ಮುಂಬೈ: ರವೀಂದ್ರ ಜಡೇಜಾ ಆಲ್ರೌಂಡ್ ಆಟದ ನೆರವಿನಿಂದ 3 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 69 ರನ್ಗಳ ಅಂತರದಿಂದ ಆರ್ಸಿಬಿಯನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ರವೀಂದ್ರ ಜಡೇಜಾ ಮತ್ತು ಇಮ್ರಾನ್ ತಾಹೀರ್ ದಾಳಿಗೆ ನಲುಗಿದ ಆರ್ಸಿಬಿ ಸಿಎಸ್ಕೆ ನೀಡಿದ 192 ರನ್ಗಳ ಗುರಿಗೆ ಪ್ರತಿಯಾಗಿ 9 ವಿಕೆಟ್ ಕಳೆದುಕೊಂಡು 122 ರನ್ಗಳಿಸಿ ಸೋಲು ಕಂಡಿತು.
ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ 34 ರನ್ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್ ಆಯಿತು. ನಾಯಕ ವಿರಾಟ್ ಕೊಹ್ಲಿ 8 ರನ್ಗಳಿಗೆ ಕರ್ರನ್ಗೆ ವಿಕೆಟ್ ಒಪ್ಪಿಸಿದರೆ, 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ವಾಷಿಂಗ್ಟನ್ ಸುಂದರ್ ಕೇವಲ 7 ರನ್ಗಳಿಸಿ ಔಟಾದರು.
ಸ್ಫೋಟಕ ಬ್ಯಾಟ್ಸ್ಮನ್ಗಳಾದ ಗ್ಲೇನ್ ಮ್ಯಾಕ್ಸ್ವೆಲ್ 22, ಎಬಿಡಿ 4 ಮತ್ತು ಕ್ರಿಸ್ಚಿಯನ್ 1 ರನ್ಗಳಿಸಿ ಔಟಾಗುವುದರೊಂದಿಗೆ ಆರ್ಸಿಬಿ ಸೋಲು ಖಚಿತವಾಯಿತು. ಬಾಲಂಗೋಷಿಗಳಾದ ಕೈಲ್ ಜೆಮೀಸನ್ 16 ರನ್, ಹರ್ಷೆಲ್ ಪಟೇಲ್ ಡಕ್ಔಟ್, ಸೈನಿ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಕೇವಲ 13 ರನ್ ನೀಡಿ 3 ವಿಕೆಟ್ ಪಡೆದರೆ, ಇಮ್ರಾನ್ ತಾಹೀರ್ 16ಕ್ಕೆ 2, ಸ್ಯಾಮ್ ಕರ್ರನ್ 30ಕ್ಕೆ 1, ಶಾರ್ದುಲ್ ಠಾಕೂರ್ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಫಾಫ್ ಡು ಪ್ಲೆಸಿಸ್(50) ಮತ್ತು ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 191 ರನ್ಗಳಿಸಿತ್ತು. ಜಡೇಜಾ ಕೊನೆಯ ಓವರ್ನಲ್ಲಿ ಹರ್ಷಲ್ ಪಟೇಲ್ಗೆ 5 ಸಿಕ್ಸರ್ ಸೇರಿದಂತೆ 37 ರನ್ ಚಚ್ಚುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಅರ್ಧಶತಕ ಮತ್ತು 3 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.