ ಆಡುವ ಮೂಲಕ ಮೈಸೂರಿನ ಇನ್ನಿಂಗ್ಸ್​ಗೆ ಬಲ ನೀಡಿದರು​. ಈ ಹಂತದಲ್ಲಿ ಪ್ರಣವ್ ಭಾಟಿಯಾ ಬೌಲಿಂಗ್‌ನಲ್ಲಿ ಲಂಕೇಶ್ ವಿಕೆಟ್ ಒಪ್ಪಿಸಿದರು. ಬಳಿಕ ಅನುಭವಿ ಆಟಗಾರ ಶೋಯೆಬ್ ಮ್ಯಾನೇಜರ್ (14), ಶ್ರೇಯಸ್ ಗೋಪಾಲ್ ಎಸೆತದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಮೈಸೂರು ವಾರಿಯರ್ಸ್ - ಶಿವಮೊಗ್ಗ ಲಯನ್ಸ್ ಪಂದ್ಯ

ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ ಶಿವಮೊಗ್ಗ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದ ಕರುಣ್ ನಾಯರ್ 16ನೇ ಓವರ್‌ನಲ್ಲಿ ರನೌಟ್​​ಗೆ ಬಲಿಯಾದರು. ಕೆಳ ಕ್ರಮಾಂಕದಲ್ಲಿ ಮನೋಜ್ ಭಾಂಡಗೆ 20 ಹಾಗೂ ಜೆ.ಸುಚಿತ್ 18 ರನ್ ಗಳಿಸುವ ಮೂಲಕ ತಂಡಕ್ಕೆ ಅಲ್ಪ ನೆರವಾದರು. ಅಂತಿವಾಗಿ 8 ವಿಕೆಟ್‌ ಕಳೆದುಕೊಂಡ ಮೈಸೂರು ವಾರಿಯರ್ಸ್ 162 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ತಂಡ ತನ್ನ 5ನೇ ಓವರ್‌ನಲ್ಲಿ ರೋಹನ್ ಕದಂ (15) ವಿಕೆಟ್ ಕಳೆದುಕೊಂಡಿತು. ನಂತರ ಬಂದ ರೋಹನ್ ನವೀನ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಭರವಸೆಯ ಆರಂಭ ಪಡೆದ ರೋಹಿತ್ ಕುಮಾರ್ ಕೂಡ 12 ರನ್ ಗಳಿಸಿದ್ದಾಗ ಕಶಾಲ್ ವಾಧ್ವಾನಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಆದರೆ ಮತ್ತೊಂದು ತುದಿಯಲ್ಲಿದ್ದ ಆರಂಭಿಕ ಆಟಗಾರ ನಿಹಾಲ್ ಉಲ್ಲಾಳ್, ಅಭಿನವ್ ಮನೋಹರ್ ಜೊತೆಗೂಡಿ 38 ರನ್‌ಗಳ ಜೊತೆಯಾಟ ಆಡುವ ಮೂಲಕ ನಿರ್ಣಾಯಕ ಪಾತ್ರ ನಿರ್ವಹಿಸಿದರು.

ಮೈಸೂರು ವಾರಿಯರ್ಸ್ - ಶಿವಮೊಗ್ಗ ಲಯನ್ಸ್ ಪಂದ್ಯ

ಈ ಹಂತದಲ್ಲಿ ದಾಳಿಗಿಳಿದ ಮೋನೀಶ್ ರೆಡ್ಡಿ, ತಮ್ಮ ಮುಂದಿನ ಎರಡು ಓವರ್‌ಗಳಲ್ಲಿ ನಿಹಾಲ್ ಉಲ್ಲಾಳ್ (46) ಹಾಗೂ ಅಭಿನವ್ ಮನೋಹರ್ (27) ಅವರನ್ನು ಪೆವಿಲಿಯನ್​ಗೆ ಕಳಿಸುವಲ್ಲಿ ಯಶಸ್ವಿಯಾದರು. ಕೆಳ ಕ್ರಮಾಂಕದಲ್ಲಿ ಬಂದ ಕ್ರಾಂತಿ ಕುಮಾರ್ 20 ರನ್ ಕೊಡುಗೆ ನೀಡಿ ವಾಪಸ್​ ಆದರು. ಎರಡು ಓವರ್‌ಗಳಲ್ಲಿ ಶಿವಮೊಗ್ಗ ಗೆಲುವಿಗೆ 24 ರನ್‌ಗಳ ಅಗತ್ಯವಿದ್ದಾಗ 19ನೇ ಓವರ್ ಎಸೆದ ಮನೋಜ್ ಭಾಂಡಗೆ ಮೈಸೂರಿಗೆ ದುಬಾರಿಯಾದರು. ಶಿವರಾಜ್ ಸಿಡಿಸಿದ ಎರಡು ಸಿಕ್ಸರ್‌ಗಳ ಸಹಿತ 19ನೇ ಓವರ್‌ನಲ್ಲಿ ಶಿವಮೊಗ್ಗಕ್ಕೆ 19 ರನ್‌ಗಳು ಹರಿದು ಬಂದವು. ಹೀಗಾಗಿ ಅಂತಿಮ ಓವರ್‌ನಲ್ಲಿ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಶಿವಮೊಗ್ಗ ಲಯನ್ಸ್ ಅನಾಯಾಸವಾಗಿ ಶಿವಮೊಗ್ಗ 5 ವಿಕೆಟ್ ಅಂತರದಿಂದ ಗೆಲುವಿನ ನಗೆ ಬೀರಿತು.

ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್ - 162/8 (20); ಕರುಣ್ ನಾಯರ್ - 46 ರನ್​ (33 ಎಸೆತ), ಲಂಕೇಶ್ ಕೆ.ಎಸ್ - 25 (19), ವಿ.ಕೌಶಿಕ್ - 27ಕ್ಕೆ 2 ವಿಕೆಟ್​, ಕ್ರಾಂತಿ ಕುಮಾರ್ - 40ಕ್ಕೆ 2

ಶಿವಮೊಗ್ಗ ಲಯನ್ಸ್ -163/5 (19.4); ನಿಹಾಲ್ ಉಲ್ಲಾಳ್ - 45 ರನ್ (39 ಎಸೆತ), ಅಭಿನವ್ ಮನೋಹರ್ - 27 (27), ಮೋನಿಶ್ ರೆಡ್ಡಿ - 28ಕ್ಕೆ 2 ವಿಕೆಟ್​​, ಕುಶಾಲ್ ವಾಧ್ವಾನಿ - 10ಕ್ಕೆ 1, ಪಂದ್ಯ ಶ್ರೇಷ್ಠ- ಕ್ರಾಂತಿ ಕುಮಾರ್

ಇದನ್ನೂ ಓದಿ:ಬೆಂಗಳೂರು ಬ್ಲಾಸ್ಟರ್ಸ್‌ಗೆ ಸತತ ಸೋಲು; ಹುಬ್ಬಳ್ಳಿ ಟೈಗರ್ಸ್​ ಸಾಂಘಿಕ ಹೋರಾಟಕ್ಕೆ ದಕ್ಕಿದ ಗೆಲುವು

Last Updated : Aug 23, 2023, 7:17 AM IST

ABOUT THE AUTHOR

...view details