ತಿರುವನಂತಪುರಂ: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಎರಡನೇ ಟಿ-20 ಪಂದ್ಯಕ್ಕಾಗಿ ಕೇರಳದ ತಿರುವನಂತಪುರಂಗೆ ಆಗಮಿಸಿದ ಲೋಕಲ್ ಬಾಯ್ಗೆ ಗ್ರ್ಯಾಂಡ್ ವೆಲ್ಕಮ್ ಸಿಕ್ಕಿದೆ.
ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದ ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರು ಆಗಮಿಸುತ್ತಿದ್ದಂತೆ ಸಂಜು ಸ್ಯಾಮ್ಸನ್ ಪರ ಘೋಷಣೆ ಕೂಗಿದ್ದಾರೆ. ನಾಯಕ ಕೊಹ್ಲಿ ಸೇರಿದಂತೆ ಇತರೆ ಆಟಗಾರರಿದ್ದರೂ ಯಾರನ್ನೂ ಲೆಕ್ಕಿಸದೆ ಸಂಜೂ.. ಸಂಜೂ ಎಂದು ಸ್ಥಳೀಯ ಆಟಗಾರನಿಗೆ ಚಿಯರ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ರಾಜಸ್ಥಾನ ತಂಡ, ವಿಮಾನ ನಿಲ್ದಾಣದಲ್ಲಿ ಜನರು ಸಂಜು ಪರ ಘೋಷಣೆ ಕೂಗುವ ವಿಡಿಯೋವನ್ನ ಟ್ವೀಟ್ ಮಾಡಿದ್ದು, ಸಂಜು ಸ್ಯಾಮ್ಸನ್ಗೆ ಹೀರೋಗೆ ಸಿಕ್ಕ ಸ್ವಾಗತ ಸಿಕ್ಕಿದೆ ಎಂದಿದೆ. ವಿಮಾನ ನಿಲ್ದಾಣದಿಂದ ಹೊರ ಬಂದ ಸ್ಯಾಮ್ಸನ್ ಬಸ್ ಹತ್ತಿದ ಬಳಿಕ ನಗು ಮೊಗದಿಂದಲೇ ಜನರತ್ತ ಕೈಬೀಸಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ರೂ ಆಡುವ 11ರ ಬಳಗದಲ್ಲಿ ಯುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸಂಜು ಕಾಣಿಸಿಕೊಂಡಿರಲಿಲ್ಲ. ವಿಂಡೀಸ್ ವಿರುದ್ಧ ಮೊದಲ ಪಂದ್ಯದಲ್ಲೂ ಸ್ಯಾಮ್ಸನ್ಗೆ ನಿರಾಸೆಯಾಗಿತ್ತು. ಇಂದಿನ ಪಂದ್ಯದಲ್ಲಾದರೂ ಸ್ಥಳೀಯ ಆಟಗಾರನಿಗೆ ಅವಕಾಶ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.