ಕರ್ನಾಟಕ

karnataka

ಬಿಸಿಸಿಐ ಬ್ಯಾನ್​ ಮಾಡಿದ್ದ ರಿಂಕು ಈಗ 'ಸೂಪರ್ ಫಿನಿಷರ್'! ಟೀಂ ಇಂಡಿಯಾದಲ್ಲಿ ಸಿಗುವುದೇ ಚಾನ್ಸ್?

By

Published : May 9, 2023, 1:14 PM IST

ಈ ಬಾರಿಯ ಐಪಿಎಲ್​ ಪಂದ್ಯಗಳು ಕೊನೆಯ ಎಸೆತದವರೆಗೂ ರೋಚಕತೆ ಉಳಿಸಿಕೊಂಡಿವೆ. ಈ ಮೂಲಕ ಸೂಪರ್​ ಫಿನಿಷಿಂಗ್​ ಆಟಗಾರರೂ ಹೊರಹೊಮ್ಮಿದ್ದಾರೆ.

ರಿಂಕು ಸಿಂಗ್
ರಿಂಕು ಸಿಂಗ್

ಅಲಿಗಢ (ಉತ್ತರ ಪ್ರದೇಶ):ರಿಂಕು ಸಿಂಗ್​. ಸದ್ಯದ ಐಪಿಎಲ್​ನಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರು. ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಆಡುತ್ತಿರುವ ಆಟಗಾರ ತಾವೊಬ್ಬ "ಸೂಪರ್​ ಫಿನಿಷರ್​" ಎಂಬುದನ್ನು ಸಾಬೀತು ಮಾಡುತ್ತಲೇ ಇದ್ದಾರೆ. ನಿನ್ನೆ ನಡೆದ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟ್​ ಝಳಪಿಸಿ ಮತ್ತೆ ಅಭಿಮಾನಿಗಳ ಹೃದಯ ಗೆದ್ದರು.

ಕೊನೆಯ ಓವರ್​ ಮ್ಯಾಜಿಕ್​:ಈಡನ್​ ಗಾಡರ್ನ್​ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ಸೋಲಿನ ಸುಳಿಯಲ್ಲಿತ್ತು. ಕೊನೆಯ ಓವರ್​ನಲ್ಲಿ ಗೆಲ್ಲಲು 8 ರನ್​ ಬೇಕಿತ್ತು. ಪಂಜಾಬ್​ ಯುವ ವೇಗಿ ಅರ್ಷದೀಪ್​ ಸಿಂಗ್​ ಬೌಲ್​ ಮಾಡುತ್ತಿದ್ದರು. ಕರಾರುವಾಕ್ಕಾಗಿ ಬೌಲ್​ ಮಾಡಿದ ಸಿಂಗ್​ ಮೊದಲ ಐದು ಎಸೆತಗಳಲ್ಲಿ 4 ರನ್​ ನೀಡಿ ಮಾತ್ರ ನೀಡಿದ್ದರು. ಐದನೇ ಎಸೆತವನ್ನು ಬಲವಾಗಿ ಹೊಡೆಯಲು ಯತ್ನಿಸಿದ ಆ್ಯಂಡ್ರೆ ರಸೆಲ್​ ವಂಚಿಸಿ ಚೆಂಡು ಕೀಪರ್​ ಕೈಸೇರಿತ್ತು. ಒಂಟಿ ರನ್​ಗಾಗಿ ಓಡುವಾಗ ರಸೆಲ್​ ರನೌಟ್​ ಆದರು.

ಇದು ಪಂದ್ಯದ ಗತಿಯನ್ನೇ ಬದಲಿಸಿ, ಕೋಲ್ಕತ್ತಾ ಇನ್ನಷ್ಟು ಒತ್ತಡಕ್ಕೆ ಸಿಲುಕಿತು. ತುದಿಗಾಲ ಮೇಲೆ ನಿಲ್ಲಿಸಿದ್ದ ಪಂದ್ಯದಲ್ಲಿ ರಿಂಕು ಮ್ಯಾಜಿಕ್​ ಮಾಡಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 4 ರನ್​ ಅಗತ್ಯವಿತ್ತು. ಹಿಂಬದಿ ತೂರಿ ಬಂದ ಚೆಂಡನ್ನು ರಿಂಕು ಸಿಂಗ್​ ಬೌಂಡರಿ ಬಾರಿಸಿದರು. ಕೆಕೆಆರ್​ ಗೆಲುವು ಸಾಧಿಸಿತು.

ಎರಡನೇ ಸಲ ಸೂಪರ್​ ಫಿನಿಷ್​:ರಿಂಕು ಈ ಐಪಿಎಲ್​ನಲ್ಲಿ ಎರಡನೇ ಬಾರಿಗೆ ಕೆಕೆಆರ್​ ತಂಡಕ್ಕೆ ಆಪತ್ಬಾಂಧವರಾದರು. ಇದಕ್ಕೂ ಮೊದಲು ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ರೋಷಾವೇಷದಿಂದ ಬ್ಯಾಟ್​ ಬೀಸಿ ಸೋತೇ ಹೋಗಿದ್ದ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಕೊನೆಯ ಓವರ್​ನಲ್ಲಿ ಗೆಲ್ಲಲು ತಂಡಕ್ಕೆ 29 ರನ್​ ಅಗತ್ಯವಿತ್ತು. ಕ್ರೀಸ್​ನಲ್ಲಿದ್ದ ದಾಂಡಿಗ ರಿಂಕು, ಬೌಲರ್​ ಯಶ್​ ದಯಾಳ್​ರ​ನ್ನು ದಂಡಿಸಿ 5 ಎಸೆತಗಳನ್ನೂ ಸಿಕ್ಸರ್​ ಬಾರಿಸಿ 30 ರನ್​ ಸಿಡಿಸಿ ಗೆಲುವು ತಂದುಕೊಟ್ಟು ರಾತ್ರೋರಾತ್ರಿ ಹೀರೋ ಆಗಿದ್ದರು.

ಬಡತನದಲ್ಲಿ ಬೆಳೆದ ಪ್ರತಿಭೆ:ಉತ್ತರ ಪ್ರದೇಶದ ಅಲಿಗಢದ ರಿಂಕು ಸಿಂಗ್​ ಬಡತನದಲ್ಲಿ ಅರಳಿದ ಪ್ರತಿಭೆ. ಕ್ರಿಕೆಟ್​ ಮೇಲೆ ವಿಪರೀತ ವ್ಯಾಮೋಹ ಹೊಂದಿದ್ದ ರಿಂಕು, ಕೋಚಿಂಗ್​ ಸೆಂಟರ್​ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಕ್ರಮೇಣ ತರಬೇತಿ ಪಡೆದು ಕ್ರಿಕೆಟಿಗನಾಗಿ ಬೆಳೆದರು.

ನಿಷೇಧಕ್ಕೆ ಒಳಗಾಗಿದ್ದ ರಿಂಕು:ಐಪಿಎಲ್​ನಲ್ಲಿ ಮಿಂಚುತ್ತಿರುವ ರಿಂಕು ಸಿಂಗ್​, 2019 ರಲ್ಲಿ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿದ್ದರು ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ. ಏಕೆಂದರೆ ಬಿಸಿಸಿಐ ಅನುಮತಿ ಇಲ್ಲದೆ ರಿಂಕು ವಿದೇಶಿ ಟಿ20 ಟೂರ್ನಿಯೊಂದರಲ್ಲಿ ಆಡಿದ್ದರು. ಬಿಸಿಸಿಐ ನಿಯಮದ ಪ್ರಕಾರ, ಭಾರತೀಯ ಆಟಗಾರರು ದೇಶ ಬಿಟ್ಟು ಯಾವುದೇ ವಿದೇಶಿ ಲೀಗ್‌ನಲ್ಲಿ ಆಡುವಂತಿಲ್ಲ. ಇದರ ಹೊರತಾಗಿಯೂ ರಿಂಕು ಸಿಂಗ್ ಆಡಿದ್ದರಿಂದ ಬಿಸಿಸಿಐ 3 ತಿಂಗಳ ಕಾಲ ಬ್ಯಾನ್ ಮಾಡಿತ್ತು.

ನಂಬಿಕೆ ಉಳಿಸಿಕೊಂಡ ಕ್ರಿಕೆಟಿಗ:2017 ರಲ್ಲಿ ಪಂಜಾಬ್​ ಕಿಂಗ್ಸ್​ ಇಲೆವೆನ್​ ಪರವಾಗಿ ಆಡುತ್ತಿದ್ದ ರಿಂಕು ಸಿಂಗ್​ರನ್ನು 10 ಲಕ್ಷ ರೂ.ಗೆ ಖರೀದಿ ಮಾಡಲಾಗಿತ್ತು. ಬಳಿಕ ತಂಡ ಬಿಡುಗಡೆ ಮಾಡಿತ್ತು. 2018 ರಲ್ಲಿ ಕೆಕೆಆರ್​ ಅವರನ್ನು 80 ಲಕ್ಷಕ್ಕೆ ಖರೀದಿ ಮಾಡಿತ್ತು. ಅಂದಿನಿಂದ ಕೆಕೆಆರ್​ ಪರವಾಗಿ ಬ್ಯಾಟ್​ ಬೀಸುತ್ತಿದ್ದಾರೆ. ನೀಡಿದ ಹಣ, ನಂಬಿಕೆಯನ್ನು ಆಟಗಾರ ಉಳಿಸಿಕೊಂಡಿದ್ದಾರೆ. ಹೀಗಾಗಿ, ಭವಿಷ್ಯದಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗ ಟೀಂ ಇಂಡಿಯಾದಲ್ಲಿ ಸ್ಥಾನ ಸ್ಥಾನ ಗಿಟ್ಟಿಸುವ ಸಾಧ್ಯತೆಯೂ ಗೋಚರಿಸಿದೆ.

ಇದನ್ನೂ ಓದಿ:ಕೆಕೆಆರ್​ ಪಾಲಿಗೆ ಮತ್ತೆ ಹೀರೋ ಆದ ರಿಂಕು​: ಕೋಲ್ಕತ್ತಾ vs ಪಂಜಾಬ್​ ರೋಚಕ ಪಂದ್ಯದ Photos

ABOUT THE AUTHOR

...view details