ಕರ್ನಾಟಕ

karnataka

'ನನ್ನ 15 ವರ್ಷಗಳ ಕ್ರಿಕೆಟ್​ ಬದುಕಿನಲ್ಲಿ ಇಂತಹ ಕೆಳಮಟ್ಟದ ಆಟಗಾರ, ತಂಡವನ್ನು ನೋಡಿಲ್ಲ'

By ETV Bharat Karnataka Team

Published : Nov 7, 2023, 2:05 PM IST

Updated : Nov 7, 2023, 2:27 PM IST

Angelo Mathews on Shakib Al Hasan: ಕಳೆದ 15 ವರ್ಷಗಳ ನನ್ನ ಅಂತರರಾಷ್ಟ್ರಿಯ ಕ್ರಿಕೆಟ್​ ಆಟದಲ್ಲಿ ಇಂತಹ ಕೆಳಮಟ್ಟದ ಯಾವುದೇ ತಂಡ ಅಥವಾ ಆಟಗಾರನನ್ನು ನೋಡಿಲ್ಲ ಎಂದು ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಅವರು ಬಾಂಗ್ಲಾದೇಶ​ ತಂಡದ ನಾಯಕ ಶಕೀಬ್​ ಅಲ್​ ಹಸನ್​ ವಿರುದ್ಧ ಕಿಡಿಕಾರಿದ್ದಾರೆ.

Angelo Mathews
ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್

ನವದೆಹಲಿ:ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ 'ಟೈಮ್​ ಔಟ್​' ನೀತಿಯಿಂದ ಯಾವುದೇ ಎಸೆತ ಎದುರಿಸದೇ ಔಟಾದ ಶ್ರೀಲಂಕಾದ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್​ ಅವರು ಬಾಂಗ್ಲಾದೇಶ​ ತಂಡ ಹಾಗೂ ನಾಯಕ ಶಕೀಬ್​ ಅಲ್​ ಹಸನ್​ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎದುರಾಳಿ ತಂಡದ ಕ್ರಮವು ನಿಸ್ಸಂಶಯವಾಗಿ ಅವಮಾನಕರವಾಗಿದೆ. ಕಳೆದ 15 ವರ್ಷಗಳ ನನ್ನ ಅಂತರರಾಷ್ಟ್ರಿಯ ಕ್ರಿಕೆಟ್​ ಆಟದಲ್ಲಿ ಇಂತಹ ಕೆಳಮಟ್ಟದ ಯಾವುದೇ ತಂಡ ಅಥವಾ ಆಟಗಾರನನ್ನು ನೋಡಿಲ್ಲ ಎಂದರು.

ಕ್ರಿಕೆಟ್​ ನಿಯಮಗಳ ಪ್ರಕಾರ, ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ನ ನಿವೃತ್ತಿಯ ಬಳಿಕ ಬರುವ ಬ್ಯಾಟರ್​ 2 ನಿಮಿಷಗಳಲ್ಲಿ ಮುಂದಿನ ಚೆಂಡನ್ನು ಎದುರಿಸಲು ಸಿದ್ಧರಾಗಿಬೇಕು. ಇದನ್ನು ಪೂರೈಸದಿದ್ದರೆ ಆಟಗಾರ ಔಟ್​ ಎಂದು ಘೋಷಿಸಲಾಗುತ್ತದೆ. ಇದಕ್ಕೆ 'ಟೈಮ್​ ಔಟ್'​ ಎಂದು ಕರೆಯಲಾಗುತ್ತದೆ. ದೆಹಲಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ಆಲ್​ರೌಂಡರ್​ ಏಂಜೆಲೊ ಮ್ಯಾಥ್ಯೂಸ್ ತಮ್ಮ ಮೊದಲ ಚೆಂಡನ್ನು ಎದುರಿಸಲು ಎರಡು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಬಾಂಗ್ಲಾ ನಾಯಕ, ಬೌಲರ್​ ಶಕೀಬ್​ ಅಲ್​ ಹಸನ್ ಮನವಿ ಮೇರೆಗೆ ಎಸೆತ ಎದುರಿಸುವ ಮುನ್ನವೇ ಪೆವಿಲಿಯನ್‌ಗೆ ಮರಳಬೇಕಾಯಿತು. ಈ ಮೂಲಕ ಮ್ಯಾಥ್ಯೂಸ್​ ಅಂತರರಾಷ್ಟ್ರೀಯ ಕ್ರಿಕೆಟ್​ ಇತಿಹಾಸದಲ್ಲಿ 'ಟೈಮ್​ ಔಟ್​'ಗೆ ಗುರಿಯಾದ ಮೊದಲ ಆಟಗಾರ ಎಂದೆನಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಲಂಕಾ ಆಟಗಾರ, ''ಇದು ನಿಜವಾಗಿಯೂ ಶಕೀಬ್​ ಹಾಗೂ ಬಾಂಗ್ಲಾದೇಶದಿಂದ ನಡೆದ ಅವಮಾನ. ಇಂತಹ ಕೆಳಮಟ್ಟದ ವರ್ತನೆಯಿಂದ ಅವರು ವಿಕೆಟ್​ ಪಡೆಯಲು ಬಯಸಿದ್ದರೆ, ಅದು ತೀರಾ ತಪ್ಪು. ಬಾಂಗ್ಲಾದೇಶ ಆಟದ ನಡೆಯು ತುಂಬಾ ನಿರಾಶಾದಾಯಕ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

''ನಾನು ಎರಡು ನಿಮಿಷದೊಳಗೆ ಕ್ರೀಸ್​ಗೆ ಬಂದಿದ್ದೆ. ಕ್ರೀಸ್​ನಲ್ಲಿದ್ದಾಗಲೇ ಹೆಲ್ಮೆಟ್​ ಪಟ್ಟಿ ಒಡೆದಿತ್ತು. ಇದನ್ನು ಅಂಪೈರ್​ ಕೂಡ ಗಮನಿಸಿದರು. ಇನ್ನೂ ಐದು ಸೆಕೆಂಡ್​​ಗಳು ಬಾಕಿ ಇತ್ತು. ಬಳಿಕ ನಾನು ಹೆಲ್ಮೆಟ್​ ತೋರಿಸಿದ ನಂತರ ಅಂಪೈರ್​, ಬಾಂಗ್ಲಾದೇಶದ ಮನವಿ ಬಗ್ಗೆ ತಿಳಿಸಿದರು. ಹೀಗಾಗಿ ನನ್ನ ಎರಡು ನಿಮಿಷಗಳು ಇನ್ನೂ ಕಳೆದಿಲ್ಲ. ನಿಮಗೆ ಸಾಮಾನ್ಯ ಜ್ಞಾನ ಎಲ್ಲಿದೆ ಎಂದು ನಾನು ಕೇಳಿದೆ'' ಎಂದು ಮ್ಯಾಥ್ಯೂಸ್ ವಿವರಿಸಿದರು.

ಮುಂದುವರೆದು ಮಾತನಾಡಿ, "ಈ ಘಟನೆಯನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ನನ್ನ 15 ವರ್ಷಗಳ ಆಟದಲ್ಲಿ ಇಷ್ಟು ಕೆಳಮಟ್ಟಕ್ಕಿಳಿದ ತಂಡ ಅಥವಾ ಆಟಗಾರನನ್ನು ನಾನು ನೋಡಿಲ್ಲ'' ಎಂದ ಲಂಕಾದ ಅನುಭವಿ ಆಟಗಾರ, ''ಇವತ್ತಿನವರೆಗೂ ನಾನು ಬಾಂಗ್ಲಾದೇಶ ತಂಡದ ಬಗ್ಗೆ ಅತ್ಯಂತ ಗೌರವ ಹೊಂದಿದ್ದೆ. ನಾವೆಲ್ಲರೂ ಗೆಲ್ಲಬೇಕೆಂದೇ ಆಡುತ್ತೇವೆ. ಅದು ನಿಯಮಗಳೊಳಗೆ ಆದರೆ ಒಳ್ಳೆಯದು'' ಎಂದರು.

ಅಲ್ಲದೇ, ''ಎರಡು ನಿಮಿಷಗಳಲ್ಲಿ ನಾನು ಸ್ಪಷ್ಟವಾಗಿ ಕ್ರೀಸ್​ಗೆ ಬಂದೆ. ನಮ್ಮ ಬಳಿ ವಿಡಿಯೋ ಪುರಾವೆಗಳಿವೆ. ನಾನು ಪುರಾವೆಯೊಂದಿಗೆ ಮಾತನಾಡುತ್ತಿದ್ದೇನೆ. ಕ್ಯಾಚ್ ಪಡೆದ ಸಮಯದಿಂದ ನಾನು ಕ್ರೀಸ್‌ಗೆ ಕಾಲಿಡುವವರೆಗೆ ಹಾಗೂ ನನ್ನ ಹೆಲ್ಮೆಟ್ ಮುರಿದ ನಂತರವೂ ಇನ್ನೂ ಐದು ಸೆಕೆಂಡ್​ಗಳು ಬಾಕಿ ಇತ್ತು. ಶಕೀಬ್ ಮನವಿಯನ್ನು ಹಿಂತೆಗೆದುಕೊಳ್ಳುವ ಆಯ್ಕೆ ಹೊಂದಿದ್ದರು. ಇದು ಸಮಯ ವ್ಯರ್ಥವಲ್ಲ ಎಂದು ಅವರು ಕೂಡ ತಿಳಿದಿದ್ದರು. ನನ್ನ ಸಮಯದೊಳಗೆ ನಾನು ಅಲ್ಲಿದ್ದೆ. ನಾನು ಸಮಯ ವ್ಯರ್ಥ ಮಾಡಲು ಪ್ರಯತ್ನಿಸಿಲ್ಲ'' ಎಂದು ಹೇಳಿದರು.

ಈ ಘಟನೆಯಿಂದಾಗಿ ಪಂದ್ಯದ ಬಳಿಕ ಬಾಂಗ್ಲಾದೇಶದ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಶ್ರೀಲಂಕಾ ತಂಡ ನಿರಾಕರಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ''ನಮ್ಮನ್ನು ಗೌರವಿಸುವ ಜನರನ್ನು ನಾವು ಗೌರವಿಸಬೇಕು. ಅಂಪೈರ್‌ಗಳು ಸೇರಿದಂತೆ ನಾವೆಲ್ಲರೂ ಸುಂದರ ಆಟದ ರಾಯಭಾರಿಗಳು. ನೀವು ಗೌರವಿಸದಿದ್ದರೆ ಮತ್ತು ನಿಮ್ಮ ಸಾಮಾನ್ಯ ಜ್ಞಾನವನ್ನು ಬಳಸದಿದ್ದರೆ, ಇದಕ್ಕೆ ಇನ್ನೇನು ಹೇಳಬೇಕು?'' ಎಂದರು. (ಐಎಎನ್​ಎಸ್​)

ಇದನ್ನೂ ಓದಿ:ತಡವಾಗಿ ಮೈದಾನಕ್ಕಿಳಿದ ಏಂಜೆಲೊ ಮ್ಯಾಥ್ಯೂಸ್ ಔಟ್​.. ಏನಿದು ಟೈಮ್​ ಔಟ್​ ನೀತಿ?

Last Updated : Nov 7, 2023, 2:27 PM IST

ABOUT THE AUTHOR

...view details