ಮುಂಬೈ: ಇರ್ಪಾನ್ ಪಠಾಣ್ ಆಲ್ರೌಂಡರ್ ಆಟ ಹಾಗೂ ಮುನಾಫ್ ಪಟೇಲ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಭಾರತ ಲೆಜೆಂಡ್ ತಂಡ ಶ್ರೀಲಂಕಾ ಲೆಜೆಂಡ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿದೆ.
ಡಿವೈ ಪಾಟಿಲ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ಲೀಗ್ನ ಮೂರನೇ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ತಿಲಕರತ್ನೆ ದಿಲ್ಶನ್ ನೇತೃತ್ವದ ಶ್ರೀಲಂಕಾ ಲೆಜೆಂಡ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು138 ರನ್ಗಳಿಸಿತ್ತು. ದಿಲ್ಶನ್ 23, ರೊಮೇಶ್ ಕಲುವಿತರಣ 21, ಚಾಮರ ಕಪುಗೆಡೆರ 23 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತಗಳಿಸಲು ನೆರವಾದರು.
ಮುನಾಫ್ ಪಟೇಲ್ 4 ವಿಕೆಟ್, ಸಂಜಯ್ ಬಂಗಾರ್, ಮನ್ಪ್ರೀತ್ ಗೋನಿ, ಇರ್ಫಾನ್ ಪಠಾಣ್ ಹಾಗೂ ಜಹೀರ್ ಖಾನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇನ್ನು 139 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಮೊದಲ ಓವರ್ನಲ್ಲೇ ನಾಯಕ ಸಚಿನ್(0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಇದರ ಬೆನ್ನಲ್ಲೇ ಸೆಹ್ವಾಗ್ ತಮ್ಮ ಅಜಾಗರುಕತೆಯಿಂದ ರನ್ಔಟ್ ಆದರು. ಮತ್ತೆ 3ನೇ ಓವರ್ನಲ್ಲಿ ಚಮಿಂದಾ ಚಾಸ್ ಅವರ ಓವರ್ನಲ್ಲಿ ಯುವರಾಜ್ ಸಿಂಗ್ ಕೂಡ 1 ರನ್ನಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಆದರೆ ಮೊಹಮ್ಮದ್ ಕೈಫ್(46) ಹಾಗೂ ಸಂಜಯ್ ಬಂಗಾರ್(18) 43 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಬಂಗಾರ್ ಔಟಾದ ನಂತರ ಬಂದ ಇರ್ಫಾನ್ ಪಠಾಣ್ ನಿಧಾನ ಆಟಕ್ಕೆ ಮೊರೆ ಹೋದರೂ 18 ಓವರ್ನಲ್ಲಿ ಗೋನಿ ಜೊತೆಗೂಡಿ 26 ರನ್ ಚಚ್ಚುವ ಮೂಲಕ ಆಟದ ಗತಿಯನ್ನೇ ಬದಲಿಸಿದರು. 19ನೇ ಓವರ್ನಲ್ಲಿ ಸತತ 3 ಬೌಂಡರಿ ಸಹಿತ 13 ರನ್ಗಳಿಸಿ ಇನ್ನು 8 ಎಸೆತಗಳಿರುವಂತೆಯೇ ತಂಡವನ್ನು ಗೆಲುವಿನ ದಡಿ ದಾಟಿಸಿದರು.
ಪಠಾಣ್ 37 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 57 ರನ್ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.