ಕೊಲಂಬೋ: ಭಾರತದ ವಿರುದ್ಧ ನಡೆದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಅಂತರದಲ್ಲಿ ಸೋಲುಕಂಡು ತವರಿಗೆ ಮರಳಿರುವ ಶ್ರೀಲಂಕಾ ಟಿ-20 ತಂಡದ ನಾಯಕ ಲಸಿತ್ ಮಲಿಂಗಾ, ಕ್ಯಾಪ್ಟನ್ಸಿ ಬಿಟ್ಟುಕೊಡಲು ಸಿದ್ಧ ಎಂದಿದ್ದಾರೆ.
ಸರಣಿ ಸೋಲಿನ ಬಗ್ಗೆ ಮಾತನಾಡಿರುವ ಅವರು ನಮ್ಮ ತಂಡ ಟಿ-20 ಪಂದ್ಯಗಳಲ್ಲಿ ಪ್ರಭಾವ ಬೀರುವಷ್ಟು ಉತ್ತಮವಾಗಿಲ್ಲ ಎಂದಿದ್ದಾರೆ. ಶ್ರೀಲಂಕಾದ ಬೌಲರ್ಗಳು ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತ ಬ್ಯಾಟ್ಸ್ಮನ್ಗಳು ಕೂಡ ಪಂದ್ಯವೊಂದರಲ್ಲಿ ಹೋರಾಟದ ಅವಕಾಶಕ್ಕಾಗಿ ಬೇಕಾದ 170 ರನ್ಗಳನ್ನು ಕಲೆಹಾಕುವಲ್ಲಿ ಅಸಮರ್ಥರಾಗಿದ್ದಾರೆ ಎಂದು ಆಟಗಾರರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಕಳೆದ ಒಂದು ವರ್ಷದ ಹಿಂದೆ ತಂಡದ ನಾಯಕನ ಸ್ಥಾನಕ್ಕೆ ಬಂದಾಗ ತಮ್ಮ ತಂಡ ಟಿ-20ಯಲ್ಲಿ ಒಂಭತ್ತನೇ ರ್ಯಾಂಕಿಂಗ್ನಲ್ಲಿತ್ತು. ಈ ಸ್ಥಾನದಲ್ಲಿರುವ ನಮ್ಮಿಂದ ಪ್ರತೀ ಪಂದ್ಯದಲ್ಲೂ ಗೆಲುವನ್ನ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಒಬ್ಬ ನಾಯಕನಾಗಿ ತಂಡದ ಪ್ರದರ್ಶನದ ಜವಾಬ್ದಾರಿಯನ್ನ ಒಪ್ಪಿಕೊಳ್ಳಲು ನಾನು ಸಿದ್ಧನಿದ್ದೇನೆ. ಯಾವುದೇ ಸಮಯದಲ್ಲಾದರೂ ನಾಯಕತ್ವ ತ್ಯಜಿಸಲು ಸಿದ್ಧ ಎಂದು ಮಲಿಂಗಾ ಹೇಳಿದ್ದಾರೆ. ಈ ಹಿಂದೆ 2014ರ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತಂಡವನ್ನ ಮುನ್ನಡೆಸಿದ್ದ ಮಲಿಂಗಾ ಟ್ರೋಫಿಯನ್ನ ಗೆದ್ದುಕೊಟ್ಟಿದ್ದರು. 2016ರ ನಂತರ ತಂಡದಿಂದ ಹೊರಗುಳಿದಿದ್ದ ಅವರು 2018ರ ಡಿಸೆಂಬರ್ನಲ್ಲಿ ಮತ್ತೆ ಟಿ-20 ತಂಡದ ನಾಯಕತ್ವ ಸ್ಥಾನವನ್ನ ವಹಿಸಿಕೊಂಡಿದ್ದರು.