ಕರ್ನಾಟಕ

karnataka

By

Published : Oct 12, 2020, 5:02 PM IST

ETV Bharat / sports

ಡೆಲ್ಲಿ ವಿರುದ್ಧ ಸಾಂಘಿಕ ಬೌಲಿಂಗ್ ಮಾಡಿದೆವು: ಸಹವರ್ತಿಗಳನ್ನ ಹೊಗಳಿದ ಕೃನಾಲ್ ಪಾಂಡ್ಯ

ಡೆಲ್ಲಿ ನೀಡಿದ್ದ 163 ರನ್​ಗಳ ಟಾರ್ಗೆಟ್ ​ಅನ್ನು ಮುಂಬೈ ಇಂಡಿಯನ್ಸ್ ತಂಡ ಇನ್ನು 2 ಎಸೆತಗಳು ಉಳಿದಿರುವಂತೆ ತಲುಪಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್​ ಯಾದವ್​ ತಲಾ 53 ರನ್​ಗಳಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೃನಾಲ್ ಪಾಂಡ್ಯ
ಕೃನಾಲ್ ಪಾಂಡ್ಯ

ಅಬುಧಾಬಿ: ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ 5 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ. ಮುಂಬೈ ತಂಡಕ್ಕೆ ಗೆಲುವು ತಂದುಕೊಡಲು ಪ್ರತಿಯೊಬ್ಬ ಬೌಲರ್​ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಎಂದು ಆಲ್​ರೌಂಡರ್​ ಕೃನಾಲ್ ಪಾಂಡ್ಯ ಹೇಳಿದ್ದಾರೆ.

ಡೆಲ್ಲಿ ನೀಡಿದ್ದ 163 ರನ್​ಗಳ ಟಾರ್ಗೆಟ್​ ಅನ್ನು ಮುಂಬೈ ಇಂಡಿಯನ್ಸ್ ತಂಡ ಇನ್ನು 2 ಎಸೆತಗಳು ಉಳಿದಿರುವಂತೆ ತಲುಪಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್​ ಯಾದವ್​ ತಲಾ 53 ರನ್​ಗಳಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೃನಾಲ್ ಪಾಂಡ್ಯ

" ನಾವು ಒಂದು ಘಟಕವಾಗಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ಅದರಲ್ಲೂ ವಿಶೇಷವಾಗಿ ನಾವು ಪವರ್​ ಪ್ಲೇನಲ್ಲಿ ಪ್ರಗತಿ ಸಾಧಿಸಿದ್ದೇವೆ. ನೀವು ಟಿ-20 ಕ್ರಿಕೆಟ್​ನಲ್ಲಿ ಆರಂಭಿಕ ಪ್ರಗತಿ ಸಾಧಿಸಿದಾಗಲೆಲ್ಲ ಎದುರಾಳಿ ತಂಡಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅಲ್ಲದೇ ನಾವು ಡೆತ್​ ಓವರ್​ಗಳಲ್ಲಿ ಕೂಡ ಹೆಚ್ಚಿನ ರನ್ ಬಿಟ್ಟುಕೊಡಲಿಲ್ಲ. ಮಧ್ಯದಲ್ಲಿ ಚಹಾರ್ ಕೂಡ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು. ಈ ರೀತಿ ಪ್ರತಿಯೊಬ್ಬರಿಂದಲೂ ಉತ್ತಮ ಪ್ರದರ್ಶನ ಕಂಡುಬಂದರೆ ಅದು ತಂಡದ ಸಂಪೂರ್ಣ ಪ್ರಯತ್ನವಾಗಿರುತ್ತದೆ " ಎಂದು ಕೃನಾಲ್ ಪಾಂಡ್ಯ ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ನಾವು 140ರ ವೇಗದಲ್ಲಿ ಬೌಲಿಂಗ್ ಮಾಡುವ ಮೂರು ಬೌಲರ್​ಗಳನ್ನು ಪಡೆದಿರುವುದು ಒಂದು ಆಶೀರ್ವಾದವಾಗಿದೆ. ಯಾವುದೇ ತಂಡವಾದರೂ ವೇಗವಾಗಿ ಮತ್ತು ಸ್ವಿಂಗ್ ಬೌಲಿಂಗ್ ಮಾಡಬಲ್ಲ ಬೌಲರ್​ಗಳನ್ನು ಹೊಂದುವುದು ನಿಜವಾಗಿಯೂ ಒಳ್ಳೆಯದು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನನ್ನ ಪ್ರದರ್ಶನ ನನಗೆ ಖುಷಿ ತಂದಿದೆ. ನನ್ನ ಯೋಜನೆಗಳೆಲ್ಲಾ ಕಾರ್ಯಗತಗೊಂಡವು ಎಂದು ಅವರು ಮುಂಬೈ ಬೌಲಿಂಗ್​ ಯೂನಿಟ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃನಾಲ್ ಪಾಂಡ್ಯ ನಿನ್ನೆಯ ಪಂದ್ಯದಲ್ಲಿ 4 ಓವರ್​ಗಳಲ್ಲಿ 26 ರನ್​ ನೀಡಿ 2 ವಿಕೆಟ್​ ಪಡೆದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ರನ್​ಗತಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ABOUT THE AUTHOR

...view details