ಚೆನ್ನೈ: 3 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಮಿಳುನಾಡಿನ ನಾಲ್ಕು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ಗೆ ತಮ್ಮದೇ ಆದ ಸೇವೆ ಸಲ್ಲಿಸಿರುವ ಪಿಚ್ ಕ್ಯೂರೇಟರ್ ಕೆ ಪಾರ್ಥಸಾರಥಿ ಅವರಿಗೆ ಸನ್ಮಾನ ಮಾಡಿ, ತಲಾ 7 ಲಕ್ಷ ರೂಪಾಯಿಗಳನ್ನು ನೀಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಟಿಎನ್ಸಿಎ ಕಾರ್ಯದರ್ಶಿ ಆರ್ಎಸ್ ರಾಮಸ್ವಾಮಿ ಅವರ ಸಮ್ಮುಖದಲ್ಲಿ ರಾಜ್ಯ ಕಂಡ ಲೆಜೆಂಡರಿ ಕ್ರಿಕೆಟಿಗರಿಗೆ ಚೆಕ್ ವಿತರಿಸಿದ್ದಾರೆ.
ತಮಿಳು ನಾಡು ಕ್ರಿಕೆಟ್ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿರುವ ಮಾಜಿ ಕ್ರಿಕೆಟಿಗರನ್ನು ಗೌರವಿಸುವುದಕ್ಕಾಗಿ ಮಂಡಳಿ ಕೆಲವು ಹಿರಿಯ ಕ್ರಿಕೆಟಿಗರನ್ನು ಗುರುತಿಸಿ ಮೊದಲು 5 ಲಕ್ಷ ರೂ. ನೀಡಲು ತೀರ್ಮಾನಿಸಿತ್ತು. ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಸಿಎಸ್ಕೆ ಪ್ರತ್ಯೇಕವಾಗಿ ಪ್ರತಿಯೊಬ್ಬ ಫಲಾನುಭವಿಗಳಿಗೆ ತಲಾ 7 ಲಕ್ಷ ರೂ ನೀಡಿ ಗೌರವಿಸಿದೆ.
ತಮಿಳುನಾಡಿನ ಪರ 50 ರಿಂದ 60ರ ದಶಕದಲ್ಲಿ ಆಡಿದ್ದ ಕೆಆರ್ ರಾಜಗೋಪಾಲ್, ನಜಮ್ ಹುಸೇನ್, ಎಸ್ವಿಎಸ್ ಮಣಿ ಮತ್ತು ಆರ್. ಪ್ರಭಾಕರ್ ಅವರು ತಮಿಳುನಾಡು ಕ್ರಿಕೆಟ್ ಮಂಡಳಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ಅವರಿಗೂ ಒಂದು ಕೋಟಿ ರೂಪಾಯಿಯನ್ನು ಬಹುಮಾನವಾಗಿ ಪ್ರಕಟಿಸಿತ್ತು. ಜೊತೆಗೆ 87.58 ಮೀಟರ್ ಜಾವಲಿನ್ ಎಸೆದಿದ್ದಕ್ಕಾಗಿ 8,758 ನಂಬರ್ನ ವಿಶೇಷ ಜರ್ಸಿಯನ್ನು ನೀರಜ್ಗೆ ಗೌರವಪೂರ್ವಕವಾಗಿ ನೀಡುವುದಾಗಿ ಘೋಷಿಸಿತ್ತು.
ಇನ್ನೂ ಕೋವಿಡ್ 19 ಸಂದರ್ಭದಲ್ಲೂ ಸಿಎಸ್ಕೆ ತಮಿಳುನಾಡು ಸರ್ಕಾರಕ್ಕೆ 450 ಆಮ್ಲಜನಕ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿತ್ತು.
ಇದನ್ನು ಓದಿ:ಎನ್ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ.. ದ್ರಾವಿಡ್ ಮುಂದಿದೆ ಡಬಲ್ ಆಯ್ಕೆ!?