ದುಬೈ:ಇಂದಿನಿಂದ ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಪಂದ್ಯಗಳು ನಡೆಯಲಿದ್ದು, ನಾಳೆ ಭಾರತ ತಂಡಕ್ಕೆ ಪಾಕಿಸ್ತಾನ ಮತ್ತೊಮ್ಮೆ ಎದುರಾಗಲಿದೆ. ಭಾರತ ತಂಡದಲ್ಲಿ ಬೌಲಿಂಗ್ ಮತ್ತು ಅಗ್ರ ಕ್ರಮಾಂಕವನ್ನು ಬಲಪಡಿಸಬೇಕಿದೆ ಎಂದು ವೇಗದ ಬೌಲರ್ ಆವೇಶ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ನಾಕೌಟ್ ಪಂದ್ಯದಲ್ಲಿ ಪಾಕ್ ತಂಡವನ್ನು ಬಗ್ಗುಬಡಿದ ಭಾರತ ಎರಡನೇ ಪಂದ್ಯದಲ್ಲಿ ಕ್ರಿಕೆಟ್ ಕೂಸು ಹಾಂಕಾಂಗ್ ಸೋಲಿಸಿ ಸೂಪರ್ 4 ಹಂತ ತಲುಪಿದೆ. ಪೈನಲ್ ತಲುಪಲು ತಂಡಗಳಿಗೆ ಪ್ರತಿ ಪಂದ್ಯದಲ್ಲೂ ಗೆಲುವು ಸಾಧಿಸುವುದು ಅಗತ್ಯ. ಅಲ್ಲದೇಮ ಪಾಕ್ ವಿರುದ್ಧದ ಪಂದ್ಯ ಎಂದಿಗೂ ಯುದ್ಧದಂತೆಯೇ ಭಾಸವಾಗುತ್ತದೆ. ಭಾರತ ಗೆಲ್ಲಲೇಬೇಕು ಎಂಬುದು ಅಭಿಮಾನಿಗಳ ಆಕಾಶದೆತ್ತರದ ಆಸೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ, ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. ಗಾಯದ ಬಳಿಕ ಚೇತರಿಸಿಕೊಂಡು ಆಡುತ್ತಿರುವ ಕೆ.ಎಲ್. ರಾಹುಲ್ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ಔಟಾಗಿದ್ದರು. ಹಿಟ್ಮ್ಯಾನ್ ಖ್ಯಾತಿಯ ನಾಯಕ ರೋಹಿತ್ ಶರ್ಮಾ ರನ್ ಗಳಿಸಲು ಪರದಾಡಿ ಔಟಾದರು. ಲಯದ ಸಮಸ್ಯೆ ನಡುವೆ ವಿರಾಟ್ ಕೊಹ್ಲಿ 35 ರನ್ ಮಾತ್ರ ಗಳಿಸಿದರು.
ಟಾಪ್ ಬ್ಯಾಟ್ಸ್ಮನ್ಗಳ ವೈಫಲ್ಯ ತಂಡಕ್ಕೆ ಮುಳುವಾಗಲಿದೆ. ಪಾಕ್ ವಿರುದ್ಧ ಸಿಡಿದಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬ್ಯಾಟಿಂಗ್ ಪವರ್ಪ್ಲೇ ಅನ್ನು ಬಳಸಿಕೊಳ್ಳಲು ತಂಡ ಸೋತಿದೆ. ಇದು ಮುಂದಿನ ಪಂದ್ಯಗಳಲ್ಲಿ ಮರುಕಳಿಸಬಾರದು ಎಂದು ಆವೇಶ್ಖಾನ್ ಅಭಿಪ್ರಾಯಪಟ್ಟಿದ್ದಾರೆ.