ಕರ್ನಾಟಕ

karnataka

By

Published : Mar 30, 2021, 8:49 PM IST

Updated : Mar 30, 2021, 10:51 PM IST

ETV Bharat / sports

IPL 2021: ಡೆಲ್ಲಿ ಕ್ಯಾಪಿಟಲ್ಸ್​ ನಾಯಕನಾಗಿ ಬಡ್ತಿ ಪಡೆದ ರಿಷಭ್‌ ಪಂತ್

2021ರ ಐಪಿಎಲ್​ಗಾಗಿ ಯುವ ವಿಕೆಟ್ ಕೀಪರ್, ಬ್ಯಾಟ್ಸ್​ಮನ್​ ರಿಷಬ್ ಪಂತ್​ ಅವರನ್ನು ನಾಯಕನಾಗಿ ನೇಮಕ ಮಾಡಿ ಮಂಗಳವಾರ ಘೋಷಣೆ ಮಾಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾದ ಪಂತ್​
ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾದ ಪಂತ್​

ನವದೆಹಲಿ:ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್ ರಿಷಭ್ ಪಂತ್​ರನ್ನು ನೂತನ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್​ ಮಂಗಳವಾರ ಘೋಷಿಸಿದೆ. ಶ್ರೇಯಸ್​ ಅಯ್ಯರ್​ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು 14ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನಾಯಕನಾಗಿದ್ದ ರಿಷಭ್ ಪಂತ್​ರನ್ನು ನಾಯಕನಾಗಿ ನೇಮಕ ಮಾಡಲಾಗಿದೆ.

ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಶ್ರೇಯಸ್​ ಅಯ್ಯರ್​ ಭುಜದ ಗಾಯಕ್ಕೆ ತುತ್ತಾಗಿದ್ದರು. ನಂತರ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದ ಅವರಿಗೆ ಸುಮಾರು 5 ರಿಂದ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದರು. ಈ ಕಾರಣ ಡೆಲ್ಲಿ ತಂಡಕ್ಕೆ ನೂತನ ಸಾರಥಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ಎದುರಾಗಿತ್ತು.

ಬಹುಪಾಲು ಕ್ರಿಕೆಟ್​ ತಜ್ಞರು, ಅಭಿಮಾನಿಗಳು ತಂಡದಲ್ಲಿ ಅನುಭವಿಗಳಾಗಿರುವ ರವಿಚಂದ್ರನ್ ಅಶ್ವಿನ್​, ಅಜಿಂಕ್ಯ ರಹಾನೆ, ಧವನ್​ ಮತ್ತು ಸ್ಟೀವ್​ ಸ್ಮಿತ್​ರಂತಹ ಆಟಗಾರರನ್ನು ನಾಯಕನಾಗಿ ನೇಮಿಸಬಹುದು ಎಂದಿದ್ದರು. ಆದರೆ ಫ್ರಾಂಚೈಸಿ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಪಂತ್​ರನ್ನು ಈ ದೊಡ್ಡ ಜವಾಬ್ದಾರಿಗೆ ನೇಮಿಸಿದೆ.

"ಶ್ರೇಯಸ್​ ಅಯ್ಯರ್​ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅಯ್ಯರ್ ನಾಯಕತ್ವದಲ್ಲಿ ನಮ್ಮ ತಂಡವನ್ನು ಎತ್ತರಕ್ಕೆ ಕೊಂಡೊಯ್ದಿದ್ದರು. ಈ ವರ್ಷ ಅವರನ್ನು ತಂಡ ತುಂಬಾ ಮಿಸ್​ ಮಾಡಿಕೊಳ್ಳಲಿದೆ. ಅವರ ಅನುಪಸ್ಥಿತಿಯಲ್ಲಿ ಪಂತ್​ ಈ ವರ್ಷ ತಂಡವನ್ನು ಮುನ್ನಡೆಸಲಿದ್ದಾರೆ. ದುರಾದೃಷ್ಟಕರ ಸಂದರ್ಭದಲ್ಲಿ ಪಂತ್​ಗೆ ಈ ಅವಕಾಶ ದೊರೆತಿದೆ, ಇದು ಅವರು ಕ್ರಿಕೆಟ್​ನಲ್ಲಿ ಬೆಳೆಯಲು ಅದ್ಭುತವಾದ ಅವಕಾಶ. ಈ ಹೊಸ ಜವಾಬ್ದಾರಿಯಲ್ಲಿ ಯಶಸ್ವಿಯಾಗಲಿ ಎಂದು ನಾನು ಅವರಿಗೆ ಶುಭಕೋರುತ್ತೇನೆ" ಎಂದು ಡೆಲ್ಲಿ ಕ್ಯಾಪಿಟಲ್ಸ್ ಅಧ್ಯಕ್ಷ ಮತ್ತು ಸಹ ಮಾಲೀಕ ಕಿರಣ್​ ಕುಮಾರ್ ಗ್ರಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2020-21ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯದ್ಭುತ ಫಾರ್ಮ್​ನಲ್ಲಿರುವ ರಿಷಭ್ ಪಂತ್​ ಪ್ರಸ್ತುತ ಆವೃತ್ತಿಯಲ್ಲಿ ಕೊಹ್ಲಿ, ರೋಹಿತ್​ ಮತ್ತು ರಾಹುಲ್​ ಅಂತಹ ಆಟಗಾರರನ್ನೇ ಹಿಂದಿಕ್ಕಿ ಗರಿಷ್ಠ ರನ್​ ಬಾರಿಸಿರುವ ಬ್ಯಾಟ್ಸ್​ಮನ್ ಆಗಿದ್ದಾರೆ. ಸಮಯಕ್ಕೆ ಅನುಗುಣವಾಗಿ ಬ್ಯಾಟಿಂಗ್ ಮಾಡುವುದನ್ನು ಮೈಗೂಡಿಸಿಕೊಂಡಿರುವುದಕ್ಕೆ ಅವರನ್ನು ಡೆಲ್ಲಿ ನಾಯಕನಾಗಿ ಆಯ್ಕೆಮಾಡಿದೆ.

Last Updated : Mar 30, 2021, 10:51 PM IST

ABOUT THE AUTHOR

...view details