ನವದೆಹಲಿ:ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಮತ್ತು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಗಾಯಗೊಂಡಿದ್ದ ಜಸ್ಪ್ರೀತ್ ಬೂಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ವಾಪಸ್ ಆಗಿದ್ದಾರೆ. ಗಾಯಗೊಂಡು ಸರ್ಜರಿಗೆ ಒಳಗಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆದಿಲ್ಲ.
ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ಸಮರ ನಡೆಯಲಿದ್ದು, ರೋಹಿತ್ ಶರ್ಮಾ ನೇತೃತ್ವದ 15 ಸದಸ್ಯರ ಬಲಿಷ್ಠ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ. ಗಾಯದ ಸಮಸ್ಯೆಗೀಡಾಗಿ ಚೇತರಿಸಿಕೊಂಡಿರುವ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಹರ್ಷಲ್ ಪಟೇಲ್ರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಅರ್ಷದೀಪ್ ಇನ್, ಆವೇಶ್ಖಾನ್ ಔಟ್: ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಕ್ಯಾಚ್ ಬಿಟ್ಟು ಟೀಕೆಗೆ ಗುರಿಯಾಗಿದ್ದ ಯುವ ವೇಗಿ ಅರ್ಷದೀಪ್ ಸಿಂಗ್ಗೆ ಅವಕಾಶ ನೀಡಲಾಗಿದೆ. ಇನ್ನೊಬ್ಬ ವೇಗಿ ಆವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಅನುಭವಿ ವೇಗಿ ಮಹಮದ್ ಶಮಿಗೆ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ನೀಡದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.
ಅಚ್ಚರಿ ಎಂಬಂತೆ ವಿಶ್ವಕಪ್ ತಂಡದಲ್ಲೂ ಅವರಿಗೆ ಸ್ಥಾನ ನೀಡಲಾಗಿಲ್ಲ. ಮೀಸಲು ಆಟಗಾರರಲ್ಲಿ ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ದೀಪಕ್ ಚಹರ್ ಜೊತೆಗೆ ಶಮಿಗೆ ಸ್ಥಾನ ನೀಡಲಾಗಿದೆ.
ರವೀಂದ್ರ ಜಡೇಜಾಗಿಲ್ಲ ಚಾನ್ಸ್:ಏಷ್ಯಾ ಕಪ್ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ಆಲ್ರೌಂಡರ್ ರವೀಂದ್ರ ಜಡೇಜಾಗೆ ಟಿ20 ವಿಶ್ವಕಪ್ ತಂಡಕ್ಕೆ ಪರಿಗಣಿಸಲಾಗಿಲ್ಲ. ಸರ್ಜರಿಗೆ ಒಳಗಾಗಿರುವ ಜಡೇಜಾ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ವಿಶ್ವಕಪ್ಗೆ ಇನ್ನೂ ಕೇವಲ 5 ವಾರಗಳು ಬಾಕಿ ಇರುವ ಕಾರಣ ಜಡೇಜಾ ಲಭ್ಯತೆ ಅನುಮಾನದ ಕಾರಣ ಅವರ ಬದಲಾಗಿ ಅಕ್ಸರ್ ಪಟೇಲ್ಗೆ ಆಲ್ರೌಂಡರ್ ಆಗಿ ಅವಕಾಶ ನೀಡಲಾಗಿದೆ.