ನವದೆಹಲಿ:ಟೀಂ ಇಂಡಿಯಾ ಕ್ರಿಕೆಟ್ ಸಲಹಾ ಸಮಿತಿಗೆ ಭಾರತದ ಲೆಜೆಂಡ್ ಕ್ರಿಕೆಟರ್ ಮಾಜಿ ಆಟಗಾರ ಕಪಿಲ್ ದೇವ್ ಅವರನ್ನು ನೇಮಕ ಮಾಡಲಾಗಿದೆ.
ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿಯೇ ಭಾರತ ತಂಡದ ಮುಖ್ಯ ಕೋಚ್ ಅವರನ್ನ ಆಯ್ಕೆ ಮಾಡಲಿದೆ. ಕಪಿಲ್ ಅಲ್ಲದೆ ಈ ಸಮಿತಿಯಲ್ಲಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಮತ್ತು ಟೀಂ ಇಂಡಿಯಾ ಮಾಜಿ ಕೋಚ್ ಅನ್ಶುಮಾನ್ ಗಾಯಕ್ವಾಡ್ ಈ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಈ ಮೂವರ ಸಮಿತಿಯೇ ಆಗಸ್ಟ್ ತಿಂಗಳ ಮಧ್ಯ ಭಾಗದಲ್ಲಿ ಸಂದರ್ಶನ ನಡೆಸುವ ಮೂಲಕ ಟೀಂ ಇಂಡಿಯಾಕ್ಕೆ ನೂತನ ಕೋಚ್ ಆಯ್ಕೆ ಮಾಡಲಿದೆ ಎಂದು ಬಿಸಿಸಿಐ ನಿರ್ವಾಹಕರ ಸಮಿತಿ (ಸಿಒಎ) ಅಧ್ಯಕ್ಷ ವಿನೋದ್ ರೈ ತಿಳಿಸಿದ್ದಾರೆ.
ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಗುತ್ತಿಗೆ ಅವಧಿ ಮುಗಿದಿದ್ದರೂ, ವೆಸ್ಟ್ ಇಂಡೀಸ್ ಟೂರ್ನಿ ಮುಗಿಯುವ ವರೆಗೆ ಶಾಸ್ತ್ರಿ ಅವರ ಗುತ್ತಿಗೆ ಅವಧಿಯನ್ನ ವಿಸ್ತರಿಸಿ ಬಿಸಿಸಿಐ ಆದೇಶ ನೀಡಿತ್ತು.
ಕಪಿಲ್ ದೇವ್ ನೇತೃತ್ವದ ತಂಡ ಟೀಂ ಇಂಡಿಯಾ ಮುಖ್ಯ ಕೋಚ್ ಅವರನ್ನ ಆಯ್ಕೆ ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ ಅದೇ ಸಮಿತಿಯ ಸದಸ್ಯರಾಗಿರುವ ಮಾಜಿ ಕ್ರಿಕೆಟ್ ಆಟಗಾರರಾದ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಸಚಿನ್ ತೆಂಡೂಲ್ಕರ್ ಪಾತ್ರದ ಬಗ್ಗೆ ವಿವರಣೆ ನೀಡಿಲ್ಲ.