ತಿರುವನಂತಪುರಂ:ಭಾರತದ ವಿರುದ್ಧದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ವಿಂಡೀಸ್ ತಂಡ 8 ವಿಕೆಟ್ಗಳ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಇಲ್ಲಿನ ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್, ಕೊಹ್ಲಿ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಕಳೆದ ಪಂದ್ಯದಂತೆ ಇಂದೂ ಕೂಡ ಭಾರತದ ಆರಂಭಿಕ ಆಟಗಾರರು ಉತ್ತಮ ಆರಂಭ ಒದಗಿಸುವಲ್ಲಿ ಎಡವಿದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ರಾಹುಲ್ ಇಂದು ಕೇವಲ 11 ರನ್ಗಳಿಗೆ ಖ್ಯಾರಿ ಪೀರೆಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ಆರಂಭದಿಂದಲೂ ನಿಧಾನವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಕೂಡ 18 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಜಾಸನ್ ಹೋಲ್ಡರ್ಗೆ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಮಧ್ಯಮ ಕ್ರಮಾಂಕದಿಂದ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಟ್ಗೆ ಇಳಿದ ಶಿವಂ ದುಬೆ ಬಿರುಸಿನ ಬ್ಯಾಟಿಂಗ್ ನಡೆಸಿದ್ರು. ಪೊಲಾರ್ಡ್ರ ಒಂದೇ ಓವರ್ನಲ್ಲಿ 3 ಸಿಕ್ಸರ್ ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನ ರಂಜಿಸಿದ್ರು. ಕೇವಲ 27 ಎಸೆತಗಳಲ್ಲೆ ಅಂತಾರಾಷ್ಟ್ರೀಯ ಟಿ-20ಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ರು. 54 ರನ್ ಗಳಿಸಿರುವಾಗ ಹೇಡನ್ ವಾಲ್ಶ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಹೇಟ್ಮಯರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚು ಅಬ್ಬರಿಸದೆ ಕೇವಲ 19 ರನ್ ಗಳಿಸಿ ವಿಲಿಯಮ್ಸ್ ಬೌಲಿಂಗ್ನಲ್ಲಿ ಔಟಾದರೆ, ಶ್ರೇಯಸ್ ಅಯ್ಯರ್ (11 ರನ್) ಹಾಗೂ ರವೀಂದ್ರ ಜಡೇಜಾ (9 ರನ್) ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ರಿಷಬ್ ಪಂತ್ 22 ಎಸೆತಗಳಲ್ಲಿ 33 ರನ್ ಬಾರಿಸಿ ಅಜೇಯರಾಗುಳಿಯುವ ಮೂಲಕ ತಂಡದ ಮೊತ್ತವನ್ನು 170ಕ್ಕೆ ಕೊಂಡೊಯ್ದರು. ವಿಂಡೀಸ್ ಪರ ಕೆಸ್ರಿಕ್ ವಿಲಿಯಮ್ಸ್ ಹಾಗೂ ಹೇಯ್ಡನ್ ವಾಲ್ಶ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಬಳಿಕ 171 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕೂಡ ಆರಂಭದಲ್ಲಿ ರನ್ ಕಲೆ ಹಾಕಲು ಪರದಾಡಿದರೂ ಕೂಡ ಕ್ರಮೇಣ ಆರಂಭಿಕರು ಅಬ್ಬರದ ಬ್ಯಾಟಿಂಗ್ ನಡೆಸಿದರು. ಇಯಾನ್ ಲೆವಿಸ್ 40 (35 ಎಸೆತ) ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಬಳಿಕ ಬಂದ ಹೇಟ್ಮಯರ್ 23 ರನ್ ಬಾರಿಸಿ ಪೆವಿಲಿಯನ್ಗೆ ವಾಪಸ್ಸಾದರು. ಆದರೆ ಅದಾಗಲೇ ವಿಂಡೀಸ್ 13.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತ್ತು. ಇನ್ನೊಂದೆಡೆ ಬ್ಯಾಟಿಂಗ್ ಮುಂದುವರೆಸಿದ್ದ ಮತ್ತೋರ್ವ ಆರಂಭಿಕ ಆಟಗಾರ ಲೆಂಡಲ್ ಸಿಮನ್ಸ್ (67*) ಅಜೇಯ ಅರ್ಧಶತಕ ಹಾಗೂ ನಿಕೋಲಸ್ ಪೂರನ್ ಕೇವಲ 18 ಎಸೆತಗಳಲ್ಲಿ 38 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 18.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಕೆರಿಬಿಯನ್ನರು ಗೆಲುವಿನ ಕೇಕೆ ಹಾಕುವುದಲ್ಲದೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದರು.
ಭಾರತದ ಪರ ಸ್ಪಿನ್ನರ್ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಯಜುವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದರು. ಅಜೇಯ ಅರ್ಧಶತಕ ಬಾರಿಸಿದ ಲೆಂಡಲ್ ಸಿಮನ್ಸ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಡಿ.11ರಂದು ಮುಂಬೈನಲ್ಲಿ ನಡೆಯಲಿದ್ದು, ಗೆದ್ದ ತಂಡ ಪ್ರಶಸ್ತಿ ಎತ್ತಿಹಿಡಿಯಲಿದೆ.