ಬೆಂಗಳೂರು: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 7 ರನ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲೊಪ್ಪಿಕೊಂಡಿದೆ. 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಲಷ್ಟೇ ಆರ್ಆರ್ ಬ್ಯಾಟರ್ಗಳಿಗೆ ಸಾಧ್ಯವಾಯಿತು. ಆರ್ಸಿಬಿಯ ನಿಯಂತ್ರಿತ ಬೌಲಿಂಗ್ನಿಂದ ಗ್ರೀನ್ ಜರ್ಸಿಯಲ್ಲಿ ಮತ್ತೊಂದು ಗೆಲುವು ದಾಖಲಾಗಿದೆ.
ಆರ್ಸಿಬಿ ಕೊಟ್ಟಿದ್ದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ್ದ ರಾಯಲ್ಸ್ಗೆ ಉತ್ತಮ ಲಯದಲ್ಲಿರುವ ಬಟ್ಲರ್ ವಿಕೆಟನ್ನು ಉರುಳಿಸುವ ಮೂಲಕ ಸಿರಾಜ್ ಆರಂಭಿಕ ಆಘಾತ ನೀಡಿದರು. ಆದರೆ ನಂತರ ಬಂದ ಆರ್ಸಿಬಿ ಎಕ್ಸ್ ಆಟಗಾರ ದೇವದತ್ ಪಡಿಕ್ಕಲ್ ಮತ್ತೋರ್ವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆ ಸೇರಿ ಉತ್ತಮ ರನ್ ಕಲೆಹಾಕಿದರು.
ಈ ಜೋಡಿ 89 ರನ್ನ ಜೊತೆಯಾಟ ಆಡಿತು. 34 ಬಾಲ್ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸ್ನಿಂದ ಪಡಿಕ್ಕಲ್ 52 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 37 ಎಸೆತದಲ್ಲಿ 47 ರನ್ ಗಳಸಿ 3 ರನ್ನಿಂದ ಅರ್ಧಶತಕದಿಂದ ವಂಚಿತರಾದರು. ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಅಬ್ಬರಿಸುವ ಮುನ್ಸೂಚನೆ ನೀಡಿದರು. ಆದರೆ, 22 ರನ್ ಗಳಿಸಿ ಔಟ್ ಆದರು. ಶಿಮ್ರಾನ್ ಹೆಟ್ಮೆಯರ್ 3 ರನ್ ಗಳಿಸಿದಾಗ ರನ್ ಔಟ್ಗೆ ಬಲಿಯಾದರು.
ಕೊನೆಯಲ್ಲಿ ಧ್ರುವ ಜುರೆಲ್ ಮತ್ತು ರವಿಚಂದ್ರನ್ ಅಶ್ವಿನ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಆದರೆ 12 ರನ್ ಗಳಸಿದ ಅಶ್ವಿನ್ ಹರ್ಷಲ್ಗೆ ವಿಕೆಟ್ ಕೊಟ್ಟರು. ಧ್ರುವ ಜುರೆಲ್ ಅಜೇಯರಾಗಿ 34 ರನ್ ಗಳಿಸಿದರಾದರೂ, ಗೆಲುವಿನ ರನ್ ಕದಿಯುವಲ್ಲಿ ವಿಫಲರಾದರು. ಇದರಿಂದ ರಾಜಸ್ಥಾನ ರಾಯಲ್ಸ್ 7 ರನ್ನ ಸೋಲನುಭವಿಸಿತು.
ಆರ್ಸಿಬಿ ಪರ ಹರ್ಷಲ್ ಪಟೇಲ್ 3 ಮತ್ತು ಸಿರಾಜ್, ಡೇವಿಡ್ ವಿಲ್ಲಿ ತಲಾ ಒಂದು ವಿಕೆಟ್ ಪಡೆದರು. 77 ರನ್ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಮ್ಯಾಕ್ಸ್ವೆಲ್ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಶೂನ್ಯ ಪತನದ ನಂತರ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ನಷ್ಟದಿಂದ 189 ರನ್ ಗಳಿಸಿದೆ. ಇಬ್ಬರ ಬೃಹತ್ ಜೊತೆಯಾಟ ಬ್ರೇಕ್ ಆದ ನಂತರ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಆರ್ಸಿಬಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ 190 ರನ್ ಸಾಧಾರಣ ಗುರಿಯನ್ನು ನೀಡಿತು.