ಸೇಲಂ: ಕೇವಲ ನೆಟ್ ಬೌಲರ್ ಆಗಿ ಆಸೀಸ್ ಪ್ರವಾಸ ಕೈಗೊಂಡು ಮೂರು ಮಾದರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯಾರ್ಕರ್ ಕಿಂಗ್ ನಟರಾಜನ್ರನ್ನು ಸೇಲಂ ಜನರು ಮೆರವಣಿಗೆ ಮಾಡುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದು, ಈ ವಿಡಿಯೋ ಇಂಟರ್ನೆಟ್ನಲ್ಲಿ ಕಿಚ್ಚೆಬ್ಬಿಸಿದೆ.
ಭಾರತದಲ್ಲಿ ಕ್ರಿಕೆಟ್ ಕೇವಲ ಸಾಮಾನ್ಯ ಆಟವಲ್ಲ. ಕೋಟ್ಯಂತರ ಅಭಿಮಾನಿಗಳು ಕ್ರಿಕೆಟ್ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಅವರು 16 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದರು. ಈ ಪ್ರದರ್ಶನದಿಂದಲೇ ನೆಟ್ ಬೌಲರ್ ಆಗಿ ದುಬೈನಿಂದ ನೇರವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ನಂತರ ಏಕದಿನ, ಟಿ-20 ಹಾಗೂ ಟೆಸ್ಟ್ ತಂಡದಲ್ಲೂ ಪದಾರ್ಪಣೆ ಮಾಡಿದ್ದರು. ಮೂರು ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು.
ಇಂದು ಆಸ್ಟ್ರೇಲಿಯಾದಿಂದ ಚೆನ್ನೈಗೆ ಬಂದಿದ್ದ ನಟರಾಜನ್ ಸೇಲಂಗೆ ಆಗಮಿಸುತ್ತಿದ್ದಂತೆ ಸಿನಿಮಾ ಹೀರೋಗಳಿಗೆ ಸಿಗುವಂತಹ ಭವ್ಯವಾದ ಸ್ವಾಗತ ಸಿಕ್ಕಿದೆ. ನೂರಾರು ಮಂದಿ ತಮ್ಮ ಊರಿನ ಯುವಕನನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ದಾರಿಯುದ್ದಕ್ಕೂ ಪಟಾಕಿ ಸಿಡಿಸುತ್ತಾ, ಡೋಲು ವಾದ್ಯಗಳ ಮೂಲಕ ಹಬ್ಬದ ರೀತಿಯಲ್ಲಿ ನಟರಾಜನ್ರನ್ನು ಸ್ವಾಗತಿಸಿದ್ದಾರೆ.
ನಟರಾಜನ್ರಿಗೆ ಈ ರೀತಿ ಸ್ವಾಗತ ಕೋರಿರುವ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಸೆಹ್ವಾಗ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲಿ, ಅದಕ್ಕಿಂತಲೂ ಹೆಚ್ಚು. ನಟರಾಜನ್ರನ್ನು ಸೇಲಂನ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದ ಜನ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ:ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಹಾನೆಗೆ ಅದ್ದೂರಿ ಸ್ವಾಗತ