ಬೆಂಗಳೂರು: 2019-20ರ ಆವೃತ್ತಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡಾ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದೆ.
ಟೂರ್ನಿಯುದ್ದಕ್ಕೂ ರನ್ಗಳಿಸಲು ಪರದಾಡಿದ್ದ ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ಬರೋಡಾ ವಿರುದ್ಧ ಎರಡು ಇನ್ನಿಂಗ್ಸ್ನಲ್ಲಿ ಕ್ರೀಸ್ನಲ್ಲಿ ಭದ್ರವಾಗಿ ನೆಲೆನಿಂತು ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಆದರೆ, ಈ ಗೆಲುವಿನ ಹಿಂದೆ ಭಾರತ ತಂಡದ ಲೆಜೆಂಡ್ ರಾಹುಲ್ ದ್ರಾವಿಡ್ ಇದ್ದಾರೆ ಎಂಬು ಗಮನಾರ್ಹ ಸಂಗತಿ.
149 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 14ಕ್ಕೆ ಒಂದು ವಿಕೆಟ್ ಕಳೆದುಕೊಂಡು ನಿರಾಶೆಯನುಭವಿಸಿತ್ತು. ಈ ಸಂದರ್ಭದಲ್ಲಿ ಕಣಕ್ಕಿಳಿದ ನಾಯಕ ಕರುಣ್ ನಾಯರ್ ಔಟಾಗದೇ 71 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಪಂದ್ಯದ ನಂತರ ಮಾತನಾಡಿದ ಕರ್ನಾಟಕ ತಂಡದ ನಾಯಕ ಕರುಣ್ನಾಯರ್ , ಸ್ಪಿನ್ನರ್ಗಳ ಎದುರು ಆಡುವಾಗ ನಾನು ಸ್ಟಂಪ್ಗಳನ್ನು ಹೆಚ್ಚು ಬಿಟ್ಟು ಆಡುತ್ತಿದ್ದರಿಂದ ವಿಕೆಟ್ ಕಳೆದುಕೊಳ್ಳುತ್ತಿದ್ದೆ. ಪಂದ್ಯದ ಮೂರನೇ ದಿನ ದ್ರಾವಿಡ್ ಸರ್ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಟಂಪ್ ಕವರ್ ಮಾಡಿಕೊಂಡು ಬ್ಯಾಟಿಂಗ್ ಮಾಡು ಎಂದು ಸಲಹೆ ನೀಡಿದರು. ಮೂರನೇ ದಿನ ನಾನು ಅವರ ಸಲಹೆ ಪಾಲಿಸಿದ್ದರಿಂದ ಸರಾಗವಾಗಿ ರನ್ಗಳಿಸಿದೆ. ಹಿಂದಿನ ಇನ್ನಿಂಗ್ಸ್ನಲ್ಲಿ ನಾನು ಮಾಡಿದ ತಪ್ಪು ಏನು ಎಂಬುದನ್ನು ಸಹಾ ಅರಿತುಕೊಂಡೆ ಎಂದು ಕರುಣ್ ನಾಯರ್ ತಿಳಿಸಿದ್ದರು.
ಶುಕ್ರವಾರ ಮುಕ್ತಾಯವಾದ ರಣಜಿ ಪಂದ್ಯದಲ್ಲಿ ಬರೋಡಾವನ್ನು ಮೊದಲ ಇನ್ನಿಂಗ್ಸ್ನಲ್ಲಿ 85ಕ್ಕೆ ಆಲೌಟ್ ಮಾಡಿದ್ದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 233 ರನ್ಗಳಿಸಿ 148 ರನ್ಗಳ ಮುನ್ನಡೆ ಸಾಧಿಸಿತ್ತು. ಬರೋಡಾ ಎರಡನೇ ಇನ್ನಿಂಗ್ಸ್ನಲ್ಲಿ 296ಕ್ಕೆ ಆಲೌಟ್ ಆಗಿ 149 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ರಾಜ್ಯ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನವನ್ನು ಖಚಿತಪಡಿಸಿಕೊಂಡಿತು.