ಕರ್ನಾಟಕ

karnataka

ETV Bharat / sports

Kapil Dev: 'ಗಾಯವಾದ್ರೂ ಐಪಿಎಲ್​ನಲ್ಲಿ ಆಡ್ತೀರಿ, ಟೀಂ ಇಂಡಿಯಾಕ್ಕೆ ಯಾಕೆ ಆಡಲ್ಲ?': ಕಪಿಲ್​ ದೇವ್​ ಕಿಡಿ

Kapil Dev criticizes star cricketers: ಟೀಂ ಇಂಡಿಯಾದಲ್ಲಿ ನಡೆಯುತ್ತಿರುವ ಪ್ರಯೋಗಗಳ ಮೇಲೆ ಮಾಜಿ ಕ್ರಿಕೆಟಿಗರು ಗರಂ ಆಗಿದ್ದಾರೆ. ಗಾಯದ ಸಮಸ್ಯೆ ಹೇಳಿ ಆಟಗಾರರು ಸರಣಿಗಳಿಂದ ದೂರವುಳಿಯುತ್ತಿರುವ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ.

By

Published : Jul 31, 2023, 1:37 PM IST

ಲೆಜೆಂಡರಿ ಕ್ರಿಕೆಟರ್​ ಕಪಿಲ್​ ದೇವ್​ ಕಿಡಿ
ಲೆಜೆಂಡರಿ ಕ್ರಿಕೆಟರ್​ ಕಪಿಲ್​ ದೇವ್​ ಕಿಡಿ

ನವದೆಹಲಿ:ಅಷ್ಟೇನೂ ಶಕ್ತವಲ್ಲದ ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದ್ದು, ಕ್ರಿಕೆಟ್​ ಅಭಿಮಾನಿಗಳ, ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಏಕದಿನ ಕ್ರಿಕೆಟ್​ ವಿಶ್ವಕಪ್​ ಮುಂದಿಟ್ಟುಕೊಂಡು ಇನ್ನೂ ಪ್ರಯೋಗ ನಡೆಸುತ್ತಿರುವ ತಂಡದ ಆಡಳಿತ ಮಂಡಳಿ ಮತ್ತು ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗರು ಹರಿಹಾಯ್ದಿದ್ದಾರೆ.

1983ರ ವಿಶ್ವಕಪ್​ ವಿಜೇತ ನಾಯಕ, ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಭಾರತ ಕ್ರಿಕೆಟ್​ ತಂಡದ ಹಿರಿಯ ಆಟಗಾರರೂ ಮತ್ತು ಬಿಸಿಸಿಐ ನೀತಿಯನ್ನು ಅಲ್ಲಗಳೆದಿದ್ದಾರೆ. "ನಿಮಗೆ ಟೀಂ ಇಂಡಿಯಾಕ್ಕಿಂತಲೂ ಐಪಿಎಲ್​ ಮುಖ್ಯವಾಯಿತೇ?. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ಯಾಕೆ" ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟೀಂ ಇಂಡಿಯಾ ಬಗ್ಗೆ ಅಸಮಾಧಾನ ವ್ಯಕ್ತಪಡಿರುವ ಲೆಜೆಂಡರಿ ಕ್ರಿಕೆಟರ್​, "ಹಣದ ಹೊಳೆ ಹರಿಸುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಐಪಿಎಲ್​) ಗಾಯಗೊಂಡರೂ ಲೆಕ್ಕಿಸದೇ ಭಾಗವಹಿಸುತ್ತೀರಿ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸಣ್ಣ ಸಮಸ್ಯೆಯಾದರೂ ವಿಶ್ರಾಂತಿ ಬಯಸಿ ತಂಡದಿಂದ ಹೊರಗುಳಿಯುತ್ತೀರಿ. ನಿಮಗೆ ಆಟದ ಮೇಲೆ ಬದ್ಧತೆ ಇದೆಯೇ?" ಎಂದು ಹಿರಿಯ ಆಟಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು.

"ಕ್ರಿಕೆಟ್​ನಲ್ಲಿ ಗಾಯ ಸಹಜ. ಹಾಗಂತ ಮಹತ್ವದ ಪಂದ್ಯಗಳಲ್ಲಿ ನೆಪ ಹೇಳಿ ಟೂರ್ನಿಯಿಂದ ಹೊರಗುಳಿಯುತ್ತೀರಿ. ಗಾಯಗೊಂಡಿದ್ದರೂ ಐಪಿಎಲ್​ ಟೂರ್ನಿಯನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ಆಗ ನಿಮಗೆ ನೆನಪಾಗುವುದಿಲ್ಲವಾ?. ಟೀಂ ಇಂಡಿಯಾ ಪರವಾಗಿ ಬದ್ಧತೆಯಿಂದ ಆಡುವ ಆಟಗಾರರು ಕಡಿಮೆಯಾಗಿದ್ದಾರೆ. ಇದನ್ನು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ" ಎಂದು ಕಿಡಿಕಾರಿದ್ದಾರೆ.

ಅಷ್ಟಕ್ಕೂ ಬೂಮ್ರಾಗೆ ಏನಾಗಿದೆ?: "ಟೀಂ ಇಂಡಿಯಾದ ಸ್ಟಾರ್​ ವೇಗಿ ಜಸ್ಪ್ರೀತ್​ ಬೂಮ್ರಾ ಭರವಸೆಯ ಆಟಗಾರರಾಗಿದ್ದರು. ಗಾಯದ ಸಮಸ್ಯೆ ಹೇಳಿ ಅವರು ಒಂದು ವರ್ಷದಿಂದ ತಂಡದಿಂದ ದೂರವಿದ್ದಾರೆ. ವಿಶ್ವಕಪ್​ ವೇಳೆಗೆ ಅವರು ಫಿಟ್​ ಆದರೆ, ತಂಡಕ್ಕೆ ನೆರವಾಗಲಿದೆ. ಅಷ್ಟಕ್ಕೂ ಅವರಿಗೆ ಆಗಿರುವ ಸಮಸ್ಯೆ ಏನೆಂಬುದನ್ನು ಎಲ್ಲೂ ಹೇಳಿಲ್ಲ. ಅಪಘಾತಕ್ಕೀಡಾಗಿರುವ ವಿಕೆಟ್​ ಕೀಪರ್​ ರಿಷಬ್​ ಪಂತ್​ ಇದ್ದಿದ್ದರೆ ವಿಂಡೀಸ್​ ಟೆಸ್ಟ್ ಸರಣಿ ಇನ್ನೂ ಚೆನ್ನಾಗಿರುತ್ತಿತ್ತು" ಎಂದು ಹೇಳಿದ್ದಾರೆ.

ಬಿಸಿಸಿಐ ಮೇಲೆ ಗರಂ: "ಐಪಿಎಲ್​ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆಯ ವಿಚಾರದಲ್ಲಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಎಡವುತ್ತಿದೆ. ಆಟಗಾರರ ಕಾರ್ಯಭಾರ ನಿರ್ವಹಣೆಯಲ್ಲಿ ಬಿಸಿಸಿಐ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ಮಂಡಳಿ ಇನ್ನೂ ತಂಡವನ್ನು ಪ್ರಯೋಗಕ್ಕೆ ಒಳಪಡಿಸಿದೆ. ಹೀಗಾದರೆ, ವಿಶ್ವಕಪ್​ ಮೇಲೆ ಪರಿಣಾಮ ಬೀರುವುದಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧ 2ನೇ ಏಕದಿನದಲ್ಲಿ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಿ ಕಿರಿಯ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ತಂಡ ಕಳಪೆ ಪ್ರದರ್ಶನ ನೀಡಿ ವಿಂಡೀಸ್​ ವಿರುದ್ಧ ಸೋಲು ಅನುಭವಿಸಿತ್ತು. ಇದು ಟೀಕೆಗೆ ಗುರಿಯಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ:Yuvaraj Singh: ಸ್ಟುವರ್ಟ್‌ ಬ್ರಾಡ್‌ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು, ಅವರ ಸಾಧನೆ ಪ್ರೇರಣಾದಾಯಿ: ಯುವರಾಜ್ ಸಿಂಗ್‌

ABOUT THE AUTHOR

...view details