ಕರ್ನಾಟಕ

karnataka

World cup 2023: ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಲು ಇಲ್ಲಿವೆ ಪ್ರಮುಖ ಕಾರಣಗಳು!

By ETV Bharat Karnataka Team

Published : Oct 7, 2023, 9:29 AM IST

world cup 2023: ಐಸಿಸಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ಟೀಂ ಇಂಡಿಯಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ರೋಹಿತ್ ಶರ್ಮಾ ಪಡೆ ತವರು ನೆಲದಲ್ಲಿ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ತವಕದಲ್ಲಿದೆ.

ICC world cup 2023
ICC world cup 2023

ಹೈದರಾಬಾದ್​: 10 ವರ್ಷಗಳಿಂದ ಐಸಿಸಿ ಟ್ರೋಫಿ ಇಲ್ಲದ ಬರವನ್ನು ಈ ಬಾರಿ ಟೀಮ್​ ಇಂಡಿಯಾ ನೀಗಿಸುತ್ತದೆ ಎಂಬುದು 140 ಕೋಟಿ ಭಾರತೀಯ ಹೃದಯಗಳ ಅಪೇಕ್ಷೆ. ಕ್ರಿಕೆಟ್​ನ ಎಲ್ಲ ಸ್ವರೂಪಗಳಲ್ಲಿ ನಂ.1 ತಂಡ, ಅದ್ಭುತ ಫಾರ್ಮ್​ನಲ್ಲಿರುವ 11ರ ಬಳಗ, ತವರು ಮೈದಾನದ ಅನುಕೂಲತೆ, ನಿರ್ಭೀತ ಯುವ ಆಟಗಾರರು, ಏಷ್ಯಾಕಪ್ ಚಾಂಪಿಯನ್, ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಬಲ, ಬಲಿಷ್ಠ ಅನುಭವಿಗಳು... ಇವೆಲ್ಲವೂ ದೇಸಿ ನೆಲದಲ್ಲಿ ಭಾರತ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಆಕಾಂಕ್ಷೆಯನ್ನು ನೂರ್ಮಡಿಸಿವೆ.

ತಂಡದಲ್ಲಿ ಭರವಸೆಯ ಯುವ ಆಟಗಾರರ ಜೊತೆಗೆ, ಅನುಭವಿ ಹಿಟ್​ಮ್ಯಾನ್​ ರೋಹಿತ್​ ಶರ್ಮಾ, ರನ್​ ಮಷಿನ್​ ವಿರಾಟ್​ ಕೊಹ್ಲಿ ಮತ್ತು ಆಲ್​ರೌಂಡರ್​ ವಿಭಾಗದಲ್ಲಿ ರವಿಚಂದ್ರನ್​ ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಬಲವಿದೆ. ಇದರಿಂದಾಗಿ ಭಾರತ ಟೂರ್ನಿಯಲ್ಲಿ ಕಪ್ ಗೆಲ್ಲುವ ಫೆವ್​ರೀಟ್​​ ತಂಡವಾಗಿದೆ.

ಇಂಗ್ಲೆಂಡ್​, ಆಸ್ಟ್ರೇಲಿಯಾದಂತೆ ಭಾರತವೂ ತನ್ನ ಆಡುವ 11ರ ಬಳಗವನ್ನು ಬಲಿಷ್ಠ ಮಾಡಿಕೊಂಡಿದೆ. ಅಲ್ಲದೇ ಆಲ್​ರೌಂಡರ್​ಗಳ ಸಂಖ್ಯೆ ತಂಡದಲ್ಲಿ ಹೆಚ್ಚಿದೆ. ಇದರಿಂದ 8ನೇ ಕ್ರಮಾಂಕದ ಆಟಗಾರನವರೆಗೂ ತಂಡದಲ್ಲಿ ಬ್ಯಾಟಿಂಗ್​ ಬಲವಿದೆ. ಬೌಲಿಂಗ್​ನಲ್ಲಿ ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಶಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಮಾರಕ ಅಸ್ತ್ರವಾಗಿದ್ದಾರೆ. ಇನ್ನು ಟೀಂ ಇಂಡಿಯಾದ ಪ್ರಮುಖ ಮತ್ತು ವಿಭಿನ್ನ ಸಾಮರ್ಥ್ಯಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...

ಬ್ಯಾಟಿಂಗ್ ಲೈನ್ ಅಪ್:

ವಿರಾಟ್ ಕೊಹ್ಲಿ:ಎರಡು ವರ್ಷಗಳ ಹಿಂದೆ ರನ್​ ಗಳಿಸಲು ಪರದಾಡುತ್ತಿದ್ದ ವಿರಾಟ್​ 2023ರಲ್ಲಿ ಫಾರ್ಮ್​ಗೆ ಮರಳಿದರು. ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5 ಶತಕ ಗಳಿಸಿ ಫಾರ್ಮ್​ನಲ್ಲಿದ್ದಾರೆ. ಏಷ್ಯಾಕಪ್​ನಲ್ಲಿ ವಿರಾಟ್​ ಪಾಕಿಸ್ತಾನದ ವಿರುದ್ಧ ಶತಕ ದಾಖಲಿಸಿ ವಿಶ್ವಕಪ್​ಗೆ ತಿಂಗಳು ಬಾಕಿ ಇರುವಾಗ ತಮ್ಮ ಬ್ಯಾಟ್​ ಮತ್ತೆ ಸಾಣೆ ಹಿಡಿದಿದ್ದಾರೆ ಎಂದರೆ ತಪ್ಪಾಗದು. ಏಕದಿನ ಕ್ರಿಕೆಟ್​ನಲ್ಲಿ ಇನ್ನು ಎರಡು ಶತಕ ದಾಖಲಾದರೆ ಕ್ರಿಕೆಟ್​ ದೇವರು ಸಚಿನ್​ ಅವರ ದಾಖಲೆ ಮುರಿಯಲಿದ್ದಾರೆ. ಇದು ಈ ವಿಶ್ವಕಪ್​ನಲ್ಲಿ ಆಗುವ ಸಾಧ್ಯತೆ ಇದೆ.

ರೋಹಿತ್ ಶರ್ಮಾ:2019 ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​​ ಗಳಿಸಿದ್ದ ಕ್ಯಾಫ್ಟನ್ ರೋಹಿತ್ ಶರ್ಮಾ, ಐಸಿಸಿ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿರುವ ರೆಕಾರ್ಡ್​ ಇಟ್ಟುಕೊಂಡು ನಾಯಕತ್ವದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆರಂಭಿಕರಾಗಿ ತಂಡಕ್ಕೆ ಹಲವು ವರ್ಷಗಳಿಂದ ರೋಹಿತ್ ಆಸರೆಯಾಗಿದ್ದಾರೆ. ಮೊದಲ ಬಾಲ್​ನ್ನು ಸಿಕ್ಸ್​ಗೆ ಅಟ್ಟುವ ಸಾಮರ್ಥ್ಯ ಮತ್ತು ಭಾರತದ ಪರ ಅತಿ ಹೆಚ್ಚು ಸಿಕ್ಸ್​ ದಾಖಲಿಸಿರುವ ರೋಹಿತ್​ ಅವರನ್ನು "ಹಿಟ್​ಮ್ಯಾನ್"​ ಎಂದೇ ಕರೆಯಲಾಗುತ್ತದೆ.

ಶುಭಮನ್​ ಗಿಲ್: ಸ್ಟೈಲಿಶ್​ ಲುಕ್​ನಿಂದ ಯುವತಿಯರ ಮನ ಗೆದ್ದಿರುವ ಗಿಲ್​, ತಮ್ಮ ಆಟದ ಶೈಲಿಯಿಂದ ಕ್ರಿಕೆಟ್​ ದಿಗ್ಗಜರ ಮೆಚ್ಚುಗೆ ಗಳಿಸಿದ್ದಾರೆ. ಅವರ ಪ್ರತಿ ಹೊಡೆತದಲ್ಲಿರುವ ಸ್ಪಷ್ಟತೆ ಅವರನ್ನು ಪ್ರಿನ್ಸ್​ ಎಂದು ಕರೆಯಲು ಕಾರಣವಾಗಿದೆ. ವಿರಾಟ್​ ಕೊಹ್ಲಿಯ ರೀತಿಯಲ್ಲಿ ಪ್ರತಿ ಬಾಲ್​ ಅನ್ನು ಅವರು ಎದುರಿಸುವುದರಿಂದ ಅನೇಕ ಅನುಭವಿಗಳು ತಂಡದಲ್ಲಿ ಗಿಲ್, ಕಿಂಗ್ ಕೊಹ್ಲಿಯ ಜಾಗ ತುಂಬಲಿದ್ದಾರೆ ಎನ್ನುತ್ತಾರೆ. ಅದನ್ನು ಅವರು ಆಗಾಗ ತಮ್ಮ ರನ್​ ಗಳಿಕೆಯ ಮೂಲಕ ಸಾಬೀತು ಮಾಡಿದ್ದಾರೆ.

ಸೂರ್ಯ ಕುಮಾರ್ ಯಾದವ್: ಏಕದಿನ ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡು, ಮೂರು ಬಾರಿ ಡಕ್​ಗೆ ಔಟ್​ ಆಗಿ ಟೀಕೆ ಮತ್ತು ಟ್ರೋಲ್​ಗೆ ಒಳಗಾದ ಟಿ20ಯ ಟಾಪ್​ ಬ್ಯಾಟರ್. ​ ಸ್ಕೈ ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್​ ಅನುಪಸ್ಥಿತಿಯನ್ನು ತುಂಬಬಲ್ಲೆ ಎಂಬುದುನ್ನು ತೋರಿಸಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್​ನಲ್ಲೂ ಟಿ20ಯಂತೆ ಬಿರುಸಿನ ಬ್ಯಾಟ್​ ಬೀಸಿ, ಎಬಿಡಿ ಅವರಂತೆ 360 ಡಿಗ್ರಿ ಬ್ಯಾಟಿಂಗ್​ ಪ್ರದರ್ಶಿಸಿದ್ದಾರೆ.

ಕೆಎಲ್ ರಾಹುಲ್: ಕಳಪೆ ಫಾರ್ಮ್​ನಿಂದ ನಿಂದನೆ ಎದುರಿಸಿ, ಐಪಿಎಲ್ ವೇಳೆ​ ಗಾಯಗೊಂಡ ನಂತರ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕನ್ನಡಿಗ ಕೆ ಎಲ್ ರಾಹುಲ್​​ ಟೀಕೆಗಳಿಗೆ ಲಂಕಾದಲ್ಲಿ ನಡೆದ ಏಷ್ಯಾಕಪ್​ನಲ್ಲಿ ಉತ್ತರ ಕೊಟ್ಟರು. ಅಲ್ಲದೇ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದೇನೆ ಎಂಬುದಕ್ಕೆ ಕೀಪಿಂಗ್​ ಸಹಿತ ಮಾಡಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಇವರ ಕಮ್​ಬ್ಯಾಕ್ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದೆ. ಹೋಮ್​ ಗ್ರೌಂಡ್​ನಲ್ಲಿ ರನ್​ ಮಳೆ ಸುರಿಸುತ್ತಾರೆ ಎಂಬ ಭರವಸೆ ಇವರ ಮೇಲಿದೆ.

ಶ್ರೇಯಸ್ ಅಯ್ಯರ್:ಅಯ್ಯರ್​, ರಾಹುಲ್​, ಪಂತ್​ ಅವರು ಒಮ್ಮೆಗೆ ಗಾಯಗೊಂಡು ತಂಡದಿಂದ ಹೊರಗುಳಿದ ಕಾರಣ ಏಕದಿನ ತಂಡ ದುರ್ಬಲವಾಗಿ ಕಾಣಿಸಿಕೊಳ್ಳುತ್ತಿತ್ತು. ಇಬ್ಬರು ಮರಳಿದ್ದಾರೆ. ಅಯ್ಯರ್​ ಆಸ್ಟ್ರೇಲಿಯಾ ವಿರುದ್ಧ ಶತಕ ದಾಖಲಿಸಿ ತಮ್ಮ ಮರಳುವಿಕೆಯನ್ನು ತೋರಿಸಿದ್ದಾರೆ. ವಿಶ್ವಕಪ್​ಗೂ ಮುನ್ನ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.

ರವೀಂದ್ರ ಜಡೇಜಾ: ಯುವರಾಜ್​ ಸಿಂಗ್​ ನಂತರ ಭಾರತ ತಂಡಕ್ಕೆ ಉತ್ತಮ ಆಲ್​ರೌಂಡರ್​ ಸಿಕ್ಕಿರಲಿಲ್ಲ. ಆದರೆ, ಹೆಚ್ಚುಕಮ್ಮಿ ಅವರ ಸ್ಥಾನವನ್ನು ತುಂಬುವ ಸಾಮರ್ಥ್ಯ ಇರುವ ಆಲ್​ರೌಂಡರ್ ಎಂದರೆ ಅವರು ರವೀಂದ್ರ ಜಡೇಜಾ. ಬೌಲಿಂಗ್​, ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ತಂಡಕ್ಕೆ ಸಾಥ್​ ನೀಡಬಲ್ಲರು. ಕಳೆದ ಕೆಲ ವರ್ಷಗಳಿಂದ ಅವರ ಬ್ಯಾಟ್​ನಿಂದ ಏಕದಿನ ಪಂದ್ಯದಲ್ಲಿ ಶತಕ ದಾಖಲಾಗಿಲ್ಲ ಎಂಬ ಆರೋಪ ಇದೆ. ಆದರೆ, ಈ ಆರೋಪಕ್ಕೆ ಅವರು ಏಕದಿನ ಪಂದ್ಯ ಆಡಿದ್ದೇ ಕಡಿಮೆ ಎಂಬುವುದು ಗಮನಾರ್ಹ ವಿಚಾರ. ಐಪಿಎಲ್​ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ಕೊಡುಗೆ ನೀಡುತ್ತಾರೆ ಎಂಬ ಭರವಸೆ ಇದ್ದೇ ಇದೆ.

ಹಾರ್ದಿಕ್ ಪಾಂಡ್ಯ:ಇವರು ತಂಡಕ್ಕೆ ಅಗತ್ಯ ಸಮಯದಲ್ಲಿ ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ನೆರವಾಗುವ ಆಟಗಾರ. ಹೊಸ ಶೈನಿ ಬಾಲ್​ನಲ್ಲಿ ವಿಕೆಟ್​ ಪಡೆದ ಹಾಗೆ ಮಧ್ಯಮ ಓವರ್​ಗಳಲ್ಲಿ ಬೌಲ್​ ಮಾಡಿ ವಿಕೆಟ್​ ಪಡೆದ ಉದಾಹರಣೆಗಳೂ ಇವರ ಖಾತೆಯಲ್ಲಿವೆ. ಬ್ಯಾಟಿಂಗ್​ನಲ್ಲಿ ತಂಡಕ್ಕೆ ಉತ್ತಮ ಕ್ಲೈಮ್ಯಾಕ್ಸ್​ ತಂದುಕೊಡ ಬಲ್ಲ ಆಟಗಾರ. ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಿಶನ್​ ಜೊತೆ 80 ರನ್​ ಗಳಿಸಿ ಒತ್ತಡವನ್ನು ನಿಭಾಯಿಸ ಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಬೌಲಿಂಗ್​ ವಿಭಾಗ: ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಬೌಲಿಂಗ್​ನಲ್ಲಿ ಹೊಸ ಬದಲಾವಣೆ ಉಂಟಾಗಿದೆ. ವೇಗ ಮತ್ತು ಸ್ವಿಂಗ್​ನ ಕಾಂಬಿನೇಷನ್​ನಿಂದ​ ತಂಡ ವಿದೇಶಿ ನೆಲದಲ್ಲೂ ಯಶಸ್ವಿ ಆದ ಅಂಕಿ ಅಂಶ ಇದೆ.

ಜಸ್ಪ್ರೀತ್ ಬುಮ್ರಾ:11 ತಿಂಗಳ ಕಾಲ ವಿಶ್ರಾಂತಿ ನಂತರ ಬೂಮ್ ಬೂಮ್ ಬುಮ್ರಾ ಅವರು ಮೊದಲ ಓವರ್ ವಿಕೆಟ್ ಟೇಕರ್ ಆಗಿದ್ದಾರೆ. ತಮ್ಮ ಭಿನ್ನ ಕೈ ಆ್ಯಕ್ಷನ್​ನಿಂದಲೇ ಬ್ಯಾಟರ್​ಗಳನ್ನು ಬುಮ್ರಾ ಗೊಂದಲಕ್ಕೀಡು ಮಾಡುತ್ತಾರೆ. ತಿಂಗಳುಗಳ ನಂತ ತಂಟಕ್ಕೆ ಕಮ್​ಬ್ಯಾಕ್ ಮಾಡಿರುವ ಬುಮ್ರಾ ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಮೊಹಮ್ಮದ್ ಸಿರಾಜ್: ಒಂದು ಸಮಯದಲ್ಲಿ ತಂಡದಲ್ಲಿ ಹೆಚ್ಚು ರನ್​ ಕೊಡುತ್ತಾರೆ ಎಂದು ನಿಂದನೆಗೆ ಒಳಗಾಗುತ್ತಿದ್ದ ಸಿರಾಜ್​ ಇಂದು ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಚಾಣಕ್ಯರಾಗಿದ್ದಾರೆ. ಏಷ್ಯಾಕಪ್​ ಫೈನಲ್​ನಲ್ಲಿ 6 ವಿಕೆಟ್​ ಪಡೆದು ವಿಶ್ವಕ್ರಿಕೆಟ್​ ನಿಬ್ಬೆರಗಾಗಿಸಿದ್ದರು. ಏಕದಿನ ವಿಶ್ವಕಪ್​ನಲ್ಲೂ ಅವರಿಂದ ಅಂತಹ ಬೌಲಿಂಗ್​ ನಿರೀಕ್ಷೆ ತಂಡದಲ್ಲಿದೆ.

ಮೊಹಮ್ಮದ್ ಶಮಿ: ಸ್ವಿಂಗ್​ ಪಿಚ್​ಗಳಲ್ಲಿ ಕಮಾಲ್​ ಮಾಡುವ ಬೌಲರ್​. ಅಲ್ಲದೇ ಆರಂಭಿಕ ಓವರ್​ಗಳಲ್ಲೇ ಎದುರಾಳಿಗಳಿಗೆ ಕಾಟ ಕೊಡಬಲ್ಲರು.

ಆರ್.ಅಶ್ವಿನ್:ಅನುಭವಿ ಸ್ಪಿನ್ನರ್​ ಅಶ್ವಿನ್​ ತಮ್ಮ ಸ್ಪಿನ್​ ಪಿಚ್​ಗಳಲ್ಲಿ ಎದುರಾಳಿಗಳಿಗೆ ಮಾರಕ ಆಗುವುದರಲ್ಲಿ ಅನುಮಾನ ಇಲ್ಲ. ಅವರನ್ನು ಮೈಂಡ್​ ಗೇಮ್​​ ಮಾಡುವ ಮಾಸ್ಟರ್​ ಎಂದೇ ಹೇಳಲಾಗುತ್ತದೆ. ಧೋನಿ ತಂಡದಲ್ಲಿದ್ದಾಗ ಚಾಣಾಕ್ಷತನದಿಂದ ಇವರು ವಿಕೆಟ್​ ಉರುಳಿಸುವಲ್ಲಿ ನಿಪುಣರಾಗಿದ್ದರು.

ಕುಲ್ದೀಪ್ ಯಾದವ್: ಭಾರತ ತಂಡದ ಸ್ಟಾರ್​ ಸ್ಪಿನ್ನರ್​​ ಕುಲ್ದೀಪ್ ಯಾದವ್​. ಏಷ್ಯಾಕಪ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿ ವಿಶ್ವಕಪ್​ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಂಡರು. ಮಧ್ಯಮ ಓವರ್​ಗಳಲ್ಲಿ ತಮ್ಮ ಚೈನಾಮನ್​ ಬೌಲಿಂಗ್​ನಿಂದ ವಿಕೆಟ್​ ಪಡೆಯಬಲ್ಲ ಆಟಗಾರ.

ಒಟ್ಟಿನಲ್ಲಿ ಭಾರತದ ವಿಶ್ವಕಪ್ ಟೀಂನ ಎಲ್ಲ ಆಟಗಾರರು ಫಾರ್ಮ್​ನಲ್ಲಿದ್ದು, ತಂಡ ಬಲಿಷ್ಠವಾಗಿದೆ. ಅಲ್ಲದೇ ಹಲವು ಅಂಶಗಳು ಪ್ಲಸ್ ಆಗುವುದರಿಂದ ಟೀಂ ಇಂಡಿಯಾ10 ವರ್ಷದ ನಂತರ ತವರು ನೆಲದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವುದರಲ್ಲಿ ಅನುಮಾನ ಇಲ್ಲ ಎಂದೇ ಹೇಳಬಹುದಾಗಿದೆ.

ಇದನ್ನೂ ಓದಿ: ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಿಶನ್ ಕಣಕ್ಕೆ; ಕೋಚ್​ ದ್ರಾವಿಡ್​ ಹೇಳಿದ್ದೇನು?

ABOUT THE AUTHOR

...view details