ಕರ್ನಾಟಕ

karnataka

By

Published : Aug 11, 2019, 5:00 PM IST

ETV Bharat / sports

ಶಸ್ತ್ರಚಿಕಿತ್ಸೆ ಇಷ್ಟವಿರಲಿಲ್ಲ.. ಆದರೆ, ಅನಿವಾರ್ಯವಾಗಿತ್ತು.. ಕ್ರಿಕೆಟಿಗ ಸುರೇಶ್​​ ರೈನಾ

ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತಾನು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ಕ್ರಿಕೆಟರ್‌ ಸುರೇಶ್‌ ರೈನಾ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕಾರಣ ಏನು ಎಂಬುದರ ಬಗ್ಗೆಯೂ ರೈನಾ ತಿಳಿಸಿದ್ದಾರೆ.

ಸುರೇಶ್​​ ರೈನಾ

ನವದೆಹಲಿ:ಇತ್ತೀಚೆಗೆ ಕ್ರಿಕೆಟರ್‌ ಸುರೇಶ್​ ರೈನಾ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಸಲಿಗೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ರೈನಾಗೆ ಇಷ್ಟವಿರಲಿಲ್ಲವಂತೆ. ಆದರೆ, ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಯಿತು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ರೈನಾ, ಎರಡನೇ ಬಾರಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದು ಒಂದು ಕಠಿಣ ನಿರ್ಧಾರ. ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ವಿಶ್ರಾಂತಿ ಅಗತ್ಯವಾಗಿದ್ದು, ಕೆಲ ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ನಾನು ಶಸ್ತ್ರಚಿಕಿತ್ಸೆಗೆ ಸಿದ್ಧನಿರಲಿಲ್ಲ. ಆದರೆ, ಕೆಲ ವಾರಗಳಿಂದ ನೋವು ಅತಿಯಾದಾಗ ಬೇರೆ ದಾರಿಯಿರಲಿಲ್ಲ. ವಿಶ್ರಾಂತಿ ಬಳಿಕ ಮತ್ತಷ್ಟು ಫಿಟ್​ ಆಗುವುದಲ್ಲದೇ, ಮೈದಾನಕ್ಕಿಳಿದು ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸುತ್ತೇನೆ ಎಂದು ರೈನಾ ಹೇಳಿದ್ದಾರೆ.

ಅಲ್ಲದೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ವೈದ್ಯರು, ಕುಟುಂಬದವರು, ಸ್ನೇಹಿತರು ಸೇರಿದಂತೆ ಎಲ್ಲರ ಹಾರೈಕೆಗೆ ಧನ್ಯವಾದಗಳು. ಈ ಮೊಣಕಾಲು ನೋವು 2007ರಿಂದಲೇ ಕಾಣಿಸಿಕೊಂಡಿತ್ತು. ಆಗ ನಾನು ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ನಂತರ ಕ್ರಿಕೆಟ್​ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಅದಕ್ಕೆ ವೈದ್ಯರು ಹಾಗೂ ತರಬೇತುದಾರರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ನೋವು ಆಗಾಗ ಕಾಣಿಸಿಕೊಂಡಿತ್ತು. ಆದರೂ ಕೂಡ ನೋವಿನ ಪರಿಣಾಮ ಕ್ರಿಕೆಟ್​ ಮೇಲೆ ಆಗದಂತೆ ನೋಡಿಕೊಂಡಿದ್ದೇನೆ. ಮೊಣಕಾಲು ನೋವಿನಲ್ಲೂ ಕೂಡ ನಾನು ಫಿಟ್​ ಆಗಿರಲು ಹಾಗೂ ಉತ್ತಮ ಪ್ರದರ್ಶನ ನೀಡಲು ತರಬೇತುದಾರರ ಸಲಹೆ, ಶ್ರಮವೇ ಕಾರಣ. ಸ್ನಾಯುಗಳು ಬಲವಾಗಿರಲು ಅವರ ಸಹಾಯವೂ ಮುಖ್ಯವಾಗಿತ್ತು ಎಂದು ರೈನಾ ಟ್ವೀಟ್​ನಲ್ಲಿ ಸ್ಮರಿಸಿದ್ದಾರೆ.

ABOUT THE AUTHOR

...view details