ಮುಂಬೈ: ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ ಮಂಗಲಂ ಅವರ ಮಗ ಆರ್ಯಮನ್ ಬಿರ್ಲಾ ಅನಿರ್ಧಿಷ್ಠಾವಧಿಗೆ ಕ್ರಿಕೆಟ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಸಾವಿರಾರು ಕೋಟಿ ರೂ ಮೌಲ್ಯದ ಆಸ್ತಿಯಿದ್ದರೂ ತನ್ನ ಕಾಲ ಮೇಲೆ ನಿಲ್ಲಲು ಕ್ರಿಕೆಟ್ ಆಯ್ದುಕೊಂಡಿದ್ದ ಆರ್ಯಮನ್ ಬಿರ್ಲಾ 2017ರ ರಣಜಿ ಕ್ರಿಕೆಟ್ ತಂಡ ಹಾಗೂ ಐಪಿಎಲ್ ತಂಡಕ್ಕೆ ಆಯ್ಕೆಯಾಗಿ ದೇಶದಲ್ಲೇ ಭಾರಿ ಸುದ್ದಿಯಾಗಿದ್ದರು. ಕ್ರಿಕೆಟ್ಗಾಗಿ ಕೋಟ್ಯಾಂತರ ರೂಪಾಯಿಯ ಮೌಲ್ಯದ ಬಿಸ್ನೆಸ್ ಬಿಟ್ಟುಬಂದಿದ್ದ ಅವರಿಗೆ ಇದೀಗ ಮಾನಸಿಕ ಒತ್ತಡ ಹೆಚ್ಚಾಗಿದ್ದು ಕ್ರಿಕೆಟ್ನಿಂದ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ.
ನನ್ನ ಮಾನಸಿಕ ಆರೋಗ್ಯದ ದೃಷ್ಠಿಯಿಂದ ಕೆಲವು ದಿನಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ವಿಶ್ರಾಂತಿ ಬಳಿಕ ಹೊಸ ಹುಮ್ಮಸ್ಸಿನಿಂದ ಕ್ರಿಕೆಟ್ಗೆ ಮರಳುತ್ತೇನೆ ಎಂಬ ಆತ್ಮವಿಶ್ವಾಸ ನನಗಿದೆ ಎಂದು ಆರ್ಯಮನ್ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿಶ್ರಾಂತಿ ಪಡೆಯುವ ವಿಚಾರವನ್ನು ತಿಳಿಸಿದ್ದಾರೆ.
ಆರ್ಯಮನ್ ಬಿರ್ಲಾ ಮಧ್ಯಪ್ರದೇಶದ ರಣಜಿ ತಂಡದ ಪರ 9 ರಣಜಿ ಪಂದ್ಯಗಳನ್ನಾಡಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ರನ್ 103 ರನ್ ಆಗಿದೆ.
ಎರಡು ತಿಂಗಳ ಹಿಂದೆ ಆಸ್ಟ್ರೇಲಿಯಾದ ಮ್ಯಾಕ್ಸ್ವೆಲ್ ಕೂಡ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಕ್ರಿಕೆಟ್ನಿಂದ ಅನಿರ್ಧಿಷ್ಟಾವಧಿ ಕಾಲಾವಧಿಗೆ ವಿಶ್ರಾಂತಿ ತೆಗೆದುಕೊಂಡಿದ್ದರು. ನಂತರ ಕ್ರಿಕೆಟ್ಗೆ ಮರಳಿದ ಅವರು ಬಿಗ್ಬ್ಯಾಶ್ನ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಉತ್ತಮವಾಗಿ ಕಮ್ಬ್ಯಾಕ್ ಮಾಡಿದ್ದರು.