ಕರ್ನಾಟಕ

karnataka

By

Published : Oct 31, 2019, 5:10 PM IST

ETV Bharat / sports

ಬಾಂಗ್ಲಾದೇಶದ ವಿರುದ್ಧ ಭಾರತ ಗೆದ್ದಿರುವ 3 ರೋಚಕ ಟಿ20 ಪಂದ್ಯಗಳ ಹಿನ್ನೋಟ

ಭಾರತ ಮತ್ತು ಬಾಂಗ್ಲಾದೇಶ ತಂಡಗಳು ನವೆಂಬರ್​ 3 ರಿಂದ ಟಿ20 ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಈ ಹಿಂದೆ ನಡೆದ ಹಲವು ಟಿ-20 ಸರಣಿಗಳಲ್ಲಿ ಭಾರತಕ್ಕೆ ಬಾಂಗ್ಲಾ ಉತ್ತಮ ಪೈಪೋಟಿಯನ್ನೇ ನೀಡಿತ್ತು. ಈಗ ಮತ್ತೊಮ್ಮೆ ಹಣಾಹಣಿಗೆ ಉಭಯ ತಂಡಗಳು ಸಜ್ಜಾಗಿವೆ.

3 ರೋಚಕ ಟಿ20 ಪಂದ್ಯಗಳು

ಮುಂಬೈ: ಬಾಂಗ್ಲಾದೇಶ ಕ್ರಿಕೆಟ್​ ಶಿಶು ಎಂಬ ಹಣೆಪಟ್ಟಿಯನ್ನು ತೆಗೆದುಹಾಕಿ ಸುಮಾರು ವರ್ಷಗಳೇ ಕಳೆದಿವೆ. ಕಳೆದ ಕೆಲವು ವರ್ಷಗಳಿಂದ ವೆಸ್ಟ್​ ಇಂಡೀಸ್​, ಶ್ರೀಲಂಕಾ ತಂಡಗಳನ್ನು ಮೀರಿ ಬೆಳೆದಿರುವ ಬಾಂಗ್ಲಾದೇಶ ತಂಡ ಟೀಂ ಇಂಡಿಯಾಕ್ಕೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿದೆ. ಅಂಕಿ ಅಂಶಗಳ ಪ್ರಕಾರ ಬಾಂಗ್ಲಾದೇಶ ಮತ್ತು ಭಾರತ 8 ಟಿ20 ಪಂದ್ಯಗಳಲ್ಲಿ ಎದುರಾಗಿದ್ದು, ಈ ಎಲ್ಲ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.

2016 ಏಷ್ಯಾಕಪ್​ ಫೈನಲ್​:

2016 ರ ವಿಶ್ವಕಪ್​ಗೂ ಮುನ್ನ ನಡೆದಿದ್ದ ಏಷ್ಯಾ ಕಪ್​ನಲ್ಲೂ ಟಿ20 ಮಾದರಿಯಲ್ಲೇ ಆಡಿಸಲಾಗಿತ್ತು. ಟೂರ್ನಿಯ ಫೈನಲ್​ ಪಂದ್ಯವನ್ನು ಮಳೆಯ ಕಾರಣ 15 ಓವರ್​ಗಳ ಪಂದ್ಯ ಆಯೋಜನೆಯಾಗಿತ್ತು. ಬಾಂಗ್ಲಾದೇಶ ಮೊದಲು ಬ್ಯಾಟಿಂಗ್​ ನಡೆಸಿ 120 ರನ್ ​ಗಳಿಸಿತ್ತು.

121 ರನ್​ಗಳ ಟಾರ್ಗೆಟ್​ ಪಡೆದಿದ್ದ ಭಾರತಕ್ಕೆ 12 ಬಾಲ್​ಗಳಲ್ಲಿ 19 ರನ್​ಗಳ ಅವಶ್ಯಕತೆಯಿತ್ತು. ಆಗತಾನೆ ಬ್ಯಾಟಿಂಗ್​ ನಡೆಸಲು ಬಂದಿದ್ದ ಧೋನಿ 2 ಓವರ್​ಗಳಲ್ಲಿ ಕೇವಲ10 ರನ್​ ನೀಡಿದ್ದ ಆಲ್​ ಅಮೀನ್​ ಹುಸೇನ್​ಗೆ 2 ಸಿಕ್ಸರ್​ ಹಾಗೂ ಒಂದು ಬೌಂಡರಿ ಬಾರಿಸಿ ಬಾಂಗ್ಲಾ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಭಾರತ ಈ ಪಂದ್ಯವನ್ನು ಇನ್ನು 7 ಎಸೆತ ಇರುವಂತೆಯೇ ಗೆದ್ದುಕೊಂಡಿತ್ತು.

2016 ವಿಶ್ವಕಪ್ :

2016ರ ವಿಶ್ವಕಪ್​ನಲ್ಲಿ ಲೀಗ್​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಕೊನೆಯ ಓವರ್​ನಲ್ಲಿ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಹಾರ್ದಿಕ್​ ಪಾಂಡ್ಯ ಎಸೆದ ಮೊದಲ ಎಸೆತದಲ್ಲಿ ಮೊಹಮ್ಮದುಲ್ಲಾ, ಸಿಂಗಲ್​ ತೆಗೆದುಕೊಂಡರು. ನಂತರದ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದ್ದ ರಹೀಮ್​ ಪಂದ್ಯವನ್ನು ಗೆದ್ದೇ ಬಿಟ್ಟೆವು ಎಂಬ ಸಂತೋಷದಲ್ಲಿ ಸಂಭ್ರಮಿಸಿದ್ದರು.

3 ಎಸೆತಗಳಲ್ಲಿ 2 ರನ್​ ಬೇಕಿದ್ದಾಗ ಧವನ್​ಗೆ ಕ್ಯಾಚ್​ ನೀಡಿ ಔಟಾಗಿದ್ದರು. ನಂತರದ ಎಸೆತದಲ್ಲಿ ಮೊಹಮ್ಮದುಲ್ಲಾ ಜಡೇಜಾಗೆ ಕ್ಯಾಚ್​ ನೀಡಿ ಔಟಾಗಿದ್ದರು. ಕೊನೆಯ ಎಸೆತದಲ್ಲಿ 2 ರನ್​ ಅಗತ್ಯವಿತ್ತು. ಆಗ ಶಿವಗತ ಹೋಮ್​ ಕೊನೆಯ ಎಸೆತವನ್ನು ಬೀಟ್​ ಮಾಡಿದ್ದರು. ಧೋನಿ ವೇಗವಾಗಿ ಓಡಿ ರನ್​ಔಟ್​ ಮಾಡುವಲ್ಲಿ ಯಶಸ್ವಿಯಾದರು. ಈ ಪಂದ್ಯವನ್ನು ಭಾರತ ಒಂದು ರನ್​ನಿಂದ ಗೆದ್ದು ಬೀಗಿತ್ತು.

ನಿಡಾಹಸ್​ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಿಂಚಿದ ದಿನೇಶ್ ಕಾರ್ತಿಕ್

ನಿಡಾಹಸ್​ ಟ್ರೋಫಿ ಫೈನಲ್​:
ಇನ್ನು, ಭಾರತ ಬಾಂಗ್ಲಾ ಮತ್ತು ಶ್ರೀಲಂಕಾ ನಡುವೆ ನಡೆದ ನಿಡಹಾಸನ ತ್ರಿಕೋನ ಟಿ-20 ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಿದ್ದವು. ಟೀಂ ಇಂಡಿಯಾದ ಅನುಭವಿ ಆಟಗಾರ ದಿನೇಶ್​ ಕಾರ್ತಿಕ್ ಅವರ ಸ್ಫೋಟಕ ಆಟದ ಫಲವಾಗಿ ಭಾರತ, ಬಾಂಗ್ಲಾ ವಿರುದ್ಧ ಗೆದ್ದು ಬೀಗಿತ್ತು.

ಬಾಂಗ್ಲಾ ನೀಡಿದ್ದ 167 ರನ್​ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಉತ್ತಮ ಪ್ರದರ್ಶನ ತೋರಿದ್ದ ಬಾಂಗ್ಲಾ ಬೌಲರ್ಸ್​ ಭಾರತೀಯ ಆಟಗಾರರ ವೇಗಕ್ಕೆ ಕಡಿವಾಣ ಹಾಕಿದ್ರು. ಕೊನೇ 2 ಓವರ್​ಗಳಲ್ಲಿ ಭಾರತಕ್ಕೆ 34 ರನ್​ ಬೇಕಿತ್ತು. ಆಗತಾನೆ ಬ್ಯಾಟಿಂಗ್ ನಡೆಸಲು ಮೈದಾನಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಮೊದಲ ಬಾಲ್​ನಲ್ಲೇ ಸಿಕ್ಸರ್​ ಸಿಡಿಸಿದ್ರು. 19 ನೇ ಓವರ್​ನಲ್ಲಿ 6 ಚೆಂಡುಗಳನ್ನ ಎದುರಿಸಿದ್ದ ಕಾರ್ತಿಕ್, 2 ಸಿಕ್ಸರ್ 2 ಬೌಡರಿ ಸಹಿತ 22 ರನ್​ ಸಿಡಿಸಿ ಟೀಂ ಇಂಡಿಯಾ ಪಾಳೆಯದಲ್ಲಿ ಗೆಲುವಿನ ಆಸೆ ಜೀವಂತವಾಗಿರಿಸಿದ್ರು.

ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ಗೆಲುವಿಗೆ 5 ರನ್ ಬೇಕಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ದಿನೇಶ್​ ಕಾರ್ತಿಕ್​ ಸಿಕ್ಸರ್​ ಸಿಡಿಸಿ ಟೀಂ ಇಂಡಿಯಾಗೆ ನಿಡಾಹಸ್​ ಟ್ರೋಫಿ ಗೆಲ್ಲಿಸಿಕೊಟ್ಟರು.

ABOUT THE AUTHOR

...view details