ಕರ್ನಾಟಕ

karnataka

By

Published : Apr 24, 2023, 1:14 AM IST

Updated : Apr 24, 2023, 6:20 AM IST

ETV Bharat / sports

ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಧೋನಿ ಪಡೆ.. ಪಾಯಿಂಟ್​ ಪಟ್ಟಿಯಲ್ಲಿ ಸಿಎಸ್​​ಕೆ ನಂಬರ್​ ಒನ್​

ಸಿಎಸ್​​ಕೆ ಮತ್ತೆ ಜಯದ ಲಯಕ್ಕೆ ಮರಳಿದೆ. ಈ ಮೂಲಕ ಧೋನಿ ಪಡೆ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಧೋನಿ ಪಡೆ
ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಧೋನಿ ಪಡೆ

ಕೋಲ್ಕತ್ತಾ: ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್​ ಭರ್ಜರಿ ಜಯ ಸಾಧಿಸಿದೆ. ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್‌ ಪರ 29 ಎಸೆತಗಳಲ್ಲಿ 71 ರನ್ ಗಳಿಸಿ ಮಿಂಚಿದರು. ಈಡನ್ ಗಾರ್ಡನ್ಸ್​ನಲ್ಲಿ ನೆರದಿದ್ದ ಸಹಸ್ರಾರು ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾಗಿ ಭರ್ಜರಿ ಬ್ಯಾಟ್​ ಬೀಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳಿಂದ ಭರ್ಜರಿ ಜಯಗಳಿಸಲು ಕಾರಣರಾದರು.

ಟೆಸ್ಟ್​ ಪಂದ್ಯಗಳಿಂದ ಟಿ -20 ಪಂದ್ಯಗಳಿಗೆ ಹೊಂದಿಕೊಂಡಂತೆ ಕಂಡು ಬರುತ್ತಿರುವ ಅಜಿಂಕ್ಯಾ ರಹಾನೆ, ತಮ್ಮ ಸಂವೇದನಾಶೀಲ ಸ್ಟ್ರೋಕ್-ಪ್ಲೇ ಮೂಲಕ ಈಡನ್ ಗಾರ್ಡನ್ಸ್ ನಲ್ಲಿ ರನ್​ಗಳ ಹೊಳೆಯನ್ನೇ ಹರಿಸಿದರು. ಶಿವಂ ದುಬೆ 21 ಎಸೆತಗಳಲ್ಲಿ 50 ಮತ್ತು ಡೆವೊನ್ ಕಾನ್ವೇ 40 ಎಸೆತಗಳಲ್ಲಿ 56 ರನ್​ಗಳನ್ನ ಸಿಡಿಸುವ ಮೂಲಕ CSK ಭವ್ಯವಾದ 235 ರನ್ ಗಳಿಸಲು ನೆರವಾದರು.

ಧೋನಿ ನೇತೃತ್ವದ ಸಿಎಸ್​​ಕೆ ತಂಡದ ಈ ಬೃಹತ್​ ಮೊತ್ತ ಬೆನ್ನಟ್ಟಿದ ಶಾರೂಖ್​ ಮಾಲಿಕತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ, ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಬರೋಬ್ಬರಿ 49 ರನ್ ಗಳ ಅಂತರದಲ್ಲಿ ಪರಾಭವಗೊಂಡಿತು.

ಇನ್ನು ಕೆಕೆಆರ್​ ಪರ ಜೇಸನ್ ರಾಯ್ 61 ರನ್ ಮತ್ತು ರಿಂಕು ಸಿಂಗ್ ಅಜೇಯ 53ರನ್ ಗಳನ್ನು ಬಾರಿಸಿ ಗೆಲುವಿಗಾಗಿ ಕೊನೆವರೆಗೂ ಹೋರಾಟ ನಡೆಸಿದರಾದರೂ ಧೋನಿ ಬಳಗದ ಬೃಹತ್ ರನ್​​ಗಳ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಚೆನ್ನೈ ತಂಡದ ಪರ ತುಷಾರ್ ದೇಶಪಾಂಡೆ ಮತ್ತು ಮಹೀಶ್ ತೀಕ್ಷ್ಣ ತಲಾ 2 ವಿಕೆಟ್ ಪಡೆದರೆ, ಆಕಾಶ್ ಸಿಂಗ್, ಮೊಯಿನ್ ಅಲಿ, ಜಡೇಜಾ ಮತ್ತು ಪತಿರಣ ತಲಾ 1 ವಿಕೆಟ್ ಪಡೆದರು.

ಇನ್ನು ಚೆನ್ನೈ ಸೂಪರ್​ ಕಿಂಗ್ಸ್​ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. 10 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಈ ವರ್ಷ ಜಯದ ಹಾದಿಗೆ ಮರಳಿ ಗಮನ ಸೆಳೆದಿದೆ. ಆದರೆ ಕೆಕೆಆರ್ ಐದನೇ ಸೋಲಿನ ನಂತರ 10 ತಂಡಗಳಲ್ಲಿ ಎಂಟನೇ ಸ್ಥಾನದಲ್ಲಿದೆ.

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಧೋನಿ ಆಟ ನೋಡಲು ಬಂದ ಪ್ರೇಕ್ಷಕರು ಇಂದು ನಿರಾಸೆಗೊಳ್ಳಲಿಲ್ಲ. ಧೋನಿ ತಂಡದ ಮನಮೋಹಕ ಆಟ ನೋಡಿ ಖುಷಿಯಾದರು. ಅದರಲ್ಲೂ ರಹಾನೆ ಭರ್ಜರಿ ಬ್ಯಾಟಿಂಗ್ ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ಪಂದ್ಯದ ಬಳಿಕ ಮಾತನಾಡಿದ ಧೋನಿ, ಅಭಿಮಾನಿಗಳ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ, ಅವರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಮುಂದಿನ ಬಾರಿ ಕೆಕೆಆರ್ ಜೆರ್ಸಿಯಲ್ಲಿ ಬರುತ್ತಾರೆ. ಅವರು ನನಗೆ ವಿದಾಯವನ್ನು ಹೇಳಲು ಬರುತ್ತಿದ್ದಾರೆ. ಆದ್ದರಿಂದ ಪ್ರೇಕ್ಷಕರಿಗೆ ತುಂಬಾ ಧನ್ಯವಾದಗಳು ಎಂದರು.

Last Updated : Apr 24, 2023, 6:20 AM IST

ABOUT THE AUTHOR

...view details