ಹರಾರೆ (ಜಿಂಬಾಬ್ವೆ):ಕ್ರಿಕೆಟ್ ದುನಿಯಾದಲ್ಲಿ ಮಂಕಡ್ ರನೌಟ್ ವಿವಾದ ಈ ಹಿಂದಿನಿಂದಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಮಂಕಡಿಂಗ್ ಸದ್ದು ಮಾಡಿದೆ. ಆದರೆ, ಕ್ರೀಡಾಸ್ಫೂರ್ತಿ ಮರೆದ ಟೀಂ ಇಂಡಿಯಾ ಮಧ್ಯಮ ವೇಗಿ ಚಹರ್, ಅಂಪೈರ್ ಬಳಿ ವಿಕೆಟ್ಗೋಸ್ಕರ ಅಪೀಲ್ ಮಾಡಿಲ್ಲ. ಈ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ.
ಹರಾರೆಯ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ಜಿಂಬಾಬ್ವೆ-ಭಾರತ 3ನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಂ ಇಂಡಿಯಾ 290ರನ್ಗಳು ಗುರಿ ನೀಡಿತ್ತು. ಜಿಂಬಾಬ್ವೆ ಪರ ಆರಂಭಿಕರಾಗಿ ಕಣಕ್ಕಿಳಿದ ಬ್ಯಾಟರ್ ಇನೋಸೆಂಟ್ ಕೈಯಾ ನಾನ್ಸ್ಟ್ರೈಕ್ನಲ್ಲಿದ್ದಾಗ ಕ್ರಿಸ್ ಬಿಟ್ಟಿದ್ದರಿಂದ ಮಂಕಡೆ ಬಲೆಗೆ ಬಿದ್ದಿದ್ದರು.
ಬೌಲಿಂಗ್ ಮಾಡ್ತಿದ್ದ ದೀಪಕ್ ಚಹರ್ ಬೇಲ್ಸ್ ಹಾರಿಸಿದ್ದರು. ಈ ವೇಳೆ ಅಂಪೈರ್ ಬಳಿ ವಿಕೆಟ್ಗೋಸ್ಕರ ಮನವಿ ಮಾಡದೇ ಕ್ರೀಡಾ ಸ್ಫೂರ್ತಿ ಮೆರೆದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.
ಏನಿದು ಮಂಕಡಿಂಗ್: ಮಂಕಡಿಂಗ್ ಅನೇಕ ವರ್ಷಗಳಿಂದ ಬಹಳಷ್ಟು ಚರ್ಚೆಯಲ್ಲಿರುವ ವಿಷಯ. ನಾನ್ಸ್ಟ್ರೇಕರ್ ತುದಿಯಲ್ಲಿರುವ ಬ್ಯಾಟರ್, ಬೌಲರ್ ಎಸೆತ ಹಾಕುವ ಮುನ್ನ ಕ್ರೀಸ್ ಬಿಟ್ಟಿದ್ದರೆ ರನೌಟ್ ಮಾಡುವುದನ್ನ ಮಂಕಡಿಂಗ್ ಎನ್ನಲಾಗುತ್ತದೆ. 2019ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಶ್ವಿನ್ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನ ಮಂಕಡಿಂಗ್ ಮೂಲಕ ಔಟ್ ಮಾಡಿದ್ದರು. ಇದಾದ ಬಳಿಕ ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಅಶ್ವಿನ್ ನಿರ್ಧಾರಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ರೆ, ಇನ್ನೂ ಹಲವರು ಬೆಂಬಲ ಸೂಚಿಸಿದ್ದರು.
ಇದಾದ ಬಳಿಕ ಇದರ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ್ದ ಎಂಸಿಸಿ(ಮೆರಿಲ್ಬೊನ್ ಕ್ರಿಕೆಟ್ ಕ್ಲಬ್) ಮಂಕಡಿಂಗ್ ಮೂಲಕ ರನೌಟ್ ಮಾಡಬಹುದು ಎಂದು ಹೇಳಿತ್ತು. ಜೊತೆಗೆ ಎಂಸಿಸಿ ನಿಯಮ 41.16ರ ಪ್ರಕಾರ ನಾನ್ ಸ್ಟ್ರೈಕರ್ ರನೌಟ್ ಕುರಿತು ಉಲ್ಲೇಖವಿದ್ದು, ಬೌಲಿಂಗ್ ಮಾಡುವ ಸಂದರ್ಭದಲ್ಲಿ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಬ್ಯಾಟರ್ ಕ್ರೀಸ್ ಬಿಟ್ಟಿದ್ದರೆ ರನೌಟ್ ಮಾಡಬಹುದು ಎಂದು ಹೇಳಿತ್ತು. ಈ ನಿರ್ಧಾರಕ್ಕೆ ವಿರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ:ಮಂಕಡ್ ರನ್ಔಟ್ ವಿವಾದ: ಕಪಿಲ್ ದೇವ್ ದಾರಿ ಹಿಡಿದ ಅಶ್ವಿನ್... ಬಟ್ಲರ್ಗೂ ಇದು ಮೊದಲೇನಲ್ಲ
1948ರಿಂದಲೂ ಮಂಕಡ್ ರನೌಟ್ ಜಾರಿಯಲ್ಲಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯದಲ್ಲೂ ಈ ರೀತಿಯ ಪ್ರಕರಣ ನಡೆದಿತ್ತು. ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಕಪಿಲ್ ದೇವ್ ಕೂಡ ಈ ರೀತಿಯಾಗಿ ವಿಕೆಟ್ ಪಡೆದುಕೊಂಡಿದ್ದರು.