ಕರ್ನಾಟಕ

karnataka

ETV Bharat / sports

ಸೆಮೀಸ್​ಗೂ ಮುನ್ನ ನೆದರ್ಲೆಂಡ್ಸ್​​​ ವಿರುದ್ಧ ಭಾರತ ಭರ್ಜರಿ ಅಭ್ಯಾಸ; 160 ರನ್​ಗಳ ಗೆಲುವು - ಸೂರ್ಯಕುಮಾರ್​ ಯಾದವ್​

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2023ರ ವಿಶ್ವಕಪ್​ ಕೊನೆಯ ಲೀಗ್​ ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ಸ್​ ವಿರುದ್ಧ 160 ರನ್​ಗಳ ಗೆಲುವು ದಾಖಲಿಸಿದೆ.

India won by 160 runs
India won by 160 runs

By ETV Bharat Karnataka Team

Published : Nov 12, 2023, 9:43 PM IST

Updated : Nov 12, 2023, 10:53 PM IST

ಬೆಂಗಳೂರು: ಕಿವೀಸ್ ವಿರುದ್ಧದ ಸೆಮೀಸ್​ ಪಂದ್ಯಕ್ಕೂ ಮುನ್ನ ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ತಂಡ ನೆದರ್ಲೆಂಡ್ಸ್​ ಜೊತೆಗೆ ಉತ್ತಮ ಅಭ್ಯಾಸ ಪಂದ್ಯವನ್ನಾಡಿತು. 2023ರ ವಿಶ್ವಕಪ್​ನಲ್ಲಿ ಭಾರತ ತಂಡ ಲೀಗ್​ ಹಂತದಲ್ಲಿ ಒಂದೂ ಸೋಲನ್ನು ಕಾಣದೇ ಸೆಮಿ ಫೈನಲ್​ ಪ್ರವೇಶ ಪಡೆದುಕೊಂಡಿತು. ಬೆಂಗಳೂರಿನಲ್ಲಿ 160 ರನ್‌ಗಳ ಗೆಲುವಿನ ನಂತರ, ಭಾರತವು ಸತತ 9 ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ನಂತರ ವಿಶ್ವಕಪ್ ಇತಿಹಾಸದಲ್ಲಿ ತನ್ನ ಸುದೀರ್ಘ ಗೆಲುವಿನ ಸರಣಿಯನ್ನು ದಾಖಲಿಸಿದೆ. 2003ರ ವಿಶ್ವಕಪ್‌ನಲ್ಲಿ 8 ಪಂದ್ಯಗಳ ಗೆಲುವಿನ ಸರಣಿಯನ್ನು ಮೀರಿಸಿದೆ.

ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 4 ವಿಕೆಟ್ ​ನಷ್ಟಕ್ಕೆ 410 ರನ್​ ಗಳಿಸಿತು. ಶ್ರೇಯಸ್ ಅಯ್ಯರ್ (128*) ಮತ್ತು ಕೆಎಲ್ ರಾಹುಲ್​ (102) ಶತಕವನ್ನು ಗಳಿಸಿದರೆ, ರೋಹಿತ್ ಶರ್ಮಾ (61), ಶುಭಮನ್ ಗಿಲ್ (51) ಮತ್ತು ವಿರಾಟ್ ಕೊಹ್ಲಿ (51) ಅರ್ಧಶತಕ ಗಳಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಈ ಗುರಿಯನ್ನು ಬೆನ್ನತ್ತಿದ ಡಚ್ಚರು 47.5 ಬಾಲ್​ಗೆ 250 ರನ್​ ಗಳಿಸಿ ಆಲ್​ಔಟ್​ ಆದರು. ಇದರಿಂದ ರೋಹಿತ್​ ಶರ್ಮಾ ಪಡೆ 160 ರನ್​ಗಳ ಗೆಲುವು ದಾಖಲಿಸಿತು.

ಬೆಂಗಳೂರಿನ ಬ್ಯಾಟಿಂಗ್​ ಪಿಚ್​ನಲ್ಲಿ ಡಚ್​ ಆಟಗಾರರು ಇಬ್ಬನಿಯ ಜೊತೆಗೆ ಭಾರತೀಯ ಬೌಲರ್​ಗಳ ವಿರುದ್ಧ ಉತ್ತಮ ಪ್ರದರ್ಶನ ತೋರಿದರು. 5 ರನ್​ಗೆ ಮೊದಲ ವಿಕೆಟ್​ ಉರುಳಿದರೂ, ಎರಡನೇ ವಿಕೆಟ್​ಗೆ ಮ್ಯಾಕ್ಸ್ ಓಡೌಡ್ (30) ಮತ್ತು ಕಾಲಿನ್ ಅರ್ಕಮನ್ (35) 61 ರನ್​ಗಳ ಪಾಲುದಾರಿಕೆ ಮಾಡಿದರು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್​ ಜೊತೆ ಸ್ಕಾಟ್ ಎಡ್ವರ್ಡ್ಸ್ (17) ಮತ್ತು ಬಾಸ್ ಡಿ ಲೀಡೆ (12) ಕ್ರಮವಾಗಿ 39 ಮತ್ತು 33 ರನ್​ಗಳ ಪಾಲುದಾರಿಕೆ ಮಾಡಿದರು. ಸೈಬ್ರಾಂಡ್ 5 ರನ್​ನಿಂದ ಅರ್ಧಶತಕದಿಂದ ವಂಚಿತರಾದರು. ಸೈಬ್ರಾಂಡ್ 80 ಬಾಲ್​ ಆಡಿ 4 ಬೌಂಡರಿಯಿಂದ 45 ರನ್​ ಕಲೆಹಾಕಿದರು.

ತೇಜಾ ನಿಡಮನೂರು ಕೊನೆಯಲ್ಲಿ ಹೋರಾಟವನ್ನು ತೋರಿದರು. ಕೆಳ ಕ್ರಮಾಂಕದ ಬ್ಯಾಟರ್​ಗಳ ಜೊತೆಗೆ ಇನ್ನಿಂಗ್ಸ್​ ಕಟ್ಟಿದ ಅವರು ಅರ್ಧಶತಕ ಗಳಿಸಿದರು. ಲೋಗನ್ ವ್ಯಾನ್ ಬೀಕ್ (16), ರೋಲೋಫ್ ವ್ಯಾನ್ ಡೆರ್ ಮೆರ್ವೆ (16) ಮತ್ತು ಆರ್ಯನ್ ದತ್ (5) ಜೊತೆಗೆ ಸೇರಿ ವಿಕೆಟ್​ ಕಾಯ್ದುಕೊಂಡ ತೇಜಾ 39 ಬಾಲ್​ನಲ್ಲಿ 6ಸಿಕ್ಸ್​​ ಮತ್ತು 1 ಬೌಂಡರಿಯಿಂದ 54 ರನ್​ ಗಳಿಸಿ 10ನೇ ವಿಕೆಟ್​ ಆಗಿ ಔಟ್​ ಆದರು.

9 ಬೌಲರ್​ಗಳು ಕಣಕ್ಕೆ: ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​ ಮತ್ತು ಶುಭಮನ್​ ಗಿಲ್​ ಪ್ರಮುಖ ಐವರು ಬೌಲರ್​ಗಳಿಗೆ ಸಾಥ್​ ನೀಡಿದರು. ಅದರಲ್ಲಿ ವಿರಾಟ್​ ಮತ್ತು ರೋಹಿತ್​ ತಲಾ ಒಂದೊಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿಯೂ ಆದರು. ಉಳಿದಂತೆ ಜಸ್ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​, ಕುಲ್ದೀಪ್​ ಯಾದವ್​ ಮತ್ತು ರವೀಂದ್ರ ಜಡೇಜ ತಲಾ ಎರಡು ವಿಕೆಟ್​ ಹಂಚಿಕೊಂಡರು.

ಶ್ರೇಯಸ್​ ಪಂದ್ಯ ಶ್ರೇಷ್ಠ:ಮೊದಲ ಇನ್ನಿಂಗ್ಸ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್​ ನಿಲ್ಲಿಸಿ ಅಜೇಯ ಶತಕ ಗಳಿಸಿದ ಶ್ರೇಯಸ್​ ಅಯ್ಯರ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಧಾನಿಯಿಂದ ಶುಭಶಯ:ಪ್ರಧಾನಿ ನರೇಂದ್ರ ಮೋದಿ "ನಮ್ಮ ಕ್ರಿಕೆಟ್ ತಂಡಕ್ಕೆ ದೀಪಾವಳಿ ಇನ್ನಷ್ಟು ವಿಶೇಷವಾಗಿದೆ!ನೆದರ್ಲೆಂಡ್ಸ್ ವಿರುದ್ಧದ ಅದ್ಭುತ ವಿಜಯಕ್ಕಾಗಿ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು! ಕೌಶಲ್ಯ ಪ್ರಭಾವಶಾಲಿ ಪ್ರದರ್ಶನ. ಸೆಮಿಸ್‌ಗೆ ಶುಭಾಶಯಗಳು! ಭಾರತ ಸಂಭ್ರಮಿಸಿದೆ" ಎಂದು ಎಕ್ಸ್​ ಆ್ಯಪ್​ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ:ರೋ'ಹಿಟ್'​ ಅಬ್ಬರ: ಸಚಿನ್​ ದಾಖಲೆ ಸರಿಗಟ್ಟಿದ ಶರ್ಮಾ; ಸಿಕ್ಸ್​ನಲ್ಲಿ ಎಬಿಡಿ ರೆಕಾರ್ಡ್​ ಉಡೀಸ್​

Last Updated : Nov 12, 2023, 10:53 PM IST

ABOUT THE AUTHOR

...view details