ಕರ್ನಾಟಕ

karnataka

By ETV Bharat Karnataka Team

Published : Nov 1, 2023, 11:02 PM IST

ETV Bharat / sports

ಅಯ್ಯರ್​, ಸಿರಾಜ್​ಗೆ ಕೊಕ್?​: ಸಿಂಹಳೀಯರ ವಿರುದ್ಧ ಏಳನೇ ಜಯಕ್ಕೆ ಟೀಂ​ ಇಂಡಿಯಾ ಪ್ಲಾನ್ ಏನು?

India vs Sri Lanka Match Preview: ನವೆಂಬರ್​ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಭಾರತ ಎದುರಿಸಲಿದೆ.

ICC Cricket World Cup
ICC Cricket World Cup

ಮುಂಬೈ (ಮಹಾರಾಷ್ಟ್ರ):2023ರ ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಂತೆ ಟೀಂ​ ಇಂಡಿಯಾ ಆರಕ್ಕೆ ಆರು ಪಂದ್ಯವನ್ನು ಗೆದ್ದು ಅಜೇಯವಾಗಿದೆ. ಅತ್ತ ಗಾಯಗಳ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾ ಕೇವಲ ಎರಡು ಪಂದ್ಯಗಳ ಗೆಲುವು ಸಾಧಿಸಿದೆ. ಉಳಿದ ಮೂರು ಪಂದ್ಯಗಳನ್ನು ಗೆದ್ದರೆ, ಸಿಂಹಳೀಯರಿಗೆ ಸೆಮೀಸ್ ಪ್ರವೇಶ ಸಿಕ್ಕರೂ ಸಿಗಬಹುದು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್​ 2ರಂದು ತನಗೆ ಮಾಡು ಇಲ್ಲವೇ ಮಡಿ ರೀತಿಯಾಗಿರುವ ಪಂದ್ಯದಲ್ಲಿ ಲಂಕಾ ತಂಡ ಭಾರತವನ್ನು ಎದುರಿಸುತ್ತಿದೆ. ಈ ಮೈದಾನದಲ್ಲಿ ಲಂಕಾಗೆ 2011ರ ವಿಶ್ವಕಪ್​ ಫೈನಲ್​ನ ಮುಖಭಂಗ ಎಂದಿಗೂ ಮರೆಯದಂತಿದೆ. ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ದ್ವೀಪ ರಾಷ್ಟ್ರದ ಕ್ರಿಕೆಟ್ ಹಿರಿಮೆಯ ಮಸುಕಾಗಿದೆ. ನಾಯಕ ಕುಸಾಲ್ ಮೆಂಡಿಸ್ ಅವರು ಈ ಆವೃತ್ತಿಯಿಂದ ಕನಿಷ್ಠ ಗೌರವಾನ್ವಿತ ನಿರ್ಗಮನದ ಭರವಸೆಯಲ್ಲಿ ತ್ವರಿತ ಪರಿಹಾರ ಕಾರ್ಯಾಚರಣೆಯನ್ನು ಮಾಡಿಕೊಂಡು ತಂಡವನ್ನು ಮುನ್ನಡೆಸುತ್ತಿದ್ದಾರೆ.

ರೋಹಿತ್​ ಪಡೆಯಲ್ಲಿ ಕೆಲ ಹುಳುಕುಗಳಿದ್ದರೂ ಸತತ ಗೆಲುವು ಅವುಗಳನ್ನು ಮರೆಮಾಚಿದೆ. ತವರು ನೆಲದ ಲಾಭ ಒಂದೆಡೆ ಆದರೆ, ಅನುಭವಿಗಳ ಫಾರ್ಮ್​ ತಂಡವನ್ನು ರಕ್ಷಿಸುತ್ತಿದೆ. ಇದರ ಜೊತೆಗೆ ತಂಡವು ಬೌಲಿಂಗ್​ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ಕಂಡಿರುವುದು ಸರಣಿ ಗೆಲುವಿನ ಹಿಂದಿನ ರಹಸ್ಯವಾಗಿದೆ. 6ರಲ್ಲಿ ಎಲ್ಲ ಪಂದ್ಯಗಳ ಗೆಲುವಿನ ಶ್ರೇಯ ಬೌಲರ್​ಗಳಿಂಗೆ ಸಲ್ಲುತ್ತದೆ, ಎಂದರೆ ತಪ್ಪಾಗದು. ಏಕೆಂದರೆ ಬ್ಯಾಟರ್​​ಗಳಿಗೆ ಒತ್ತಡ ಆಗದಂತೆ ಎದುರಾಳಿಯನ್ನು ಪ್ರತಿ ಬಾರಿಯೂ 300 ರನ್​ ಗಡಿಯೊಳಗೆ ನಿಯಂತ್ರಸುವಲ್ಲಿ ಯಶಸ್ವಿ ಆಗಿದ್ದಾರೆ.

ಅನುಭವಿಗಳ ಆಸರೆ: ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ಅವರ ಅನುಭವ ಮತ್ತು ಜವಾಬ್ದಾರಿ ತಂಡಕ್ಕೆ ಪ್ರತಿ ಬಾರಿಯೂ ನೆರವಾಗುತ್ತಿದೆ. ಮೂವರಲ್ಲಿ ಒಬ್ಬರು ತಂಡಕ್ಕೆ ನೆರವಾಗುತ್ತಲೇ ಇದ್ದಾರೆ. ರೋಹಿತ್ ಶರ್ಮಾ ಆರಂಭಿಕರಾಗಿ ವೇಗದ ಆರಂಭವನ್ನು ನೀಡಿದರೆ, ಮೂರನೇ ಕ್ರಮಾಂಕದಲ್ಲಿ ವಿರಾಟ್​ ತಂಡಕ್ಕೆ ಆಸರೆ ಆಗುತ್ತಿದ್ದಾರೆ. ರಾಹುಲ್​ ಐದನೇ ಬ್ಯಾಟರ್​ ಆಗಿ ತಂಡಕ್ಕೆ ವಿಕೆಟ್​ ಕಾಯ್ದುಕೊಳ್ಳುವಲ್ಲಿ ಯಶಸ್ವಿ ಆಗುತ್ತಿದ್ದಾರೆ.

ಕಾಡುವ ಬೌಲರ್​ಗಳು: 6 ಪಂದ್ಯಗಳಲ್ಲಿ 4 ತಂಡವನ್ನು ಟೀಂ​ ಇಂಡಿಯಾ ಬೌಲರ್​ಗಳು ಸರ್ವಪತನ ಮಾಡಿದ್ದಾರೆ. 2 ತಂಡಗಳ 8 ವಿಕೆಟ್​ ಕೀಳುವಲ್ಲಿ ಯಶಸ್ವಿ ಆಗಿದ್ದಾರೆ. ಪವರ್​ ಪ್ಲೇ ಮತ್ತು ಮಧ್ಯಮ ಓವರ್​ಗಳಲ್ಲಿ ಪರಿಣಾಮಕಾರಿ ಬೌಲಿಂಗ್​ ಜೊತೆಗೆ ಡೆತ್​ ಓವರ್​ಗಳಲ್ಲಿ ರನ್​ ಕೊಡದೇ ವಿಕೆಟ್​ ಪಡೆಯುವಲ್ಲಿ ತಂಡ ಯಶಸ್ವಿ ಆಗುತ್ತಿದೆ. ಇದರಿಂದ ತಂಡ ಬೃಹತ್​ ಮೊತ್ತವನ್ನು ಎದುರಿಸದೇ ಸರಳವಾದ ಮೊತ್ತವನ್ನು ಸುಲಭವಾಗಿ ಬೆನ್ನತ್ತಿ ಗೆದ್ದಿದೆ.

ಬದಲಾವಣೆ ಸಾಧ್ಯತೆ: ನಾಲ್ಕನೇ ಕ್ರಮಾಂಕದಲ್ಲಿ ಅಯ್ಯರ್​ ಅಷ್ಟು ಉತ್ತಮ ಪ್ರದರ್ಶನ ನೀಡದಿರುವುದು ಅವರ ಸ್ಥಾನಕ್ಕೆ ಕುತ್ತಾಗುವ ಸಾಧ್ಯತೆ ಇದೆ. ಇಶಾನ್​ ಕಿಶನ್​ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿರುವುದರಿಂದ ಅವರಿಗೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ. ಬೌಲಿಂಗ್​ ವಿಭಾಗದಲ್ಲಿ ಸಿರಾಜ್​ ಕಳೆದ ಕೆಲ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಕಾಣದಿರುವ ಹಿನ್ನೆಲೆ ಅವರಿಗೆ ಕೊಕ್​ ನೀಡುವ ನಿರೀಕ್ಷೆ ಇದೆ.

ಲಂಕಾಗೆ ಗೆಲುವು ಅನಿವಾರ್ಯ: 2025ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾಗವಹಿಸಲು ಅವಕಾಶಕ್ಕಾಗಿ ಆದರೂ ಮುಂದಿನ ಪಂದ್ಯಗಳನ್ನು ಲಂಕಾ ಗೆಲ್ಲಬೇಕಿದೆ. ಈ ವಿಶ್ವಕಪ್​ನಲ್ಲಿ ತಂಡ ಸೆಮೀಸ್​ ಪ್ರವೇಶಿಸಲು ಮಾರ್ಗ ಕಠಿಣವಾಗಿದೆ. ತಂಡದ ಪ್ರಮುಖ ಆಟಗಾರರು ಗಾಯ್ಕಕೆ ತುತ್ತಾಗಿದ್ದು, ತಂಡದ ದುರ್ಬಲತೆಗೆ ಕಾರಣವಾಗಿದೆ. ವಿಶ್ವಕಪ್​ಗೂ ಮುನ್ನ ನಡೆದ ಲಂಕಾ ಪ್ರೀಮಿಯರ್​​ ಲೀಗ್​ನಲ್ಲಿ ಆಟಗಾರರು ಗಾಯಕ್ಕೆ ತುತ್ತಾದರು. ಅದಲ್ಲೂ ಸ್ಟಾರ್​ ಅಲ್​ರೌಂಡರ್​ ವನಿಂದು ಹಸರಂಗ ಇಲ್ಲದಿರುವುದು ತಂಡಕ್ಕೆ ಹೊರೆಯಾಗಿದೆ.

ಸಂಭಾವ್ಯ ತಂಡಗಳು.. ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ನಾಯಕ/ ವಿಕೆಟ್​ ಕೀಪರ್​), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.

ಯಾವಾಗ?: ನವೆಂಬರ್ 2, 2023, ಮಧ್ಯಹ್ನ 2ಕ್ಕೆ ಪಂದ್ಯಾರಂಭ.
ಎಲ್ಲಿ?: ವಾಂಖೆಡೆ ಸ್ಟೇಡಿಯಂ, ಮುಂಬೈ. ಸ್ಟಾರ್​ಸ್ಪೋರ್ಟ್ಸ್ ಮತ್ತು ಹಾಟ್​ಸ್ಟಾರ್​ನಲ್ಲಿ ನೇರಪ್ರಸಾರ ಲಭ್ಯ. ​

ಇದನ್ನೂ ಓದಿ:Sachin Tendulkar: ವಾಂಖೆಡೆಯಲ್ಲಿ 22 ಅಡಿ ಎತ್ತರದ ಸಚಿನ್​ ಪ್ರತಿಮೆ ಅನಾವರಣ.. ಮುಖ್ಯಮಂತ್ರಿ ಶಿಂಧೆ ಭಾಗಿ

ABOUT THE AUTHOR

...view details