ಕರ್ನಾಟಕ

karnataka

IND vs WI: ನಾಳೆಯಿಂದ ವಿಂಡೀಸ್‌​ ವಿರುದ್ಧ ಮೊದಲ ಟೆಸ್ಟ್: ವಿಶೇಷ ಫೀಲ್ಡಿಂಗ್​ ಕಸರತ್ತಿನಲ್ಲಿ ಭಾರತ ತಂಡ

By

Published : Jul 11, 2023, 11:12 AM IST

ನಾಳೆಯಿಂದ ಮೊದಲ ಟೆಸ್ಟ್​ ಆರಂಭವಾಗಲಿದೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್​ ಇಂಡೀಸ್ ಸವಾಲನ್ನು ಭಾರತ ಎದುರಿಸಲಿದೆ. ಅಭ್ಯಾಸ ವೇಳೆ ತಂಡ ವಿಶೇಷವಾಗಿ ಕಸರತ್ತು ನಡೆಸಿದ್ದು ಕಂಡುಬಂತು.

ಭಾರತ ತಂಡದಿಂದ ವಿಶೇಷ ಫೀಲ್ಡಿಂಗ್​ ಅಭ್ಯಾಸ
ಭಾರತ ತಂಡದಿಂದ ವಿಶೇಷ ಫೀಲ್ಡಿಂಗ್​ ಅಭ್ಯಾಸ

ಡೊಮಿನಿಕಾ (ವೆಸ್ಟ್​ಇಂಡೀಸ್​):ನಾಳೆಯಿಂದ (ಜುಲೈ 12) ಭಾರತ- ವೆಸ್ಟ್​ ಇಂಡೀಸ್​ ನಡುವಿನ ಮೊದಲ ಟೆಸ್ಟ್​ ಆರಂಭವಾಗಲಿದೆ. ಉಭಯ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಇತ್ತ ಒಂದು ತಿಂಗಳ ವಿರಾಮದ ಬಳಿಕ ಭಾರತ ತಂಡ ಮತ್ತೆ ಮೈದಾನಕ್ಕೆ ಇಳಿಯುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ ಸೋಲಿನ ಬಳಿಕದ ಮೊದಲ ಟೆಸ್ಟ್ ಸರಣಿ ಇದಾಗಿದೆ. ಸರಣಿ ಗೆಲುವಿಗಾಗಿ ಕಸರತ್ತು ನಡೆಸುತ್ತಿರುವ ಟೀಂ ಇಂಡಿಯಾ ವಿಶೇಷವಾಗಿ ಫೀಲ್ಡಿಂಗ್, ಕ್ಯಾಚಿಂಗ್​ ಅಭ್ಯಾಸ ನಡೆಸಿದ್ದು ಇದರ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಇತ್ತಂಡಗಳು ಪಂದ್ಯ ನಡೆಯುವ ಡೊಮಿನಿಕಾದ ವಿಂಡ್​ಸೋರ್​ ಪಾರ್ಕ್​ ಮೈದಾನದಲ್ಲಿ ಬೀಡುಬಿಟ್ಟಿದ್ದು, ಅಲ್ಲಿಯೇ ಅಭ್ಯಾಸ ನಡೆಸುತ್ತಿದ್ದಾರೆ. ಭಾರತದ ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ, ಬ್ಯಾಟಿಂಗ್ ಸೆನ್ಸೇಷನ್​ ಶುಭ್​ಮನ್​ ಗಿಲ್​ ಅವರ ಜೊತೆಗೂಡಿ ಅಜಿಂಕ್ಯ ರಹಾನೆ, ವಿಕೆಟ್​ ಕೀಪರ್​ಗಳಾದ ಭರತ್​, ಇಶಾನ್​ ಕಿಶನ್, ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್ ಅವರು ಮೂರು ತುದಿಗಳುಳ್ಳ ಬಣ್ಣಬಣ್ಣದ ಕೋಲಿನಿಂದ ಕ್ಯಾಚ್ ಹಿಡಿಯುವ ಅಭ್ಯಾಸ ಮಾಡಿದ್ದಾರೆ.

ಇದರ ವಿಡಿಯೋವನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, "ಇದು ವರ್ಣರಂಜಿತ ಫೀಲ್ಡಿಂಗ್ ಕಸರತ್ತು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ" ಎಂಬ ಶೀರ್ಷಿಕೆ ನೀಡಿದೆ. ಈ ಫೀಲ್ಡಿಂಗ್​ಗೆ ಕೋಚ್​ ರಾಹುಲ್​ ದ್ರಾವಿಡ್​ ಕೂಡ ಬಳಿಕ ಜೊತೆಯಾಗಿದ್ದಾರೆ.

ವಿಂಡೀಸ್​ ಯುವ ಕ್ರಿಕೆಟಿಗರಿಗೆ ಪಾಠ:ಟೀಂ ಇಂಡಿಯಾ ಅಭ್ಯಾಸದ ವೇಳೆ ಕೆರೆಬಿಯನ್​ ಯುವ ಕ್ರಿಕೆಟಿಗರು ಹಿರಿಯ ಆಟಗಾರರಿಂದ ನೆರವು ಪಡೆದುಕೊಂಡರು. ಅಭ್ಯಾಸದ ವೇಳೆ ಕ್ರಿಕೆಟ್​ ಪಾಠಗಳನ್ನು ಕಲಿತರು. ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿಯೊಂದಿಗೆ ಆಟೋಗ್ರಾಫ್ ತೆಗೆದುಕೊಳ್ಳುವುದರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

ಭಾರತದ ತಂಡ ಡೊಮಿನಿಕಾಗೆ ಬರುವ ಮೊದಲು, ಬಾರ್ಬಡೋಸ್‌ನಲ್ಲಿ ತರಬೇತಿ ಪಡೆಯಿತು. ಅಲ್ಲಿ ವೇಗಿ ಮೊಹಮದ್ ಸಿರಾಜ್ ವೆಸ್ಟ್ ಇಂಡೀಸ್‌ನ ಸ್ಥಳೀಯ ಕ್ರಿಕೆಟಿಗರಿಗೆ ಬ್ಯಾಟ್ ಮತ್ತು ಬೂಟುಗಳನ್ನು ಉಡುಗೊರೆಯಾಗಿ ನೀಡಿದರು. ಇತರ ಆಟಗಾರರು ಕೂಡ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ್ದು, ಸ್ಥಳೀಯ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಸಂಕ್ರಮಣ ಕಾಲದಲ್ಲಿ ವಿಂಡೀಸ್​:ಒಂದು ಕಾಲದಲ್ಲಿ ದೈತ್ಯ ತಂಡವಾಗಿ ಗುರುತಿಸಿಕೊಂಡಿದ್ದ ಕೆರೆಬಿಯನ್​ ಕ್ರಿಕೆಟಿಗರು ಇಂದು ಸಂಕ್ರಮಣ ಕಾಲದಲ್ಲಿದ್ದಾರೆ. ವಿಶ್ವಕಪ್​ ಅರ್ಹತಾ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿ ವರ್ಲ್ಡ್​ಕಪ್​ ಅಭಿಯಾನದಿಂದಲೇ ಹೊರಬಿದ್ದಿದೆ. ಹಲವು ಕ್ರಿಕೆಟಿಗರು ಟಿ20 ಲೀಗ್​ಗಳಿಗೆ ಹೆಚ್ಚು ಆದ್ಯತೆ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟ್​ ಅನ್ನೇ ಮರೆತಿದ್ದಾರೆ. ಇದರಿಂದ ತಂಡ ಸತ್ವ ಕಳೆದುಕೊಂಡಿದೆ.

ಭಾರತವೂ ಐಸಿಸಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯವನ್ನು ಸೋತು ಮುಖಭಂಗಕ್ಕೀಡಾಗಿದೆ. ಸತತ 2ನೇ ಬಾರಿಗೆ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಈ ಸರಣಿಯಿಂದಲೇ ಮುಂದಿನ ಡಬ್ಲ್ಯೂಟಿಸಿ ಫೈನಲ್​ ಲೆಕ್ಕಾಚಾರ ಶುರುವಾಗಲಿದ್ದು, ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ:Virat Kohli: ವಿಂಡ್ಸರ್ ಪಾರ್ಕ್‌ನಲ್ಲಿ ದ್ರಾವಿಡ್​ ಜೊತೆಗಿನ ವಿಶೇಷ ಕ್ಷಣವನ್ನು ನೆನೆದ ವಿರಾಟ್​​..

ABOUT THE AUTHOR

...view details