ಮುಂಬೈ:ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಡಿ.ವೈ.ಪಾಟೀಲ್ ಟಿ20 ಟೂರ್ನಿಯಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಮುಂಬೈ ನಡೆಯುತ್ತಿರುವ 16ನೇ ಆವೃತ್ತಿಯ ಟಿ20 ಟೂರ್ನಮೆಂಟ್ನಲ್ಲಿ ರಿಲಾಯನ್ಸ್ 1 ತಂಡದ ಪರ ಆಡುತ್ತಿರುವ ಪಾಂಡ್ಯ ಮಂಗಳವಾರ ಸಿಎಜಿ(Comptroller and Auditor General) ವಿರುದ್ಧ ಭರ್ಜರಿ ಶತಕ ಸಿಡಿಸಿದರು. ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ ಪಾಂಡ್ಯ, ಒಟ್ಟಾರೆ 39 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 8 ಬೌಂಡರಿಗಳ ಸಹಿತ 105ರನ್ ಕಲೆ ಹಾಕಿದ್ದಾರೆ.
ಪಾಂಡ್ಯ ಶತಕ ಹಾಗೂ ಅನ್ಮೋಲ್ಪ್ರೀತ್ ಸಿಂಗ್ ಅವರ 88 ರನ್ಗಳ ನೆರವಿನಿಂದ ರಿಲಾಯನ್ಸ್ 10 ಓವರ್ಗಳಲ್ಲಿ 252 ರನ್ ಪೇರಿಸಿತು. ಇದಕ್ಕುತ್ತರವಾಗಿ ಸಿಎಜಿ 17.2 ಓವರ್ಗಳಲ್ಲಿ 151 ರನ್ಗಳಿಗೆ ಆಲೌಟ್ ಆಗಿದೆ. ಇನ್ನು ಬೌಲಿಂಗ್ನಲ್ಲೂ ಕಮಾಲ್ ಮಾಡಿದ ಹಾರ್ದಿಕ್ 26 ರನ್ ನೀಡಿ 5 ವಿಕೆಟ್ ಪಡೆದು ತಮ್ಮ ತಂಡಕ್ಕೆ 101 ರನ್ಗಳ ಭರ್ಜರಿ ಕೊಡುಗೆ ನೀಡಿ ಜಯ ದಾಖಲಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು.
ಕೆಲವೇ ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿದ್ದು, ಹಾರ್ದಿಕ್ ಪಾಂಡ್ಯ 6 ತಿಂಗಳ ಬಳಿಕ ಟೀಂ ಇಂಡಿಯಾ ಸೇರಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಇವರ ಜೊತೆಗೆ ಶಿಖರ್ ಧವನ್ ಹಾಗೂ ಭುವನೇಶ್ವರ್ ಕುಮಾರ್ ಕೂಡ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಿದ್ದಾರೆ.