ಕರ್ನಾಟಕ

karnataka

By

Published : Mar 19, 2023, 8:26 AM IST

ETV Bharat / sports

ಇಂದು ಆಸೀಸ್​- ಭಾರತ 2ನೇ ಏಕದಿನ: ವಿಶ್ವಕಪ್​ ತಯಾರಿ ಪಂದ್ಯಕ್ಕೆ ಮಳೆ ಆತಂಕ

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ 2ನೇ ಏಕದಿನ ಪಂದ್ಯ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇಂದು ನಡೆಯಲಿದ್ದು, ಸರಣಿ ಗೆಲುವನ್ನು ನಿರ್ಧರಿಸಲಿದೆ. ಪಂದ್ಯಕ್ಕೆ ಮಳೆ ಅಡ್ಡಿ ಆತಂಕವೂ ಇದೆ.

ಆಸೀಸ್​- ಭಾರತ 2ನೇ ಏಕದಿನ
ಆಸೀಸ್​- ಭಾರತ 2ನೇ ಏಕದಿನ

ವಿಶಾಖಪಟ್ಟಣಂ:ವಿಶ್ವಕಪ್​ಗೆ ತಯಾರಿ ನಡೆಸುತ್ತಿರುವ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ಇಂದು ಮಧ್ಯಾಹ್ನ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಮೊದಲ ಪಂದ್ಯ ಸೋತಿರುವ ಆಸೀಸ್​ ಬಳಗ ಪುಟಿದೇಳುವ ಉತ್ಸಾಹದಲ್ಲಿದ್ದರೆ, ತವರಿನಲ್ಲಿ ಸತತ 8ನೇ ಸರಣಿ ಗೆಲುವು ಸಾಧಿಸುವ ಗುರಿ ಭಾರತಕ್ಕಿದೆ. ಇದೇ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಎದುರಾಗಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಬ್ಯಾಟಿಂಗ್​ ವೈಫಲ್ಯ ಅನುಭವಿಸಿದವು. ಆಸೀಸ್​ ಪರವಾಗಿ ಮಿಚೆಲ್​ ಮಾರ್ಷ್​ ಹೊರತಾಗಿ ಬೇರಾವ ಬ್ಯಾಟರ್​ ರನ್​ ಗಳಿಸಿಲಿಲ್ಲ. ಕೆ.ಎಲ್.ರಾಹುಲ್​, ರವೀಂದ್ರ ಜಡೇಜಾ ಬ್ಯಾಟಿಂಗ್​ ಬಲದಿಂದ ಭಾರತ ಗೆಲುವು ಸಾಧಿಸಿತು. ಪಿಚ್​ ಕೂಡ ಪರಿಣಾಮಕಾರಿಯಾಗಿ ವರ್ತಿಸಿ ಅಚ್ಚರಿ ಮೂಡಿಸಿತು.

ನಾಯಕ ರೋಹಿತ್​ ವಾಪಸ್​:ವೈಯಕ್ತಿಕ ಕಾರಣಗಳಿಗಾಗಿ ಮೊದಲ ಏಕದಿನ ಪಂದ್ಯದಿಂದ ತಪ್ಪಿಸಿಕೊಂಡಿದ್ದ ನಾಯಕ ರೋಹಿತ್​ ಶರ್ಮಾ ವಾಪಸ್​ ಆಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್​ ಆಗಮನದಿಂದಾಗಿ ಆರಂಭಿಕ ಇಶಾನ್​ ಕಿಶನ್​ ಅಥವಾ ಮಧ್ಯಮ ಕ್ರಮಾಂಕದಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಸೂರ್ಯಕುಮಾರ್​ ಯಾದವ್​ ಸ್ಥಾನ ತೆರವು ಮಾಡಬೇಕಿದೆ. ಸತತವಾಗಿ ಕ್ರಿಕೆಟ್​ ಆಡುತ್ತಿರುವ ಮೊಹಮದ್​ ಶಮಿಗೆ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ವಿಶಾಖಪಟ್ಟಣದ ಡಾ.ವೈ.ಎಸ್​.ರಾಜಶೇಖರ್​ರೆಡ್ಡಿ ಕ್ರೀಡಾಂಗಣ ಸ್ಪಿನ್ನರ್​ಗಳಿಗೆ ಹೆಚ್ಚು ನೆರವು ನೀಡುವ ಕಾರಣ ಜಡೇಜಾ, ಅಕ್ಷರ್​ ಜೊತೆಗೆ ಮೂರನೇ ಸ್ಪಿನ್ನರ್​​ ಕಣಕ್ಕಿಳಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ವಾಷಿಂಗ್ಟನ್​ ಸುಂದರ್​ ಸ್ಥಾನ ಪಡೆಯಬಹುದು. ಈ ಕ್ರೀಡಾಂಗಣದಲ್ಲಿ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಅದ್ಭುತ ಆಟ ಪ್ರದರ್ಶಿಸಿದ್ದು, ಇಂದು ಕಮಾಲ್​ ಮಾಡಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆ.

ತಿರುಗೇಟು ನೀಡುತ್ತಾ ಆಸೀಸ್​?:ಆಸ್ಟ್ರೇಲಿಯಾ ತಂಡ ಟೆಸ್ಟ್​ ಸರಣಿ ಸೋತಿದ್ದು, ಮೊದಲ ಏಕದಿನವನ್ನೂ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿ ಜೀವಂತವಾಗಿಟ್ಟುಕೊಳ್ಳಲು ಹೋರಾಡಲಿದೆ. ಮಿಚೆಲ್​ ಮಾರ್ಷ್ ಮೊದಲ ಪಂದ್ಯದಲ್ಲಿ ತಂಡಕ್ಕೆ ನೆರವಾಗಿದ್ದರು. ಅನಾರೋಗ್ಯದ ಕಾರಣ ಅಲೆಕ್ಸ್ ಕ್ಯಾರಿ ಆಟವಾಡಿರಲಿಲ್ಲ. ಈ ಪಂದ್ಯದಲ್ಲಿ ವಾಪಸ್​ ಆಗಲಿದ್ದಾರೆ. ಗಾಯಗೊಂಡಿದ್ದ ಡೇವಿಡ್ ವಾರ್ನರ್ ಕೂಡ ಮರಳುವ ಸಾಧ್ಯತೆಯಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಆತಂಕ:ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಶನಿವಾರ ಮತ್ತು ಭಾನುವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ಶನಿವಾರ ಸಂಜೆ ಬಾರಿ ಮಳೆಯಾದ ವರದಿಯಾಗಿದೆ. ಹೀಗಾಗಿ ಇಂದು ಕೂಡ ವರುಣದೇವ ಅಬ್ಬರಿಸಿದರೆ, ಪಂದ್ಯ ಆಹುತಿಯಾಗಲಿದೆ.

ಕ್ರೀಡಾಂಗಣದಲ್ಲಿ ಸೂಪರ್ ಸಾಪರ್‌ಗಳ ವ್ಯವಸ್ಥೆ ಮತ್ತು ಒಳಚರಂಡಿ ವ್ಯವಸ್ಥೆ ಇದೆ. ಕಡಿಮೆ ಪ್ರಮಾಣದಲ್ಲಿ ಗಂಟೆಗಳ ಕಾಲ ಮಳೆಯಾದರೆ, ಮೈದಾನವನ್ನು ಒಣಗಿಸಿ ಆಟಕ್ಕೆ ಅನುವು ಮಾಡಿಕೊಡಲಾಗುವುದು. ಹೆಚ್ಚು ಮಳೆಯಾದರೆ ಪಂದ್ಯದ ಮೇಲೆ ಪರಿಣಾಮ ಬೀರಲಿದೆ. ಮಳೆ ನಿಂತ 1 ಗಂಟೆಯೊಳಗೆ ಮೈದಾನವನ್ನು ಸಿದ್ಧಪಡಿಸಬಹುದು ಎಂದು ಆಂಧ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎಸ್‌ಆರ್ ಗೋಪಿನಾಥ್ ರೆಡ್ಡಿ ತಿಳಿಸಿದ್ದಾರೆ. ಭಾರತ ಪ್ರಸ್ತುತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೂರನೇ ಏಕದಿನ ಪಂದ್ಯ ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಸಂಭಾವ್ಯ ತಂಡ:ಶುಭಮನ್ ಗಿಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್/ಜಯದೇವ್ ಉನದ್ಕತ್.

ಆಸ್ಟ್ರೇಲಿಯಾ ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ.

ಇದನ್ನೂ ಓದಿ:36 ಎಸೆತ 99 ರನ್! ಸೋಫಿ ಡಿವೈನ್ RCBಯ ಕ್ರಿಸ್‌ ಗೇಲ್ ಎಂದ ನೆಟ್ಟಿಗರು! ಪ್ಲೇ ಆಫ್‌ಗೇರುತ್ತಾ ಮಂಧಾನ ಟೀಂ?

ABOUT THE AUTHOR

...view details