ಹೈದರಾಬಾದ್ : ಆಲ್ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂದಿನ ಎರಡು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಟೀಮ್ ಇಂಡಿಯಾ ವಿಶ್ವಕಪ್ನ ಲೀಗ್ ಹಂತದಲ್ಲಿ ಮುಂದೆ ಅಕ್ಟೋಬರ್ 29 ರಂದು ಲಕ್ನೋದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ನಂತರ ನವೆಂಬರ್ 2 ರಂದು ಮುಂಬೈನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಲಕ್ನೋದಲ್ಲಿ ಆಂಗ್ಲರ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಬಹುತೇಕ ಅಲಭ್ಯರಾಗಿರುತ್ತಾರೆ ಮತ್ತು ಅವರು ತಂಡದೊಂದಿಗೆ ಪ್ರವಾಸದಲ್ಲೂ ಇರುವುದಿಲ್ಲ. ಮುಂಬೈ ಪಂದ್ಯದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಬಂದಿಲ್ಲ.
ಪುಣೆಯ ಎಮ್ಸಿಎ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್ನ ಭಾರತದ ನಾಲ್ಕನೇ ಲೀಗ್ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಎಡ ಪಾದದ ನೋವಿನಿಂದ ಬಳಲಿದರು. ಓವರ್ನ ಮೂರು ಬಾಲ್ ಮಾಡಿದ್ದ ಅವರು ನಂತರ ಮೈದಾನದಿಂದ ಹೊರ ನಡೆದಿದ್ದರು. ಅವರ ಓವರ್ನ್ನು ಮಾಜಿ ನಾಯಕ ವಿರಾಟ್ ಮುಂದುವರೆಸಿದ್ದರು. ಇದರ ಪರಿಣಾಮವಾಗಿ ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಬಾಂಗ್ಲಾ ಪಂದ್ಯದ ನಂತರ ಹಾರ್ದಿಕ್ ಅವರನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವೈದ್ಯಕೀಯ ಚಿಕಿತ್ಸೆಗೆ ಕರೆತರಲಾಗಿತ್ತು.