ಕರ್ನಾಟಕ

karnataka

ಸಿಕಂದರ್‌-ಶಾರುಖ್ ಗೆಲುವಿನ ಓಟ! ಚೆನ್ನೈ ಬೇಟೆಯಾಡಿದ ಪಂಜಾಬ್​​ ಕಿಂಗ್ಸ್‌

ಪಂಜಾಬ್​ ಕಿಂಗ್ಸ್​ ವಿರುದ್ಧ ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಮೊದಲು ಬ್ಯಾಟಿಂಗ್​ ಮಾಡಿತು. ಆದರೆ ಸಾಂಘಿಕ ಪ್ರದರ್ಶನದ ಫಲವಾಗಿ ಪಂಜಾಬ್ ಪಂದ್ಯ ಗೆದ್ದು ಬೀಗಿತು.

By

Published : Apr 30, 2023, 3:24 PM IST

Published : Apr 30, 2023, 3:24 PM IST

Updated : Apr 30, 2023, 7:49 PM IST

Etv Bharat
Etv Bharat

ಚೆನ್ನೈ (ತಮಿಳುನಾಡು): ಕೊನೆಯ ಎರಡು ಓವರ್​ನಲ್ಲಿ ಸಿಕಂದರ್ ರಾಜಾ ಮತ್ತು ಶಾರುಖ್ ಖಾನ್ ಅವರ ಚಾಣಾಕ್ಷ್ಯ ಬ್ಯಾಟಿಂಗ್​ನಿಂದಾಗಿ ಚೆನ್ನೈ ವಿರುದ್ಧ ಪಂಜಾಬ್​ 4 ವಿಕೆಟ್​ಗಳ ಗೆಲುವು ದಾಖಲಿಸಿತು. ಕೊನೆಯ ಎರಡು ಓವರ್​ನಲ್ಲಿ ಪಂಜಾಬ್​ಗೆ 22 ರನ್​ ಬೇಕಿತ್ತು. 19ನೇ ಓವರ್​ನಲ್ಲಿ ರಾಜಾ ಮತ್ತು ಶಾರುಖ್ ಜೋಡಿ ತುಷಾರ್​ ದೇಶಪಾಂಡೆ ಓವರ್​ನಲ್ಲಿ 13 ರನ್​ ಗಳಿಸಿದರು. ಕೊನೆಯ ಓವರ್​ಗೆ 9 ರನ್​ ಬೇಕಿತ್ತು. ಬೌಂಡರಿ, ಸಿಕ್ಸ್ ಇಲ್ಲದೇ ಬರೀ ಓಟದಿಂದಲೇ ಈ ಇಬ್ಬರು ಬ್ಯಾಟರ್​ಗಳು ವಿಜಯದ ರನ್​ ಕಲೆಹಾಕಿ ಸಂಭ್ರಮಿಸಿದರು.

8 ಮಂದಿ ಬ್ಯಾಟರ್​ಗಳ ಸಹಾಯದಿಂದ ಪಂಜಾಬ್​ ಕಿಂಗ್ಸ್​ ಚೆನ್ನೈನ ತವರು ನೆಲದಲ್ಲಿಯೇ ಗೆದ್ದು ಬೀಗಿತು. ಚೆನ್ನೈ ನೀಡಿದ್ದ 200 ರನ್​ ಗುರಿ ಬೆನ್ನತ್ತಿದ ಪಂಜಾಬ್‌ಗೆ 50 ರನ್​ ಆರಂಭಿಕರ ಜೊತೆಯಾಟ ಸಿಕ್ಕಿತು. ನಾಯಕ ಶಿಖರ್​ ಧವನ್​ ಬೇಗ ವಿಕೆಟ್​ ಒಪ್ಪಿಸಿದ್ದರು. ಇಂದು 15 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 1 ಸಿಕ್ಸ್​ನಿಂದ 28 ರನ್​ ಕಲೆಹಾಕಿ ಔಟಾದರು.

ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿದ ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ ಭರ್ಜರಿ ಇನ್ನಿಂಗ್ಸ್​ ಕಟ್ಟಿದರು. 24 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸ್​ನಿಂದ 42 ರನ್​ ಕಲೆಹಾಕಿದರು. ಅಥರ್ವ ಟೈಡೆ (13) ಹೆಚ್ಚು ಹೊತ್ತು ಆಡಲಿಲ್ಲ. ಲಿಯಾಮ್ ಲಿವಿಂಗ್‌ಸ್ಟೋನ್ ವೇಗವಾಗಿ 24 ಬಾಲ್​ನಲ್ಲಿ 40 ರನ್​ ಗಳಿಸಿ ಔಟಾದರು. ಸ್ಯಾಮ್ ಕರನ್​ (29) ಮತ್ತು ಜಿತೇಶ್ ಶರ್ಮಾ (21) ಕೊನೆಯಲ್ಲಿ ತಂಡದ ಮೊತ್ತವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಆದರೆ ಅಂತಿಮವಾಗಿ ಶಾರುಖ್ ಖಾನ್ (2) ಮತ್ತು ಸಿಕಂದರ್ ರಾಜಾ (13) ಪಂದ್ಯ ಗೆಲ್ಲಿಸಿಕೊಟ್ಟರು. ಕೊನೆಯ ಬಾಲ್​ಗೆ ಮೂರು ರನ್​ ಓಡಿ, ಪಂದ್ಯ ಸೂಪರ್​ ಓವರ್​ಗೆ ಹೋಗುವುದನ್ನು ತಪ್ಪಿಸಿದರು.

ಇದಕ್ಕೂ ಮುನ್ನ, ಡೆವೊನ್ ಕಾನ್ವೆ ಅವರ ಆಕರ್ಷಕ 92 ರನ್‌ಗಳ ಇನ್ನಿಂಗ್ಸ್​ ಬಲದಿಂದ ಚೆನ್ನೈ ಸೂಪರ್​ ಕಿಂಗ್ಸ್​ ನಿಗದಿತ 20 ಓವರ್‌ಗಳ​ ಅಂತ್ಯಕ್ಕೆ 4 ವಿಕೆಟ್​ ನಷ್ಟಕ್ಕೆ 200 ರನ್​ ಗಳಿಸಿತು. ಪಂಜಾಬ್​ ಕಿಂಗ್ಸ್​ ತಂಡದ ಐವರು ಬೌಲರ್​ಗಳು ಸರಾಸರಿ 30ಕ್ಕಿಂತ ಹೆಚ್ಚು ರನ್​ ಚಚ್ಚಿಸಿಕೊಂಡರು. ಪಂಜಾಬ್‌ ಗೆಲುವಿಗೆ 201 ರನ್‌ ಬೇಕಿತ್ತು.

ಟಾಸ್​ ಗೆದ್ದು ಬ್ಯಾಟಿಂಗ್​ಗಿಳಿದ ಚೆನ್ನೈ ಎಂದಿನಂತೆ ಉತ್ತಮ ಆರಂಭ ಕಂಡಿತು. ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ 86 ರನ್‌ಗಳ ಜೊತೆಯಾಟ ನೀಡಿದರು. ಗಾಯಕ್ವಾಡ್ ಎಂದಿನಂತೆ ವೇಗವಾಗಿ ರನ್​ ಗಳಿಸಲಿಲ್ಲ. 119.35 ಸ್ಟ್ರೈಕ್​ ರೇಟ್​​ನಲ್ಲಿ ಬ್ಯಾಟಿಂಗ್‌ ಮಾಡಿ 37 ರನ್​ ಕಲೆ ಹಾಕಿ ವಿಕೆಟ್​ ಒಪ್ಪಿಸಿದರು.

ರಾಜಸ್ಥಾನ ರಾಯಲ್ಸ್​​ ವಿರುದ್ಧದ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಿವಂ ದುಬೆ ಈ ಬಾರಿ ಬೃಹತ್​ ಇನ್ನಿಂಗ್ಸ್​ ಕಟ್ಟಲಿಲ್ಲ. ಆದರೆ, ಕಾನ್ವೆಗೆ ಉತ್ತಮ ಬೆಂಬಲ ನೀಡಿದರು. 17 ಎಸೆತ​ ಎದುರಿಸಿದ ದುಬೆ 28 ರನ್​ ಗಳಿಸಿ ಅರ್ಷದೀಪ್ ಸಿಂಗ್​ಗೆ ವಿಕೆಟ್​ ಕೊಟ್ಟರು. ನಂತರ ಬಂದ ಮೊಯಿನ್​ ಅಲಿ (10) ಮತ್ತು ಜಡೇಜಾ (12) ದೊಡ್ಡ ಕೊಡುಗೆ ನೀಡಲಿಲ್ಲ.

ತಮ್ಮ ಲಯ ಮುಂದುವರೆಸಿಕೊಂಡು ಸಾಗಿದ ಕಾನ್ವೆ 52 ಬಾಲ್​ನಲ್ಲಿ 16 ಬೌಂಡರಿ ಮತ್ತು 1 ಸಿಕ್ಸ್​ನಿಂದ ಅಜೇಯರಾಗಿ 92 ರನ್​ ಪೇರಿಸಿದರು. ಕೊನೆಯ ಓವರ್​ನಲ್ಲಿ 9 ರನ್​ ಕಲೆಹಾಕಿದ್ದರೆ ಶತಕ ಗಳಿಸುವ ಅವಕಾಶವಿತ್ತಾದರೂ ಸಾಧ್ಯವಾಗಲಿಲ್ಲ. 8 ರನ್​ನಿಂದ ಈ ಆವೃತ್ತಿಯ ಮೂರನೇ ಶತಕ ಗಳಿಸುವುದರಿಂದ ಕಾನ್ವೆ ವಂಚಿತರಾದರು. ಕೊನೆಯ ಓವರ್​ನ ನಾಲ್ಕು ಎಸೆತಗಳನ್ನು ಎದುರಿಸಿದ ನಾಯಕ ಧೋನಿ ಎರಡು ಸಿಕ್ಸ್​​ನಿಂದ ಅಜೇಯರಾಗಿ 13 ರನ್​ ಕಲೆ ಹಾಕಿದರು. ಇದರಿಂದ ಚೆನ್ನೈ ತಂಡ 200 ರನ್​ ತಲುಪಿತು.

ಪಂಜಾಬ್​ ಕಿಂಗ್ಸ್​ ಬೌಲರ್​ಗಳು ಸತತ ಎರಡು ಪಂದ್ಯಗಳಿಂದ ಹೆಚ್ಚು ರನ್​ ಬಿಟ್ಟು ಕೊಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಇದೇ ಬೌಲಿಂಗ್​ ಪಡೆಯಿಂದ ಐಪಿಎಲ್​ನ ಎರಡನೇ ಅತಿ ಹೆಚ್ಚಿನ ಸ್ಕೋರ್​ (257) ದಾಖಲಾಗಿತ್ತು. ಇಂದು 200ರ ಗಡಿ ತಲುಪಿದೆ. ರಾಹುಲ್ ಚಾಹರ್, ಅರ್ಷದೀಪ್ ಸಿಂಗ್ ಸ್ಯಾಮ್ ಕರನ್​ ಮತ್ತು ಸಿಕಂದರ್ ರಜಾ ತಲಾ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ:ಮಿಚಲ್​ ಸಿಡಿಲಬ್ಬರದ ಆಟಕ್ಕೆ ಒಲಿಯದ ಜಯ: ದಿಲ್ಲಿಯಲ್ಲಿ 'ಸನ್​ರೈಸ್​'

Last Updated : Apr 30, 2023, 7:49 PM IST

ABOUT THE AUTHOR

...view details