ಮಸ್ಸೂರಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ವಿಶ್ವಕಪ್ ಟೂರ್ನಿ ಸೋತ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದು, ಕುಟುಂಬದ ಜೊತೆ ಎಂಜಾಯ್ ಮಾಡುತ್ತಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ನಲ್ಲಿ ಸೋಲನುಭವಿಸಿದ ನಂತರ ಎರಡು ತಿಂಗಳು ರಜಾ ತೆಗೆದುಕೊಂಡು ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದ ಧೋನಿ ನಂತರ ನಡೆದ ದಕ್ಷಿಣ ಆಫ್ರಿಕಾ ,ಬಾಂಗ್ಲಾದೇಶ, ವಿಂಡೀಸ್ ವಿರುದ್ಧ ಸೀಮಿತ ಓವರ್ಗಳ ಸರಣಿಯಿಂದಲೂ ದೂರ ಉಳಿದಿದ್ದರು.
ಇತ್ತೀಚೆಗೆ ಉತ್ತರಾಖಂಡ್ನ ಮಸ್ಸೂರಿಗೆ ಕಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ ಅವರು, ತಮ್ಮ ಮಗಳು ಜೀವಾ ಜೊತೆ ಮಂಜಿನ ಗೆಡ್ಡೆಯಲ್ಲಿ ಹೊಡೆದಾಡಿಕೊಂಡಿರುವ ಸಂತಸದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಸುಮಾರು 28 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.
ಇದಕ್ಕೂ ಮುನ್ನ ಜೀವಾ ಗಿಟಾರ್ ಹಿಡಿದು ಸಾಂಗ್ ಹೇಳುವ ಕ್ಯೂಟ್ ವಿಡಿಯೋವನ್ನು ಧೋನಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ "ಮಂಜು ಜೀವಾಳಲ್ಲಿರುವ ಅತ್ಯುತ್ತಮ ಕಲೆಯನ್ನು ಹೊರತರುತ್ತಿದೆ" ಎಂದು ಬರೆದುಕೊಂಡಿದ್ದರು. ಈ ವಿಡಿಯೋವನ್ನು ಕೂಡ 27 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.