ಬೆಳಗಾವಿ:ಟೆಸ್ಟ್ ಸರಣಿ ವಶಪಡಿಸಿಕೊಂಡು ಆತ್ಮವಿಶ್ವಾಸದಲ್ಲಿರುವ ಭಾರತ ಎ ತಂಡವು ಶ್ರೀಲಂಕಾ ಎ ವಿರುದ್ಧ ಗುರುವಾರದಿಂದ ಏಕದಿನ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.
ನೆಟ್ನಲ್ಲಿ ಬೆವರು ಸುರಿಸಿದ ದ್ರಾವಿಡ್ ಪಡೆ ಐದು ಏಕದಿನ ಪಂದ್ಯಗಳ ಪೈಕಿ ಆರಂಭದ ಮೂರು ಪಂದ್ಯಗಳು ಬೆಳಗಾವಿ ಹಾಗೂ ಕೊನೆಯ ಎರಡು ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿವೆ. ಏಕದಿನ ಟೂರ್ನಿಗೆ ಬೆಳಗಾವಿಯ ಆಟೋನಗರದ ಕೆಎಸ್ಸಿಎ ಮೈದಾನ ಸಜ್ಜುಗೊಂಡಿದೆ. ಇದೇ ಮೊದಲ ಬಾರಿಗೆ ಈ ಮೈದಾನದಲ್ಲಿ ಏಕದಿನ ಪಂದ್ಯ ನಡೆಯುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಉಚಿತ ಪ್ರವೇಶ ಒದಗಿಸಲಾಗಿದೆ.
ನೆಟ್ನಲ್ಲಿ ಬೆವರು ಸುರಿಸಿದ ದ್ರಾವಿಡ್ ಬಾಯ್ಸ್:
ಬೆಳಗ್ಗೆಯಿಂದ ಮೈದಾನಕ್ಕಿಳಿದ ಆಟಗಾರರು, ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿ ಬೆವರು ಸುರಿಸಿದರು. ಬ್ಯಾಟಿಂಗ್ ಕೌಶಲ್ಯತೆಗಳ ಬಗ್ಗೆ ದ್ರಾವಿಡ್ ಆಟಗಾರರಿಗೆ ಮಾರ್ಗದರ್ಶನ ನೀಡಿದರು. ಅಲ್ಲದೆ ಸ್ವತಃ ರಾಹುಲ್ ದ್ರಾವಿಡ್ ಆಟಗಾರರಿಗೆ ಬೌಲಿಂಗ್ ಮಾಡಿ ಗಮನ ಸೆಳೆದರು. ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಭಾರತ ತಂಡಕ್ಕೆ ಆಡಿದ ಆಡಗಾರರು ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಭಾರತ ಎ ತಂಡ ಬಲಿಷ್ಠವಾಗಿದ್ದು, ಏಕದಿನ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ನಾಳೆ ಬೆಳಗ್ಗೆ 9ಕ್ಕೆ ಪಂದ್ಯ ಆರಂಭವಾಗಲಿದೆ.
ಸಂಭಾವ್ಯ ತಂಡಗಳು
ಭಾರತ ಎ ತಂಡ: ಇಶಾನ್ ಕಿಶನ್, ಅನಮೋಲ್ ಪ್ರೀತ್ ಸಿಂಗ್, ರುತುರಾಜ್ ಗಾಯಕವಾಡ, ರಿಕ್ಕಿ ಭಾಯ್, ದೀಪಕ್ ಹೂಡಾ, ಶುಭಮನ್ ಗಿಲ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೆ, ತುಷಾರ್ ದೇಶಪಾಂಡೆ, ಸಂದೀಪ ವಾರಿಯರ್, ಈಶಾನ್ ಪೋರೆಲ್, ಪ್ರಶಾಂತ ಚೋಪ್ರಾ.
ಶ್ರೀಲಂಕಾ ಎ ತಂಡ: ಆಶನ್ ಪ್ರಿಯಾಂಜನ್, ಸಂಗೀತ ಕೂರೈ, ನಿರೋಷನ್ ಡಿಕ್ವೆಲ್ವಾ, ದಾಸೂನ್ ಶಂಖಾ, ಶೇಹನ್ ಜಯಸೂರ್ಯ, ಸಡೀರಾ ಸಮರವಿಕ್ರಮ, ಭಾನುಕಾ ರಾಜಪಕ್ಷಾ, ಚಮಿಕಾ ಕರುಣರತ್ನಾ, ಕಾಮಿಂಡು ಮಂಡೀಸ್, ಪತೂಂ ನಿಶಾಂಕ್, ಲಹೀರು ಕುಮಾರ್, ಈಶಾನ್ ಜಯರತ್ನೆ, ಆಸೀತಾ ಫರ್ನಾಂಡೊ, ಅಖಿಲಾ ಧನಂಜಯ, ಲಕ್ಷನ್.