ಹೈದರಾಬಾದ್:ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಲು ಸಖತ್ ತಯಾರಿ ನಡೆಸುತ್ತಿದ್ದಾರೆ. ಆದರೆ ಕೊರೊನಾ ಮಹಾಮಾರಿಯ ಭೀತಿ ಇದರ ಮೇಲೆ ಬಿದ್ದಿರುವ ಕಾರಣ, ಪ್ರಸಕ್ತ ಸಾಲಿನ ಐಪಿಎಲ್ ನಡೆಯುವುದೇ ಡೌಟ್ ಎನ್ನಲಾಗುತ್ತಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಮೆಂಟ್ ನಡೆಸಲು ಈಗಾಗಲೇ ಕೆಲವೊಂದು ರಾಜ್ಯಗಳು ಹಿಂದೇಟು ಹಾಕುತ್ತಿದ್ದು, ದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಐಪಿಎಲ್ ನಡೆಸುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಟೂರ್ನಿ ರದ್ಧುಗೊಂಡರೆ ಧೋನಿ ಭವಿಷ್ಯ ಮತ್ತೊಮ್ಮೆ ತೂಗುಯ್ಯಾಲೆಯಲ್ಲಿ ನಿಂತುಕೊಳ್ಳಲಿದೆ.
ಚೀನಾದಲ್ಲಿ ವ್ಯಾಪಕವಾಗಿ ಹರಡಿಕೊಂಡು 4 ಸಾವಿರಕ್ಕೂ ಅಧಿಕ ಜನರ ಬಲಿ ಪಡೆದುಕೊಂಡಿರುವ ಕೊರೊನಾ ಈಗಾಗಲೇ ಭಾರತಕ್ಕೂ ಲಗ್ಗೆ ಹಾಕಿದೆ. ಸುಮಾರು 70 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಒಂದು ವೇಳೆ ಐಪಿಎಲ್ ಆಯೋಜನೆ ಮಾಡಿದರೆ ಹೆಚ್ಚಿನ ಜನರಲ್ಲಿ ಮಹಾಮಾರಿ ಹಬ್ಬುವ ಆತಂಕ ವ್ಯಕ್ತಪಡಿಸಲಾಗಿದ್ದು, ಇದೇ ಕಾರಣಕ್ಕಾಗಿ ಇದನ್ನ ಮುಂದೂಡಿಕೆ ಮಾಡಬೇಕು, ಇಲ್ಲವೇ ಬ್ಯಾನ್ ಮಾಡಬೇಕು ಎಂಬ ಮಾತುಗಳು ಗಂಭೀರವಾಗಿ ಕೇಳಿ ಬರುತ್ತಿವೆ.