ಆಕ್ಲೆಂಡ್: ಕೆ.ಎಲ್.ರಾಹುಲ್ ವಿಕೆಟ್ ಕೀಪರ್ ಕಾರ್ಯನಿರ್ವಹಿಸಿದರೆ ತಂಡ ಸಮತೋಲನದಲ್ಲಿರಲು ಸಹಾಯವಾಗುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಆರಂಭಿಕನಾಗಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ಕೆ.ಎಲ್.ರಾಹುಲ್ ಇದೀಗ ಮಧ್ಯಮ ಕ್ರಮಾಂದಲ್ಲೂ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ತಮ್ಮ ಸಾಮರ್ಥ್ಯ ತೋರಿಸಿಕೊಂಡಿದ್ದಾರೆ. ಆದ್ದರಿಂದಲೇ ಆಸ್ಟ್ರೇಲಿಯಾ ವಿರುದ್ಧ ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ಫಿಟ್ ಆಗಿದ್ದರೂ ರಾಹುಲ್ರನ್ನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿತ್ತು.
"ರಾಹುಲ್ ವಿಕೆಟ್ ಕೀಪಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರಿಂದ ತಂಡಕ್ಕೆ ಮತ್ತೊಬ್ಬ ಹೆಚ್ಚುವರಿ ಬ್ಯಾಟ್ಸ್ಮನ್ನನ್ನು ಆಯ್ಕೆ ಮಾಡಿಕೊಳ್ಳಲು ಅವರು ದಾರಿ ಮಾಡಿಕೊಟ್ಟಿದ್ದಾರೆ" ಎಂದು ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಧವನ್ ಗಾಯಗೊಂಡಿರುವುದರಿಂದ ಏಕದಿನ ಕ್ರಿಕೆಟ್ನಲ್ಲಿ ರಾಹುಲ್ರನ್ನು ವಿಕೆಟ್ ಕೀಪರ್ ಆಗಿ ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಯೋಜನೆಯಲ್ಲಿದ್ದೇವೆ. ಧವನ್ ಸ್ಥಾನದಲ್ಲಿ ಬೇರೊಬ್ಬ ಬ್ಯಾಟ್ಸ್ಮನ್ ಆಡಿಸಿ, ರಾಹುಲ್ರನ್ನು ಮಧ್ಯಮ ಕ್ರಮಾಂಕದಲ್ಲಿ ಅವರಿಷ್ಟದಂತೆ ಆಡಲು ಅವಕಾಶ ಕಲ್ಪಿಸಿಕೊಡಲು ಚಿಂತಿಸಿದ್ದೇವೆ. ಇದರಿಂದ ತಂಡಕ್ಕೆ ಒಬ್ಬ ಬ್ಯಾಟ್ಸ್ಮನ್ ಹೆಚ್ಚಾಗಲಿದ್ದಾರೆ. ಆದರೆ ಟಿ-20ಯಲ್ಲಿ ಮಾತ್ರ ರಾಹುಲ್ರನ್ನು ವಿಕೆಟ್ ಕೀಪಿಂಗ್ ಮಾಡಿದರೂ ಆರಂಭಿಕರನ್ನಾಗಿ ಕಣಕ್ಕಿಳಿಸಲಿದ್ದೇವೆ. ಏಕೆಂದರೆ ನಮ್ಮ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಡೈನಾಮಿಕ್ ಬ್ಯಾಟ್ಸ್ಮನ್ಗಳಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.
ರಾಹುಲ್ ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್ ಮಾಡಿದರೆ ಅವರನ್ನು ತಂಡ ಮುಂದುವರಿಸಲಿದೆ. ಇದರಿಂದ ತಂಡದ ಸಮತೋಲನ ಕೂಡಾ ಆಗಲಿದೆ. ನಾವೂ ಕೂಡಾ ತುಂಬಾ ಸಮಯದಿಂದ ಈ ರೀತಿಯ ಆಟಗಾರನನ್ನು ಎದುರು ನೋಡುತ್ತಿದ್ದೆವು ಎಂದು ಕೊಹ್ಲಿ ರಾಹುಲ್ ಬಗ್ಗೆ ಗುಣಗಾನ ಮಾಡಿದ್ದಾರೆ.